ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸಲು ರಾಹುಲ್ ಗೆ ಒತ್ತಾಯ
ಹಾವೇರಿ, ಅಕ್ಟೋಬರ್, 10 : ಕಳಸಾ ಬಂಡೂರಿ ಯೋಜನಾ ಸಮಿತಿ ಸದಸ್ಯರು ಅಕ್ಟೋಬರ್ 10ರ ಶನಿವಾರ ಹಾವೇರಿಗೆ ಆಗಮಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಕಳಸಾ ಬಂಡೂರಿ ನಾಲಾ ಯೋಜನೆಯ ಪೂರ್ವ-ಪರ ವಿಚಾರಗಳನ್ನು ಚರ್ಚೆ ನಡೆಸಿದರು.
ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಳಿಸಿ ರೈತರ ಹೋರಾಟಕ್ಕೆ ತಿಲಾಂಜಲಿ ಇಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗ ತೆರಳಿದಾಗ ಉತ್ತಮವಾಗಿ ಪ್ರತಿಕ್ರಿಯಿಸಿಲ್ಲ ಎಂದು ಯೋಜನಾ ಸದಸ್ಯರು ಮೋದಿ ವಿರುದ್ಧ ಕಿಡಿಕಾರಿದ್ದಾರೆ.[ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]
ನೀರಿನ ಸಮಸ್ಯೆ ನಿವಾರಣ ಹೋರಾಟಕ್ಕೆ 4 ಜಿಲ್ಲೆಗಳಿಂದ 1.25 ಕೋಟಿ ಜನರು ಭಾಗವಹಿಸಿದ್ದಾರೆ. ಈ ಜಿಲ್ಲೆಯ ಪ್ರತಿಯೊಂದು ರೈತ ಕುಟುಂಬಗಳು ಕಳಸಾಬಂಡೂರಿ ನಾಲಾ ಯೋಜನೆಯನ್ನು ಆಶ್ರಯಿಸಿದ್ದಾರೆ. ರೈತರ ಆತ್ಮಹತ್ಯೆ ಕಡಿಮೆಯಾಗಬೇಕಾದರೆ ಅವರ ಬೇಡಿಕೆಗಳು ಈಡೇರಬೇಕಾಗಿದೆ ಎಂದು ಹೇಳಿದರು.
ಹಾಗಾಗಿ ಆದಷ್ಟು ಬೇಗ ಕಳಸಾ ಬಂಡೂರಿ ನಾಲಾ ಯೋಜನಾ ಸಮಸ್ಯೆಯನ್ನು ಬಗೆಹರಿಸಬೇಕು. ಜನರು ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ರಾಹುಲ್ ಗಾಂಧಿ ಅವರಿಗೆ ಕಳಸಾ ಬಂಡೂರಿ ಯೋಜನಾ ಸಮಿತಿ ಮನವಿ ಮಾಡಿಕೊಂಡಿದ್ದಾರೆ.