ಪಿಯುಸಿ ಮೌಲ್ಯಮಾಪನದಲ್ಲಿ ನಿಜಕ್ಕೂ ಲೋಪವಾಗಿದೆಯೇ?
ಬೆಂಗಳೂರು, ಮೇ 22 : ನಮಗೆ ಕಡಿಮೆ ಅಂಕ ಬಂದಿದೆ. ಮೌಲ್ಯ ಮಾಪನದಲ್ಲಿ ಎಡವಟ್ಟಾಗಿದೆ ಎಂದು ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದವರ ನೋಂದಣಿ ಸಂಖ್ಯೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆದಾಗ ಯಾರೂ ಎದುರಿಗೆ ಬರಲಿಲ್ಲ. ಪಿಯುಸಿ ಮೌಲ್ಯಮಾಪನದ ಗೊಂದಲಕ್ಕೆ ಮಲ್ಲೇಶ್ವರಂನ ಪಿಯು ಬೋರ್ಡ್ ಶುಕ್ರವಾರ ಸಾಕ್ಷಿಯಾಗಿ ನಿಂತಿತ್ತು. ಧಿಕ್ಕಾರ ಕೂಗುತ್ತ ಬಂದವರು ಪೆಚ್ಚು ಮೊರೆ ಹಾಕಿಕೊಂಡು ಹೋದ ಪ್ರಸಂಗವೂ ನಡೆಯಿತು.
ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರತಿಭಟನೆ, ಸಮಯ ಕಳಿದಂತೆ ಇದಕ್ಕೆ ಕೈ ಜೋಡಿಸಿದ ಎಬಿವಿಪಿ, ಜೆಡಿಎಸ್ ಮತ್ತು ಎನ್ ಎಸ್ ಯುಐ ಸಂಘಟನೆ ಕಾರ್ಯಕರ್ತರು. ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ಸುರೇಶ್ ಕುಮಾರ್ ಆಮ್ ಆದ್ಮಿ ಪಕ್ಷದ ಮುಖಂಡ ರವಿ ಕೃಷ್ಣ ರೆಡ್ಡಿ ಆಗಮನ. ಬಿಗಿ ಭದ್ರತೆಯಲ್ಲಿದ್ದ ಪಿಯು ಬೋರ್ಡ್ ಒಳಕ್ಕೆ ತೆರಳಿದರು. ಜತೆಗೆ ಆರೋಪ ಮಾಡಿದ್ದ ಪಾಲಕರು ಮತ್ತು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿದ್ದರು.[ಕಿಮ್ಮನೆ ರತ್ನಾಕರ್ ಪತ್ರಿಕಾಗೋಷ್ಠಿ ಮುಖ್ಯಾಂಶಗಳು]
ಆಗಮಿಸಿದ ನಂತರ ಕುಮಾರಸ್ವಾಮಿ ಹೇಳಿದ್ದೇ ಬೇರೆ, ಪಿಯು ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಯಾವುದೇ ಲೋಪದೋಷಗಳಾಗಿಲ್ಲ. ಅನಗತ್ಯವಾಗಿ ಗೊಂದಲ ಉಂಟು ಮಾಡಿ ಸಂಸ್ಥೆಯನ್ನು ಹಾಳು ಮಾಡಬೇಡಿ. ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿರುವ ಎರಡು ಖಾಸಗಿ ವೆಬ್ ಸೈಟ್ ಮೇಲೆ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೌಲ್ಯಮಾಪನ ಸರಿಯಾಗಿದ್ದು ಅಗತ್ಯವಿದ್ದವರು ಪರಿಶೀಲನೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಬೆಳಗ್ಗೆ ಪ್ರತಿಭಟನೆ, ನೂಕು ನುಗ್ಗಾಟ, ಮಧ್ಯಾಹ್ನ ಕುಮಾರಸ್ವಾಮಿ ಮಾತಿನ ನಂತರ ಹಣೆಬರಹ ಎಂದುಕೊಳ್ಳುತ್ತಾ ಬೆಂಗಳೂರು ಒನ್ ಗೆ ಧಾವಿಸಿದ ಪಾಲಕರು ಮತ್ತು ವಿದ್ಯಾರ್ಥಿಗಳು... ಇದು ಪಿಯು ಬೋರ್ಡ್ ಎದುರು ಶುಕ್ರವಾರ ಕಂಡು ಬಂದ ಚಿತ್ರಣ.
ಸರ್ಕಾರದ ವಿರುದ್ಧ ಘೋಷಣೆ
ಪಿಯು ಬೋರ್ಡ್ ಆವರಣಕ್ಕೆ ಬೆಳಗ್ಗೆಯೇ ಧಾವಿಸಿದ ವಿದ್ಯಾರ್ಥಿಗಳು ಸರ್ಕಾರ ಮತ್ತು ಪಿಯು ಬೋರ್ಡ್ ವಿರುದ್ಧ ಘೋಷಣೆ ಕೂಗುತ್ತಿದ್ದರು. ಗುರುವಾರದಿಂದಲೇ ಪ್ರತಿಭಟನೆ ಆರಂಭವಾಗಿತ್ತು. ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹ ಪಡಿಸಿತ್ತಿದ್ದರು.
ಜೋರಾದ ಪ್ರತಿಭಟನೆ
ಅತ್ತ ಪಿಯು ಬೋರ್ಡ್ ಒಳಕ್ಕೆ ತೆರಳಿದ ಕುಮಾರಸ್ವಾಮಿ ಉತ್ತರ ಪತ್ರಿಕೆಗಳ ಮರಿಪರಿಶೀಲನೆಯಲ್ಲಿ ತೊಡಗಿದ್ದರೆ, ಇತ್ತ ಪ್ರತಿಭಟನೆ ಕಾವು ಏರತೊಡಗಿತ್ತು. ಒಮ್ಮೆ ಪಿಯುನ ಬೋರ್ಡ್ ಒಳಕ್ಕೆ ನುಗ್ಗಲು ಯತ್ನಿಸಿದ್ದರು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
ಮಾಧ್ಯಮದವರ ವಾಗ್ವಾದ
ಪೊಲೀಸರು ಮತ್ತು ಮಾಧ್ಯಮದವರ ನಡುವೆಯೂ ವಾಗ್ವಾದ ನಡೆಯಿತು. ಕುಮಾರಸ್ವಾಮಿ ಜತೆಗೆ ಕೆಲವಷ್ಟೇ ಪತ್ರಕರ್ತರನ್ನು ಒಳಕ್ಕೆ ಬಿಟ್ಟಿದ್ದು ಸಮಸ್ಯೆಯಾಗಿ ಪರಿಣಮಿಸಿತ್ತು.
ಬೆಂಗಳೂರು ಒನ್ ನಲ್ಲಿ ಅರ್ಜಿ ಹಾಕಿ
ಫೋಟೋ ಕಾಪಿ ಅಥವಾ ಮರು ಮೌಲ್ಯಮಾಪನದ ಅಗತ್ಯವಿದ್ದರೆ ಬೆಂಗಳೂರು ಒನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಸಿಇಟಿ ಫಲಿತಾಂಶ ಮುಂದಕ್ಕೆ ಹಾಕಿರುವುದರಿಂದ ಕೆಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಗೊಂದಲಕ್ಕೆ ಕಾರಣವಾದ ಖಾಸಗಿ ವೆಬ್ ಸೈಟ್ ಗಳು
ಪಿಯುಸಿ ಫಲಿತಾಂಶವನ್ನು ಅನೇಕ ವೆಬ್ ತಾಣಗಳಲ್ಲಿ ಪ್ರಕಟಿಸಲು ಸರಕಾರ ಅನುಮತಿ ನೀಡಿತ್ತು. ಆದರೆ ಎರಡು ವೆಬ್ ಸೈಟ್ ಗಳು ತಾಂತಯ್ರಿಕ ಗೊಂದಲ ಮಾಡಿಕೊಂಡಿದ್ದು ಇಷ್ಟಲ್ಲಾ ಸಮಸ್ಯೆಗೆ ಕಾರಣವಾಗಿ ಪರಿಣಮಿಸಿದೆ. ವೆಬ್ ತಾಣದಲ್ಲಿ ಒಂದು ಅಂಕಪಟ್ಟಿ ಇದ್ದರೆ, ಕಾಲೇಜಿನಲ್ಲಿ ಒಂದು ಅಂಕ ಡಿಸ್ಲೇ ಮಾಲಾಗಿದೆ. ನೋಂದಣಿ ಸಂಖ್ಯೆಯಲ್ಲೂ ಗೊಂದಲ ಮಾಡಿಕೊಳ್ಳಲಾಗಿದೆ.
ಯಾವುದು ಸತ್ಯ? ಯಾವುದು ಸುಳ್ಳು?
ಪಾಲಕರು ಮತ್ತು ವಿದ್ಯಾರ್ಥಿಗಳು ಹೇಳುವಂತೆ ನಮಗೆ ಅಂಕ ಕಡಿಮೆ ಬಂದಿದೆ. ಎಲ್ಲ ವಿಷಯಗಳಲ್ಲಿ 80 ಕ್ಕಿಂತ ಹೆಚ್ಚು ಅಂಕ ಪಡೆದ ನನಗೆ ಭೌತಶಾಸ್ತ್ರದಲ್ಲಿ 22 ಅಂಕ ಬಂದಿದೆ ಎಂದು ಶಿವಾಜಿನಗರದ ಕಾಲೇಜೊಂದರ ವಿದ್ಯಾರ್ಥಿ ತಾವು ವೆಬ್ ಸೈಟ್ ನಿಂದ ಪಡೆದ ಅಂಕಪಟ್ಟಿ ಪ್ರದರ್ಶನ ಮಾಡಿದರು. ಇದು ಹೇಗೆ ಸಾಧ್ಯ ಎಂಬುದು ಅವರ ನೇರವಾದ ಪ್ರಶ್ನೆ.
6 ಅಂಕ ಬರದಿದ್ದರೆ ಹಣ ವಾಸಾತಿ ಇಲ್ಲ
ಒಂದು ವೇಳೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಮರು ಮೌಲ್ಯಮಾಪನವಾದ ನಂತರ 6 ಅಂಕ ಅಥವಾ ಅಂಕಕ್ಕಿಂತ ಕಡಿಮೆ ಬಂದರೆ ಹಣವನ್ನು ಹಿಂದಕ್ಕೆ ನೀಡಲಾಗುವುದಿಲ್ಲಂತೆ. ಇದು ಸಹ ಗೊಒಂದಲಕ್ಕೆ ಕಾರಣವಾಗಿದೆ.
ನಾನು ರಾಜಿ ಸಂಧಾನಕ್ಕೆ ಬಂದಿಲ್ಲ
ಸುಮ್ಮನೆ ಕೂಗಾಡುವುದಲ್ಲ. ನಾನು ಇಲ್ಲಿ ಸರ್ಕಾರದ ಪರವಾಗಿ ರಾಜಿಸಂಧಾನಕ್ಕೆ ಬಂದಿಲ್ಲ. ನಿಮಗೆ ಅನುಮಾನಗಳಿದ್ದರೆ ನನ್ನ ಜತೆ ಬನ್ನಿ ಉತ್ತರ ಪತ್ರಿಕೆ ತೆಗೆಸಿ ಪರಿಶೀಲನೆ ಮಾಡೋಣ. ನಾನು ಈವರೆಗೆ ನೋಡಿರುವುದರಲ್ಲಿ ತಪ್ಪುಗಳು ಕಂಡು ಬಂದಿಲ್ಲ. ನಿಮಗೆ ತಪ್ಪುಗಳು ಕಂಡು ಬಂದಿದ್ದರೆ ಸಾಬೀತು ಪಡಿಸಿ ಎಂದು ಕುಮಾರಸ್ವಾಮಿ ಹೇಳಿದರು.
ಉಚಿತವಾಗಿ ಮರುಮೌಲ್ಯಮಾಪನ ಮಾಡಿ
ಉತ್ತರ ಪತ್ರಿಕೆಯ ಮರು ಮೌಲ್ಯಮಾಪನವನ್ನು ಸಂಪೂರ್ಣ ಉಚಿತ ಮಾಡಿಕೊಡುವಂತೆ ಒತ್ತಾಯಿಸಿದ್ದೇನೆ. ಕಳೆದ ವರ್ಷ ಉತ್ತರ ಪತ್ರಿಕೆ ನಕಲು ಪಡೆಯಲು 36ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಈ ರೀತಿ ಮಾಡಿದರೆ ಅನುತ್ತೀರ್ಣರಾಗಿರುವ 2ಲಕ್ಷಕ್ಕೂ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುತ್ತಾರೆ. ಇದರಿಂದ ಮತ್ತೆ ಸಮಸ್ಯೆ ಆಗುತ್ತದೆ.
ಸರ್ಕಾರದ ವಿಳಂಬ ಯಾಕೆ?
ಇಷ್ಟು ದೊಟ್ಟ ಪ್ರಮಾಣದಲ್ಲಿ ಗೊಂದಲಗಳು ಎದ್ದಿದ್ದರೂ ಸರ್ಕಾರ ಮತ್ತು ಮುಖ್ಯಮಂತ್ರಿ ಸುಮ್ಮನಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಅಂತೂ ಇಂತು ಪತ್ರಿಕಾಗೋಷ್ಠಿ ನಡೆಸಿದ ಕಿಮ್ಮನೆ ರತ್ನಾಕರ್ ಸಮಸ್ಯೆಗೆ ತೇಪೆ ಹಚ್ಚುವ ಯತ್ನ ನಡೆಸಿದ್ದಾರೆ.
ಮುಂದೇನಾಗಬಹುದು
ಸಿಇಟಿ ಫಲಿತಾಂಶದತ್ತ ಈಗ ಎಲ್ಲರ ಗಮನ ನೆಟ್ಟಿದೆ. ಮರು ಮೌಲ್ಯಮಾಪನ ಇಲ್ಲವೇ ಫೋಟೋ ಕಾಪಿ ಪಡೆದುಕೊಂಡು ಪರಿಶೀಲನೆ ನಡೆಸುವುದೊಂದೆ ಉಳಿದಿರುವ ಮಾರ್ಗ. ಶುಕ್ರವಾರ ಅರ್ಜಿ ಸಲ್ಲಿಸಲು ಬಂದವರು ಪ್ರತಿಭಟನೆಯಿಂದ ಪರಿತಪಿಸಿದರು.
ಮಕ್ಕಳನ್ನು ಕಾಯಬೇಕು
ಫಲಿತಾಂಶ ಹೀಗಾಗಿರುವುದಕ್ಕೆ ನನ್ನ ಮಗ ಡಿಪ್ರೆಶನ್ ಗೆ ಒಳಗಾಗಿದ್ದಾನೆ. ಎಲ್ಲ ವಿಷಯಗಳನ್ನು ಉತ್ತಮ ಅಂಕ ತೆಗೆದುಕೊಂಡವನ ಭೌತಶಾಸ್ತ್ರ ಫೇಲ್ ಆಗಿದೆ. ಅಮ್ಮಾ ನಾನು ಚೆನ್ನಾಗೆ ಬರೆದಿದ್ದೇನೆ ಎಂದು ಹೇಳುತ್ತಾನೆ. ನಾವು ಇಲ್ಲಿ ಪ್ರತಿಭಟನೆಗೆ ಬಂದಿದ್ದರೆ ಅಲ್ಲಿ ಮಗನನ್ನು ನೋಡಿಕೊಳ್ಳಲು ಒಬ್ಬರನ್ನು ಬಿಟ್ಟು ಬಂದಿದ್ದೇವೆ ಎಂದು ರಾಜೀವ್ ನಗರದ ಶಾರದಾ ಅಳಲು ತೋಡಿಕೊಳ್ಳುತ್ತಾರೆ.
ಪರಿಹಾರವೇನು?
ಅನುಮಾನವಿದ್ದರೆ ಫೋಟೋ ಕಾಪಿ ಪಡೆದು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಎಂದು ಪಿಯು ಬೋರ್ಡ್ ಹೇಳುತ್ತಿದ್ದರೆ, ಇಲ್ಲಾ ಇದು ಸರಿ ಇಲ್ಲ ಎಂಬ ವಾದದಲ್ಲೇ ಕೆಲ ಪಾಲಕರು ವಿದ್ಯಾರ್ಥಿಗಳು ಇದ್ದಾರೆ. ತಾರ್ಕಿಕ ಉತ್ತರ ಸಾಧ್ಯವಿಲ್ಲವಾದರೂ ಫೋಟೋ ಕಾಪಿ ನೋಡಿ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವುದೇ ಸದ್ಯಕ್ಕಿರುವ ಪರಿಹಾರ.