ಬೇಸತ್ತ 108 ನೌಕರರಿಂದ ಸಾಮೂಹಿಕ ವಿಷ ಸೇವನೆ ಬೆದರಿಕೆ
ಬೆಂಗಳೂರು, ಮಾರ್ಚ್. 02: ಕಳೆದ 35 ದಿನಗಳಿಂದ ಮುಷ್ಕರ ಮಾಡುತ್ತಿರುವ ರಾಜ್ಯ ಆರೋಗ್ಯ ಕವಚ (108) ನೌಕರರಿಗೆ ಸರ್ಕಾರದ ಕಡೆಯಿಂದ ಯಾವ ಸ್ಪಂದನೆಯೂ ಸಿಕ್ಕಿಲ್ಲ. ಪ್ರತಿಭಟನೆ ನಡೆಸಿ ಬೇಸತ್ತು ಹೋಗಿರುವ ಸಿಬ್ಬಂದಿ ಸಾಮೂಹಿಕ ವಿಷ ಸೇವನೆ ಬೆದರಿಕೆ ಹಾಕಿದ್ದಾರೆ.
ಯಾವ ರಾಜಕೀಯ ಪಕ್ಷಗಳು ನಮ್ಮ ಬೆಂಬಲಕ್ಕೆ ಬಂದಿಲ್ಲ. ಸಾಮಾನ್ಯ ನೌಕರನಿಗೆ ಸಿಗುವ ಬೆಲೆ ಇದೆಯೇ ಎಂದು ಪ್ರಶ್ನೆ ಮಾಡಿರುವ ಸಿಬ್ಬಂದಿ ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.["ಕನ್ನಡ ಸಂಘಟನೆಗಳಿಗೆ ಕನ್ನಡದ ಮಕ್ಕಳು ಕಾಣಿಸುತ್ತಿಲ್ಲವಾ"?]
"ಕನ್ನಡಪರ ಸ೦ಘಟನೆಗಳಿಗೆ ಈ ಕನ್ನಡದ ಮಕ್ಕಳು ಕಾಣಿಸ್ತಾ ಇಲ್ವಾ.... ಆ೦ಧ್ರ ಮೂಲದ ಕ೦ಪನಿ ಜಿವಿಕೆ(ಗುಣುಪತಿ ವೆಂಕಟ ಕೃಷ್ಣ ರೆಡ್ಡಿ) ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡ್ತಾ ಇರೋ ಈ ಕರ್ನಾಟಕದ ಮಕ್ಕಳು ಇಲ್ಲಿನ ಕನ್ನಡಪರ ಸ೦ಘಟನೆಗಳ ಕಣ್ಣಿಗೆ ಕಾಣಿಸ್ತಾ ಇಲ್ವಾ? ಅಥವಾ ಕಾಣಿಸಿದರೂ ಕಾಣಿಸದ೦ತೆ ಯಾವ ಕಾರಣಕ್ಕೆ ಇದ್ದಾರೆಯೋ ಅದೂ ಗೊತ್ತಿಲ್ಲ... ಎಂದು ನೊಂದು ನುಡಿದಿದ್ದವರ ಮಾತಿಗೆ ಇಲ್ಲಿಯವರಗೆ ಯಾರೂ ಬೆಲೆ ಕೊಡದಿರುವುದು ದುರ್ದೈವ.
ಒಟ್ಟು 3,500 ನೌಕರರು
ಜಿವಿಕೆ ಇಎಂಆರ್ಐ ಸಂಸ್ಥೆ ಅಡಿ 3,500 ಚಾಲಕರು ಮತ್ತು ಶುಶ್ರೂಷಕರು ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಪ್ರತಿದಿನ ನಾಲ್ಕು ಗಂಟೆ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡುತ್ತಿಲ್ಲ. 8 ತಿಂಗಳಿನಿಂದ ಹೆಚ್ಚುವರಿ ವೇತನ ನೀಡಿಲ್ಲ. ನೌಕರಿಗೆ ಹೆಚ್ಚುವರಿ ವೇತನ ನೀಡುವಂತೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ, ಸಂಸ್ಥೆ ಮಾತ್ರ ಹಣ ನೀಡದೆ ವಂಚಿಸುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪ.
ಸಂಸ್ಥೆಗೆ ತೋರಿಸುವ ಪ್ರೀತಿ ನಮಗೆ ತೋರಿಸಿ
ನೀವು ಜಿವಿಕೆ ಗೆ ತೋರಿಸೊ ಪ್ರೀತಿಯಲ್ಲಿ ಸ್ವಲ್ಪವಾದರು ನಮ್ಮ ಕಡೆ ತೋರಿಸಿ..ಈಗಲಾದರು ಈ ಬಡ ಕಾರ್ಮಿಕರಿಗೆ ಅನ್ಯಾಯವಾಗಿರೊದನ್ನ ಸರಿಪಡಿಸಿ ತಪ್ಪು ಮಾಡಿರೊರಿಗೆ ಶಿಕ್ಷೆ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ.
ಕನ್ನಡ ಸಂಘಟನೆಗಳು ಸತ್ತಿವೆಯೇ?
ಇನ್ನು ನಮ್ಮ ನಮ್ಮ ಕನ್ನಡ ಪರ ಸ೦ಘಟನೆಗಳು ನಮ್ಮ ಪಾಲಿಗೆ ಇದ್ದರು ಸತ್ತ೦ತೆ ಗೊಚರಿಸುತ್ತಾ ಇವೆ. ಮಾನ್ಯ ಆರೋಗ್ಯ ಸಚಿವರೇ, ಶಾಸಕರೆ ಹಾಗು ಎಮ್ ಎಲ್ ಸಿ ಗಳೆ.... ವಿರೋಧ ಪಕ್ಷದವರೆ, ಆಡಳಿತ ಪಕ್ಷದವರೆ , ಹಾಗು ಎಲ್ಲಾ ಪಕ್ಷದವರೆ ನಮ್ಮ ನೋವನ್ನು ಕೊಂಚ ನೋಡಿ..
ಚುನಾವಣೆ ಮುಗಿಯಿತು
ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಮುಗಿಯಲಿ ಎಂದು ಹೇಳಿದ್ರಿ. ಈಗ ಅದು ಮುಗಿದಿದೆ ಆದರೆ ನಮ್ಮ ನೋವಿಗೆ ಮಾತ್ರ ಮುಲಾಮು ನೀಡಿಲ್ಲ. ಈ ಸಂಕಷ್ಟದಿಂದ ನಮ್ಮನ್ನು ಪಾರು ಮಾಡಿ ಎಂದು ಘೋಷಣೆಕೂಗುತ್ತಿದ್ದಾರೆ.[30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]