ಅಬ್ದುಲ್ ಕಲಾಂಗೆ ಕನ್ನಡ ದಿನಪತ್ರಿಕೆಗಳ ಸಲಾಂ
ಬೆಂಗಳೂರು, ಜು. 28: ಭಾರತರತ್ನ, ಕ್ಷಿಪಣಿ ಮಾನವ ಅಬ್ದುಲ್ ಕಲಾಂ ವಿಧಿವಶರಾಗಿದ್ದಾರೆ. ಅವರ ಸಾವಿನ ಸುದ್ದಿಯನ್ನು ಪ್ರಕಟಿಸುವುದರ ಜತೆಗೆ ದಿನಪತ್ರಿಕೆಗಳು, ಟಿವಿ ವಾಹಿನಿಗಳು, ಅಂತರ್ಜಾಲ ಮಾಧ್ಯಮಗಳು ನುಡಿನಮನ ಸಲ್ಲಿಸಿವೆ.
ದಿನಪತ್ರಿಕೆಗಳಿ ಕಲಾಂಗೆ ನಮನ, ಕಲಾಂಗೆ ಕೊನೆ ಸಲಾಂ ಎಂಬ ತಲೆಬರಹಗಳ ಮೂಲಕ ವಂದನೆ ಸಲ್ಲಿಸಿವೆ. ಉಪನ್ಯಾಸ ನೀಡುತ್ತಲೇ ಕುಸಿದು ಬಿದ್ದ ಕಲಾಂ ಸೋಮವಾರ ಸಂಜೆ ದೇಹ ತ್ಯಾಗ ಮಾಡಿದ್ದರು.[ಅಬ್ದುಲ್ ಕಲಾಂ ನಮ್ಮ ಸ್ಪೂರ್ತಿ, ನಮ್ಮ ಹೆಮ್ಮೆ: ಕ್ರಿಕೆಟರ್ಸ್]
ಕಲಾಂ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪದ ಮಹಾಪೂರವೇ ಹರಿದು ಬರುತ್ತಿದೆ. ದೇಶ ಕಂಡ ಅಪ್ರತಿಮ ವಿಜ್ಞಾನಿಯ ಕನಸುಗಳನ್ನು ನನಸಾಗಿಸೋಣ, ಕಲಾಂ ಅವರ ವಿಷನ್ 2020ರ ಸಾಕಾರಕ್ಕೆ ಇಂದಿನಿಂದಲೇ ಪ್ರಯತ್ನ ಮಾಡೋಣ ಎಂಬ ಆಶಯಗಳು ವ್ಯಕ್ತವಾಗುತ್ತಿವೆ.[ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]
ವೀಣಾವಾದನ, ಸಂಗೀತ, ಕನಸು ಹೀಗೆ ಸದಭಿರುಚಿಯ ಕಲೆ ಅರಿತಿದ್ದ ನಗುಮುಖದ ಕಲಾಂ ಅವರು ಮಕ್ಕಳ ಅಚ್ಚುಮೆಚ್ಚಿನ ಅಜ್ಜನಾಗಿ ಸದಾ ಸ್ಮರಣೀಯರಾಗಿ ಅಜರಾಮರವಾಗಿರುತ್ತಾರೆ. ದಿನಪತ್ರಿಕೆಗಳು ಕಲಾಂ ಅವರಿಗೆ ತಮ್ಮ ತಲೆಬರಹಗಳ ಮೂಲಕ ವಂದನೆ ಸಲ್ಲಿಸಿದವು ಎಂಬುದನ್ನು ನೋಡಿಕೊಂಡು ಬರೋಣ...
ದೇಶದ ಸಲಾಂ
ಭಾರತರತ್ನರ ಸಾಧನೆಯನ್ನು ವಿವರಿಸುತ್ತಲೇ ಸಾವಿನ ಸುದ್ದಿ ಹೇಳಿದ ಉದಯವಾಣಿ 'ದೇಶದ ಸಲಾಂ' ಎಂಬ ತಲೆಬರಹ ನೀಡಿದೆ. ಅಲ್ಲದೇ ತನ್ನ ಮಾಸ್ಟರ್ ಹೆಡ್ ನ್ನು ಕಲಾಂ ಅವರ ಸುದ್ದಿಯ ನಂತರ ಕೆಳಭಾಗದಲ್ಲಿ ಪ್ರಕಟಿಸಿ ನಮನ ಸಲ್ಲಿಕೆ ಮಾಡಿದೆ.
ಕಲಾಂಗೆ ಸಲಾಂ
ಮಿಸೈಲ್ ಮ್ಯಾನ್ ಭವ್ಯ ಭಾರತದ ಕನಸುಗಾರ ಇನ್ನಿಲ್ಲ ಎಂದು ಮುಖಪುಟದಲ್ಲಿ ಕಪ್ಪುವರ್ಣದೊಂದಿಗೆ ಕಲಾಂ ಸಾವಿನ ಸುದ್ದಿಯನ್ನು ಪ್ರಕಟ ಮಾಡಿದ ವಿಜಯವಾಣಿ ನಮನ ಸಲ್ಲಿಸಿತು. 'ಕಲಾಂಗೆ ಸಲಾಂ' ಎಂಬ ತಲೆಬರಹ ನೀಡಿತು.
ಕಲಾಂಗೆ ಕೊನೆ ಸಲಾಂ
ಯುವಜನತೆಯಲ್ಲಿ ಕನಸುಗಳನ್ನು ಬಿತ್ತಿದ ಕನಸುಗಾರ ಕಲಾಂ ಎಂದು ಹೇಳಿದ ಕನ್ನಡಪ್ರಭ ಅವರ ಹುಟ್ಟು ಮತ್ತು ಸಾವಿನ ದಿನಾಂಕ ಪ್ರಕಟಿಸಿ 'ಕಲಾಂಗೆ ಕೊನೆ ಸಲಾಂ' ಎಂಬ ಶೀರ್ಷಿಕೆ ನೀಡಿದೆ.
ವಿಜಯ ಕರ್ನಾಟಕ
'ಪಾಠ ಮಾಡುತ್ತಲೇ ವಿದಾಯ ಹೇಳಿದ ಕಲಾಂ ಮೇಸ್ಟ್ರು' ಎಂದು ಹೇಳಿದ ವಿಜಯ ಕರ್ನಾಟಕ ಅವರ ಸಾವನ್ನು ಒಂದೇ ಲೈನ್ ನಲ್ಲಿ ಹೇಳುವ ಯತ್ನ ಮಾಡಿತು.
ಜನಗಣಮನ ನಾಯಕನಿಗೆ ಸಲಾಂ
ದೇಶಾದ್ಯಂತ ಕಲಾಂ ಸಾವಿನ ನಂತರ ಏನಾಗುತ್ತಿದೆ ಎಂಬ ಎಲ್ಲ ವಿವರಗಳನ್ನು ಮುಖಪುಟಕ್ಕೆ ತಂದ ಸಂಯುಕ್ತ ಕರ್ನಾಟಕ 'ಜನಗಣಮನ ನಾಯಕನಿಗೆ ಸಲಾಂ' ಎಂಬ ತಲೆಬರಹ ನೀಡಿತು.
ಭಾರತರತ್ನ ಅಬ್ದುಲ್ ಕಲಾಂ ಇನ್ನಿಲ್ಲ
ಕಲಾಂ ಜೀವನದ ಅನೇಕ ಮಹತ್ವದ ಅಂಶಗಳನ್ನು ಮುಖಪುಟದಲ್ಲೇ ಪ್ರಕಟಿಸಿ 'ಭಾರತರತ್ನ ಅಬ್ದುಲ್ ಕಲಾಂ ಇನ್ನಿಲ್ಲ; ಎಂಬ ಶೀರ್ಷಿಕೆ ಮೂಲಕ ಹೊಸದಿಗಂತ ನಮನ ಸಲ್ಲಿಸಿತು.
ಕಲಾಂ-ವಿದಾಯದ ಸಲಾಂ
ಕಲಾಂ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳನ್ನು ಬಳಸಿಕೊಂಡ ವಾರ್ತಾ ಭಾರತಿ 'ಕಲಾಂ-ವಿದಾಯದ ಸಲಾಂ' ಎಂಬ ಶೀರ್ಷಿಕೆಯಡಿ ಸಾವಿನ ಸುದ್ದಿ ಪ್ರಕಟ ಮಾಡಿತು.