ಮಾಸ್ಟರ್ ಪ್ಲಾನ್ ನೊಂದಿಗೆ ಬೆಂಗಳೂರಿಗೆ ಬರ್ತಾ ಇದ್ದಾರೆ ಅಮಿತ್ ಶಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆಗಸ್ಟ್ ನಲ್ಲಿ ಕರ್ನಾಟಕ್ಕೆ ಭೇಟಿ. ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ. ಬಿಜೆಪಿ ನಾಯಕರೊಂದಿಗೆ ಚರ್ಚೆ.
ಬೆಂಗಳೂರು, ಜೂನ್ 24: ರಾಜ್ಯದಲ್ಲಿ ಬದಲಾದ ಕೆಲವಾರು ರಾಜಕೀಯ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಪರವಾಗಿ ಹೊಸತಾದ ಕಾರ್ಯತಂತ್ರಗಳನ್ನು ಹೆಣೆಯುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆಗಸ್ಟ್ ನಲ್ಲಿ ಬೆಂಗಳೂರಿಗೆ ಬರಲಿದ್ದಾರೆ.
ಈಗಾಗಲೇ ಬಿಜೆಪಿ ಹೈಕಮಾಂಡ್ ನಲ್ಲಿ ಕರ್ನಾಟಕಕ್ಕಾಗಿ ಪ್ರತ್ಯೇಕ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದ್ದು ಅದರ ಸಾಧಕ ಬಾಧಕಗಳನ್ನು ಚರ್ಚೆ ಮಾಡಲೆಂದೇ ಶಾ ಅವರು ಬೆಂಗಳೂರಿಗೆ ಬರುತ್ತಿದ್ದಾರೆಂದು ಹೇಳಲಾಗಿದೆ.
ಮೂರು ದಿನಗಳ ಕಾಲ ಬೆಂಗಳೂರಿನಲ್ಲೇ ತಂಗಲಿರುವ ಅವರು, ರಾಜ್ಯ ಬಿಜೆಪಿಯ ಹಿರಿಯ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಕರ್ನಾಟಕದಲ್ಲಿ ಅವಧಿಗೆ ಮುನ್ನ ಎಲೆಕ್ಷನ್ ಗೆ ಈ 5 ಕಾರಣ ಸಾಲದೆ?
ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ, ಒಗ್ಗಟ್ಟು ಮೂಡಿಸುವುದು, ಮುಖಂಡರ ನಡುವೆ ಸಾಮರಸ್ಯ ಹೆಚ್ಚಿಸುವುದು, ಪದಾಕಾರಿಗಳ ಕಾರ್ಯವೈಖರಿ ಚುರುಕುಗೊಳಿಸುವುದು ಇವರ ಭೇಟಿಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಲಾಗಿದ್ದರೂ, ಶಾ ಅವರ ಭೇಟಿಯು ಮತ್ತೇನನ್ನೋ ಸೂಚಿಸುತ್ತಿದೆ ಎಂದೂ ಹೇಳಲಾಗುತ್ತಿದೆ.
ದಲಿತ ಅಭ್ಯರ್ಥಿ ನಿಲ್ಲಿಸಿ ವಿಪಕ್ಷಗಳ ಬಾಯಿಗೆ ಬೀಗ ಜಡಿದ ಮೋದಿ-ಶಾ
ಅಮಿತ್ ಶಾ ಅವರು ಕರ್ನಾಟಕಕ್ಕೆ ಬರಲು ಕಾರಣವೇನು? ಅವರು ಕರ್ನಾಟಕಕ್ಕೆ ಬರುವಂತೆ ಮಾಡಿದ ರಾಜ್ಯದ ಪ್ರಮುಖ ಘಟನಾವಳಿಯೇನು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.
ಮೊದಲ ಹಂತದಲ್ಲಿ ಯಶಸ್ವಿ ಹೆಜ್ಜೆ
ಒಂದು ಹಂತದವರೆಗಿನ ಬಿಜೆಪಿಯ ಕಾರ್ಯತಂತ್ರಗಳನ್ನು ಈಗಾಗಲೇ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. ಅದರನ್ವಯ, ಮೊದಲಿಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಕಂದಕ ಮುಚ್ಚುವಲ್ಲಿ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿತ್ತು.
ಸಾಲ ಮನ್ನಾಕ್ಕೆ ಆಗ್ರಹ
ಯಡಿಯೂರಪ್ಪ ಅವರ ಜನ ಸಂಪರ್ಕ ಅಭಿಯಾನದ ಮೂಲಕ ಬರಪೀಡಿತ ಪ್ರದೇಶಗಳ ರೈತರನ್ನು ಭೇಟಿಯಾಗುವ, ದಲಿತರ ಮನೆಗಳಲ್ಲಿ ಊಟ, ತಿಂಡಿ ಮಾಡುವ ಅಭಿಯಾನ ಶುರುವಾಗಿತ್ತು. ಹೋದಲ್ಲೆಲ್ಲಾ ಸಾಲ ಮನ್ನಾ ಬಗ್ಗೆ ಆಗ್ರಹ, ರಾಜ್ಯ ಸರ್ಕಾರದ ವಿರುದ್ಧ ಟೀಕೆ ಸಲ್ಲುತ್ತಿದ್ದವು.
ರೈತರ ಸಾಲ ಮನ್ನಾ
ಇದಕ್ಕೆ ಪ್ರತ್ಯುತ್ತರವೆಂಬಂತೆ, ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ರೈತರ ಸುಮಾರು 8 ಸಾವಿರ ಕೋಟಿ ರು.ಗಳಷ್ಟು ಕೃಷಿ ಸಾಲ ಮನ್ನಾ ಮಾಡಿದ್ದಾರೆ. ಇದು ಬಿಜೆಪಿ ಪಾಳಯಕ್ಕೆ ಕೊಂಚ ಇರುಸು ಮುರುಸು ಉಂಟಾಗಿದೆ.
ಹೊಸ ಕಾರ್ಯತ್ರಂತ್ರದ ಅವಶ್ಯಕತೆ
ಅಲ್ಲದೆ, ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಸಿದ್ದರಾಮಯ್ಯ ಕೃಷಿ ಸಾಲ ಮನ್ನಾ ಮಾಡುವ ಮೂಲಕ ಜನರ ಪ್ರೀತಿ ಗಳಿಸಿದ ಈ ವೇಳೆಯಲ್ಲೇ ಚುನಾವಣೆಗೆ ಹೋದರೆ ಹೇಗೆ ಎಂಬೆಲ್ಲಾ ಲೆಕ್ಕಾಚಾರಗಳೂ ಬಿಜೆಪಿ ವಲಯವನ್ನು ಆವರಿಸಿವೆ. ಈ ಹಿನ್ನೆಲೆಯಲ್ಲಿ ಕೊಂಚ ದಿಕ್ಕೆಟ್ಟಂತಾಗಿರುವ ರಾಜ್ಯ ಬಿಜೆಪಿಗೆ ನಿರ್ದಿಷ್ಟ ದಿಕ್ಕು ತೋರಿಸಲು ಶಾ ಅವರು ಬರುತ್ತಿದ್ದಾರೆಂದು ಹೇಳಲಾಗಿದೆ.
ಕಾಂಗ್ರೆಸ್ ನಿಂದ ಸಂದೇಶ ರವಾನೆ?
ಇದರ ಜತೆಯಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರೂ, ಯಾವುದೇ ಕ್ಷಣದಲ್ಲಿ ಚುನಾವಣೆ ನಡೆದರೂ ಎದುರಿಸಲು ಸಿದ್ಧ ಎಂದು ಹೇಳಿರುವುದು ಈಗಾಗಲೇ ಕಾಂಗ್ರೆಸ್ ಪಾಳಯದಿಂದ ಜೆಡಿಎಸ್ ಪಾಳಯಕ್ಕೆ ಅವಧಿ ಪೂರ್ವ ಚುನಾವಣೆಯ ಸಂದೇಶ ರವಾನೆಯಾಗಿದೆಯೇ ಎಂಬ ಗುಮಾನಿಯನ್ನೂ ಹುಟ್ಟುಹಾಕಿದೆ. ಈ ಎಲ್ಲಾ ಕಾರಣಗಳಿಂದ ಶಾ ಅವರು ಶೀಘ್ರವೇ ಬೆಂಗಳೂರಿಗೆ ಬರುವುದು ಅನಿವಾರ್ಯ ಎಂದೆನಿಸಿದೆ.
ಬದಲಾದ ಹಸ್ತಲಾಘವ?
ಇತ್ತೀಚೆಗೆ ನಡೆದಿದ್ದ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಗಳಲ್ಲಿನ ಕಾಂಗ್ರೆಸ್ ಗೆಲುವಿನಲ್ಲಿ ಜೆಡಿಎಸ್ ಪಕ್ಷದ ಪರೋಕ್ಷ ಸಹಕಾರವೂ ಇತ್ತು. ಆದರೆ, ಇದೇ ವಾರ ನಡೆದ ಬಿಜೆಪಿ ನಾಯಕ ಡಿ.ಎಚ್. ಶಂಕರ ಮೂರ್ತಿಯವರ ವಿಧಾನ ಪರಿಷತ್ ಅಧ್ಯಕ್ಷರ ಪದಚ್ಯುತಿ ವಿಚಾರದಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಮನವಿಗೆ ಸೊಪ್ಪು ಹಾಕಲಿಲ್ಲ. ಅದರ ಪರಿಣಾಮವಾಗಿ, ಪದಚ್ಯುತಿ ಹಕ್ಕು ಮಂಡನೆ ವಿಚಾರದಲ್ಲಿ ಕಾಂಗ್ರೆಸ್ ಗೆ ಸೋಲಾಯಿತು. ಬಿಜೆಪಿಗೆ ಜೆಡಿಎಸ್ ಈ ಬಾರಿ ನೇರವಾಗಿಯೇ ಸಹಾಯ ಮಾಡಿತು. ಈ ಎಲ್ಲಾ ಬೆಳವಣಿಗೆಗಳು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನ ಪಾತ್ರ ಎಷ್ಟು ನಿರ್ಣಾಯಕ ಹಾಗೂ ಆ ಪಕ್ಷದೊಂದಿಗಿನ ಮೈತ್ರಿ ಎಷ್ಟರ ಮಟ್ಟಿಗೆ ಅನಿವಾರ್ಯ ಎಂಬಿತ್ಯಾದಿ ಚರ್ಚೆಗಳು ಆರಂಭವಾಗಿವೆ. ಈ ಎಲ್ಲಾ ಬೆಳವಣಿಗೆಗಳೇ ಅಮಿತ್ ಶಾ ಅವರನ್ನು ಬೆಂಗಳೂರಿಗೆ ಬರುವಂತೆ ಮಾಡುತ್ತಿವೆ ಎಂದು ಹೇಳಲಾಗಿದೆ.