ಕೋಲಾರದಲ್ಲಿ ನೀರಿನ ಹೋರಾಟಕ್ಕೆ ಕನ್ನಡ ನಟನಟಿಯರ ದಂಡು
ಶಾಶ್ವತ ನೀರಿಗಾಗಿ ಆಗ್ರಹಿಸಿ ಇದೇ ಭಾನುವಾರ ಕೋಲಾರದಲ್ಲಿ ಚಿತ್ರರಂಗ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲಿದೆ. ಭಾನುವಾರ, ಜೂನ್ 12ರಿಂದ ಆರಂಭವಾಗಲಿರೋ ಅನಿರ್ದಿಷ್ಟಾವಧಿ ಪ್ರತಿಭಟನೆಯ ಮೊದಲನೆಯ ದಿನ ಚಿತ್ರರಂಗದ ತಾರೆಯರು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೊಂದಿಗೆ ಭಾಗವಹಿಸಲಿದ್ದಾರೆ.
ಇತ್ತೀಚೆಗೆ ಕಳಸಾ ಬಂಡೂರಿ ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದ ಚಿತ್ರರಂಗ ಅಲ್ಲಿಗೆ ಧಾವಿಸಿ ರೈತರ ಪರ ನಾವಿದ್ದೇವೆ ಅಂತ ದನಿಯೆತ್ತಿತ್ತು. ಈಗ ಚಿತ್ರರಂಗ ನೀರಿಗಾಗಿ ಪರದಾಡುತ್ತಿರುವ ಬಯಲುಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರಗಳ ಸಮಸ್ಯೆಗಳನ್ನು ಸರಕಾರ ಬೇಗ ಬಗೆಹರಿಸುವಂತೆ ಮನವಿ ಮಾಡಲಿದೆ.
ಆದರೆ ಈ ಪ್ರತಿಭಟನೆಗೆ ಚಿತ್ರರಂಗದ ತಾರೆಯರು ಎಷ್ಟರಮಟ್ಟಿಗೆ ಸಾಥ್ ಕೊಡುತ್ತಾರೆ ಎನ್ನುವುದರ ಮೇಲೆ ಪ್ರತಿಭಟನೆಯ ಯಶಸ್ಸು ನಿಂತಿದೆ. ಬ್ಯಾನರ್ ನಲ್ಲಿ ರಾಕ್ ಲೈನ್ ವೆಂಕಟೇಶ್, ಸಾರಾ ಗೋವಿಂದು, ಸುದೀಪ್, ದರ್ಶನ್, ಉಪೇಂದ್ರ, ಯಶ್, ರವಿಚಂದ್ರನ್, ಜಗ್ಗೇಶ್, ಲೀಲಾವತಿ, ಜಯಂತಿ, ರಮ್ಯಾ, ಮಾಲಾಶ್ರೀ, ಭಾವನಾ, ಸಂಜನಾ ಹೆಸರುಗಳು ರಾರಾಜಿಸುತ್ತಿವೆ. [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]
ಇವರೆಲ್ಲ ಜೊತೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿನೋದ್ ರಾಜ್, ದುನಿಯಾ ವಿಜಯ್, ಗಣೇಶ್, ರಾಗಿಣಿ ದ್ವಿವೇದಿ, ತಾರಾ, ಶ್ರುತಿ ಮುಂತಾದವರು ಚಿತ್ರಗಳೂ ಕಂಗೊಳಿಸುತ್ತಿವೆ. ಇವರೆಲ್ಲರೂ ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಷ್ಟಪಡುವ ರೈತರಿಗಾಗಿ ನಾವಿದ್ದೇವೆ ಅಂತ ಮಾತಿನಲ್ಲಿ ಹೇಳುವ ತಾರೆಯರು ಅದೇ ಇಚ್ಛಾಶಕ್ತಿಯನ್ನು ಕೆಲಸದಲ್ಲಿ ತೋರ್ಪಡಿಸಲಿ. ರಾಜ್ಯ ಸರಕಾರಕ್ಕೆ ಪಟ್ಟು ಬಿಡದಂತೆ ಮನವಿ ಸಲ್ಲಿಸಿ ಪರಿಹಾರ ಸಿಗುವಂತೆ ಮಾಡುವ ಬದ್ಧತೆ ತೋರಿ ರೈತರ ಬಗೆಗಿನ ನಿಜವಾದ ಕಾಳಜಿಯನ್ನು ತೋರಿಸಲಿ ಎನ್ನುವುದು ರೈತರ ಅಭಿಪ್ರಾಯ.
ಜೂನ್ 12, ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರ ಪ್ರವಾಸಿ ಮಂದಿರದಿಂದ ಕನ್ನಡ ಚಿತ್ರೋದ್ಯಮದ ಗಣ್ಯರಿಂದ ಜಾಥಾ ನಡೆಯಲಿದೆ. 11 ಗಂಟೆಗೆ ಕಾಲೇಜು ವೃತ್ತದಲ್ಲಿ ಬೃಹತ್ ಬಹಿರಂಗ ಸಭೆ ಜರುಗಲಿದೆ. ನೋಡೋಣ ಯಾರ್ಯಾರು ಬರ್ತಾರೆ ಅಂತ. [ದಾಹ ತೀರಿಸಿ ಉತ್ತರ ಕರ್ನಾಟಕ ಜನತೆಯ ಹೃದಯ ಗೆದ್ದ ಯಶ್]