2016ರಲ್ಲಿ ಭಾರತದ ಅತ್ಯುತ್ತಮ ಚಿತ್ರ ಹಿರಿಮೆಗೆ 'ತಿಥಿ' ಚಿತ್ರ ಭಾಜನ
ಈಗಾಗಲೇ ಹಲವಾರು ಚಲನ ಚಿತ್ರೋತ್ಸವಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದ ತಿಥಿ ಚಿತ್ರದ ಹಿರಿಮೆಗೆ ಈಗ ಮತ್ತೊಂದು ಗರಿ ಬಂದು ಸೇರಿಕೊಂಡಿದೆ.
ನವದೆಹಲಿ, ಫೆಬ್ರವರಿ 21: ಭಾರತದ ನಾನಾ ರಾಜ್ಯಗಳ ಖ್ಯಾತ ಸಿನಿಮಾ ವಿಮರ್ಶಕರು ಸೇರಿಕೊಂಡು ರೂಪಿಸಿರುವ 'ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆಫ್ ಇಂಡಿಯಾ' ವತಿಯಿಂದ ನೀಡಲಾಗುವ ವರ್ಷದ ಶ್ರೇಷ್ಠ ಚಿತ್ರ ಪ್ರಶಸ್ತಿಗೆ ಕನ್ನಡದ 'ತಿಥಿ' ಸಿನಿಮಾ ಭಾಜನವಾಗಿದೆ.
ರಾಮರೆಡ್ಡಿಯವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಆದರೆ, ಅದಕ್ಕೂ ಮೊದಲು ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಅನೇಕ ಪ್ರಶಸ್ತಿ, ಮೆಚ್ಚುಗೆಗಳನ್ನು ಪಡೆದ ಹೆಗ್ಗಳಿಗೆ ಈ ಚಿತ್ರಕ್ಕಿದೆ. ಬಾಲಿವುಡ್ ನ ಆಮೀರ್ ಖಾನ್ ಅವರಂಥ ನಟರೂ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.[ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]
ವಿಮರ್ಶಕರ ಪ್ರಶಸ್ತಿ ಬಂದಿರುವ ಬಗ್ಗೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿರುವ ನಿರ್ದೇಶಕ ರಾಮ ರೆಡ್ಡಿ, ''ಪ್ರಶಸ್ತಿಯಿಂದ ಖುಷಿ ಕೊಟ್ಟಿದೆ. ಮುಂದೆ ತಿಥಿ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇನೆ '' ಎಂದು ತಿಳಿಸಿದ್ದಾರೆ.
ಕಲಾವಿದರಲ್ಲದ ಸಾಮಾನ್ಯ ಜನರ ಅಭಿನಯವುಳ್ಳ ಚಿತ್ರವೆಂಬ ವಿಶೇಷತೆಯೊಂದಿಗೆ ತೆರೆ ಕಂಡಿದ್ದ ತಿಥಿ ಚಿತ್ರ, ಇಂದಿನ ಗ್ರಾಮೀಣ ಬದುಕಿನ ಅನಾವರಣಗೊಳಿಸುವ ಪ್ರಯತ್ನ ಮಾಡಿತ್ತು. ಅದರ ಜತೆಗೇ, ಉತ್ತಮ ಕಥೆ, ನಿರೂಪಣೆಯೊಂದಿಗೆ ಮನೆಮಾತಾಗಿತ್ತು.