ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಿದ ಸರಕಾರ ಸಿದ್ಧತೆ ಮಾಡಿಕೊಂಡಿಲ್ವೆ?
ಬೆಂಗಳೂರು, ಜುಲೈ 14 : ಇಡೀ ರಾಜ್ಯದಲ್ಲಿನ ಎಲ್ಲ ಶಾಲೆಗಳಲ್ಲೂ ಕನ್ನಡವನ್ನು ಒಂದು ವಿಷಯವಾಗಿ ಕಲಿಸಬೇಕು ಎಂದು ಕರ್ನಾಟಕ ಸರಕಾರ ಕಡ್ಡಾಯ ಮಾಡಿದೆ. ಆದರೆ ಯಾವ ಪಠ್ಯಪುಸ್ತಕವನ್ನು ಪ್ರಥಮ, ದ್ವಿತೀಯ ಅಥವಾ ತೃತೀಯ ಭಾಷೆಯ ಕನ್ನಡಕ್ಕಾಗಿ ಬಳಸಬೇಕು ಎಂಬ ಬಗ್ಗೆ ಪ್ರಸ್ತಾಪಿಸಿಲ್ಲ.
ಜತೆಗೆ ಅಗತ್ಯ ಸಂಖ್ಯೆಯ ಪಠ್ಯಪುಸ್ತಕಗಳು ಕೂಡ ಇಲ್ಲ. ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವ ತನ್ವೀರ್ ಸೇಠ್ ಮಾತನಾಡಿ, ಆಗಸ್ಟ್ ನಿಂದ ಐಸಿಎಸ್ ಇ ಮತ್ತು ಸಿಬಿಎಸ್ ಇ ಶಾಲೆಗಳಲ್ಲೂ ಒಂದನೇ ತರಗತಿಯಿಂದ ಕನ್ನಡ ಕಡ್ಡಾಯ ಮಾಡಲಾಗಿದೆ.
ಸನಾತನ ಧರ್ಮ ಉಳಿದರೆ ಮಾತ್ರ ಕನ್ನಡ ಉಳಿಯುತ್ತದೆ
ಆದರೆ. ಇದರ ಅನುಷ್ಠಾನಕ್ಕಾಗಿ ಸರಕಾರದಿಂದ ಸಿದ್ಧತೆಯೇ ಆಗಿಲ್ಲ ಎಂಬುದನ್ನು ತಿಳಿಸಿಲ್ಲ. "ಇವನ್ನೆಲ್ಲ ಕೇಳುವುದಕ್ಕೆ ಚೆನ್ನಾಗಿದೆ. ಆದರೆ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವವರು ಯಾರು? ಪಠ್ಯಪುಸ್ತಕಗಳ ಬಗ್ಗೆ ಎಲ್ಲಿ ಹೇಳಲಾಗಿದೆ, ಪಠ್ಯಪುಸ್ತಕಗಳು ಎಲ್ಲಿವೆ? ಅವುಗಳನ್ನು ಯಾರು ವಿವರಿಸಿದ್ದಾರೆ?ಈ ಬಗ್ಗೆ ಯಾರೂ ಯೋಚಿಸಿಲ್ಲ" ಎಂದಿದ್ದಾರೆ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್.
ಇನ್ನೂ ಮುಂದುವರಿದು, ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ಹಲವು ಜಿಲ್ಲೆಗಳಲ್ಲಿ ಇನ್ನೂ ಪುಸ್ತಕಗಳು ಸಿಕ್ಕಿಲ್ಲ. ಎಷ್ಟು ಪುಸ್ತಕಗಳು ಬೇಕಾಗುತ್ತವೆ ಎಂಬ ಬಗ್ಗೆ ಕೂಡ ಸರಕಾರಕ್ಕೆ ಅಂದಾಜಿಲ್ಲ ಎಂದು ಅವರು ಹೇಳಿದ್ದಾರೆ.
ಎಷ್ಟು ಪುಸ್ತಕ ಬೇಕೆಂಬುದು ಗೊತ್ತಿಲ್ಲ
ಪಠ್ಯಪುಸ್ತಕದ ಬಗ್ಗೆ ವಿವರಣೆ ನೀಡುವುದಕ್ಕೆ ಸರಕಾರ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಇಂಡೆಂಟ್ ಕರೆಯಬೇಕು. ಆದರೆ ಶಾಲಾ ಆಡಳಿತ ಮಂಡಳಿಗಳು ಹೇಳುವ ಪ್ರಕಾರ ಅಂಥ ಯಾವ ಕ್ರಮ ತೆಗೆದುಕೊಂಡಿಲ್ಲ. ಎಷ್ಟು ಪುಸ್ತಕ ಬೇಕು ಎಂಬುದೇ ಸರಕಾರಕ್ಕೆ ಗೊತ್ತಿಲ್ಲ.
ಸಿದ್ಧವಾಗಿದೆಯಾ ಸರಕಾರ?
ರಾಜ್ಯ ಸರಕಾರ ತಂದ ನೀತಿಯನ್ನು ಯಾವ ಶಾಲೆಯೂ ಧಿಕ್ಕರಿಸಿಲ್ಲ. ಕನ್ನಡವನ್ನು ಕಡ್ಡಾಯ ಭಾಷೆಯಾಗಿ ಬೋಧಿಸಲು ಸಹ ಆಕ್ಷೇಪವಿಲ್ಲ. ಆದರೆ ಸರಿಯಾದ ಸಿದ್ಧತೆ ಇಲ್ಲದೆ ನಿಯಮ ಜಾರಿ ಮಾಡಿ ಅನ್ನೋದು ಉತ್ತಮ ಕ್ರಮ ಅಲ್ಲ. ದ್ವಿತೀಯ ಹಾಗೂ ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕದ ಮಾಹಿತಿಯಿಲ್ಲ. ಅವು ಮುದ್ರಣವಾಗಿದೆಯಾ? ಈ ಶೈಕ್ಷಣಿಕ ವರ್ಷಕ್ಕೆ ಸಿದ್ಧವಿದೆಯೇ? ಈ ಎಲ್ಲ ಪ್ರಶ್ನೆಗಳು ಮುಖ್ಯ ಎನ್ನುತ್ತಾರೆ ಶಶಿಕುಮಾರ್.
ಮಂಡ್ಯದಲ್ಲಿ ಕನ್ನಡ ಪಠ್ಯಪುಸ್ತಕ ಸಿಕ್ಕಿಲ್ಲ
ರಾಜ್ಯ ಸರಕಾರಿ ಶಾಲೆಗಳಿಗೆ ಹಲವು ಜಿಲ್ಲೆಗಳಲ್ಲಿ ಇನ್ನೂ ಕನ್ನಡ ಪಠ್ಯಪುಸ್ತಕ ತಲುಪಿಲ್ಲ. ಇನ್ನು ಸಿಬಿಎಸ್ ಇ ಹಾಗೂ ಐಸಿಎಸ್ ಇ ಶಾಲೆಗಳಿಗೆ ಯಾವಾಗ ಕಳಿಸ್ತಾರೆ? ಉದಾಹರಣೆಗೆ ಮಂಡ್ಯದಲ್ಲಿ ರಾಜ್ಯದ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೆ ಒಂದರಿಂದ ಐದನೇ ತರಗತಿವರೆಗೆ ಕನ್ನಡ ಪಠ್ಯಪುಸ್ತಕ ಸಿಕ್ಕಿಲ್ಲ.
ಬೆಂಗಳೂರು, ಕೊಡಗು ಜಿಲ್ಲೆಯಲ್ಲಿ ಕೊರತೆ
ಕೊಡಗು ಜಿಲ್ಲೆಯಲ್ಲಿ ಎರಡು ಮತ್ತು ನಾಲ್ಕನೇ ತರಗತಿಯ ಕನ್ನಡ ಪಠ್ಯಪುಸ್ತಕ ಬಂದಿಲ್ಲ. ಇನ್ನು ಬೆಂಗಳೂರಿನ ಕೆಲವು ಶಾಲೆಗಳಲ್ಲಿ ಎರಡು, ನಾಲ್ಕು ಹಾಗೂ ಏಳನೇ ತರಗತಿಗೆ ಪ್ರಥಮ ಭಾಷೆ ಕನ್ನಡ ಮತ್ತು ಎಂಟು ಹಾಗೂ ಐದನೇ ತರಗತಿಗೆ ದ್ವಿತೀಯ ಭಾಷೆ ಕನ್ನಡ ಪಠ್ಯಪುಸ್ತಕಕ್ಕೆ ಕೊರತೆಯಿದೆ.
ಕಾನೂನು ಸಮಸ್ಯೆ
ನಾವೀಗಾಗಲೇ ಕನ್ನಡವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಂಡವರಿಗೆ ಬೋಧಿಸುತ್ತಿದ್ದೇವೆ. ಅದರೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯ ಮಾಡಿದರೆ ಹೊರ ರಾಜ್ಯಗಳಿಂದ ವರ್ಗಾವಣೆ ಆಗಿ ಬರುವವರಿಗೆ ತುಂಬ ತೊಂದರೆಯಾಗುತ್ತದೆ. ಜತೆಗೆ ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ವಿದ್ಯಾರ್ಥಿಗಳು ಭಾಷೆ ಆಯ್ಕೆ ಮಾಡಿಕೊಂಡಿದ್ದಾರೆ.
ಇದು ಕಾನೂನು ಸಮಸ್ಯೆ ಆಗುತ್ತದೆ. ಕೇಂದ್ರೀಯ ಮಂಡಳಿ ಈ ಬಗ್ಗೆ ಸುತ್ತೋಲೆ ಅಥವಾ ನೋಟಿಸ್ ನೀಡಿ, ರಾಜ್ಯದ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ತೆಗೆದುಕೊಳ್ಳಲು ತಿಳಿಸಬೇಕು. ಆ ವರೆಗೆ ಬದಲಾವಣೆ ಸಾಧ್ಯವಿಲ್ಲ ಎನ್ನುತ್ತಾರೆ ಕರ್ನಾಟಕದಲ್ಲಿನ ಸಿಬಿಎಸ್ ಇ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸನ್ ಮುತ್ತುಸ್ವಾಮಿ