ಕಳಸಾ ಬಂಡೂರಿ: ಪ್ರಧಾನಿ ಬಳಿಗೆ ಮತ್ತೆ ಸರ್ವಪಕ್ಷ ನಿಯೋಗ
ಬೆಂಗಳೂರು, ಏಪ್ರಿಲ್, 03: ಕಳಸಾ-ಬಂಡೂರಿ ವಿಚಾರದಲ್ಲಿ ನಡೆದ ಸರ್ವಪಕ್ಷ ಸಭೆ ವಿಫಲವಾಗಿದ್ದರೂ ಇನ್ನೊಮ್ಮೆ ದೆಹಲಿಗೆ ಸರ್ವಪಕ್ಷಗಳ ನಿಯೋಗ ತೆರಲು ವಿಪಕ್ಷಗಳ ನಾಯಕರು ಒಪ್ಪಿಗೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಪರಿಹಾರ ಕಲ್ಪಿಸಬೇಕು ಎಂದು ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಒತ್ತಾಯಿಸಲಿದ್ದಾರೆ. ಕಳಸಾ-ಬಂಡೂರಿ ಮತ್ತು ಮಹದಾಯಿ ವಿವಾದ ಕುರಿತು ಚರ್ಚಿಸಲು ಉಭಯ ಸದನಗಳ ಪ್ರತಿಪಕ್ಷಗಳ ನಾಯಕರು, ಕೇಂದ್ರ ಸಚಿವರು, ಸಂಸದರು, ಉತ್ತರ ಕರ್ನಾಟಕದ ಶಾಸಕರು ಮತ್ತು ರೈತ ಮುಖಂಡರ ಸಭೆಯನ್ನು ಶನಿವಾರ ಕರೆಯಲಾಗಿತ್ತು.[ಏನಿದು ಕಳಸಾ-ಬಂಡೂರಿ ಯೋಜನೆ?]
ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಆದರೆ ರೈತರ ಹಿತದೃಷ್ಟಿಯಿಂದ ಇನ್ನೊಮ್ಮೆ ಸರ್ವ ಪಕ್ಷ ನಿಯೋಗ ಪ್ರಧಾನಿ ಬಳಿಗೆ ತೆರಳಲು ತೀರ್ಮಾನ ತೆಗೆದುಕೊಳ್ಳಲಾಯಿತು.
ನಿರ್ಧಾರದ ಹಿಂದೆ ಸರಿಯಲ್ಲ
ಕಳಸಾ ಬಂಡೂರಿ ಬಗ್ಗೆ ವಿಧಾನ ಸಭೆಯಲ್ಲಿ ಸರ್ವಾನುಮತದ ಅಂಗೀಕಾರ ಆಗಿದೆ. ನಿರ್ಧಾರದಿಂದ ರಾಜ್ಯ ಹಿಂದೆ ಸರಿಯುವುದಿಲ್ಲ. ಪ್ರಧಾನಿಗಳ ಬಳಿ ತೆರಳಿ ಇನ್ನೊಮ್ಮೆ ಒತ್ತಡ ಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಾವು ಹೋಗುತ್ತೇವೆ
ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಮತ್ತು ಮಹಾರಾಷ್ಟ್ರದ ಮನವೊಲಿಸುವಂತೆ ಪ್ರಧಾನಿ ಈ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದ್ದೆವು. ಆದರೆ, ಇದುವರೆಗೆ ಈ ಪ್ರಯತ್ನ ಆಗಿಲ್ಲ. ಆದಾಗ್ಯೂ ಸರ್ವಪಕ್ಷ ನಿಯೋಗದೊಂದಿಗೆ ತೆರಳಲಿದ್ದೇವೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತಿಳಿಸಿದರು.
ಎಲ್ಲರೂ ಒಟ್ಟಾಗಿ ನಡೆಯೋಣ
ಗೋವಾ ಮತ್ತು ಮಹಾರಾಷ್ಟ್ರ ಪ್ರತಿಪಕ್ಷಗಳ ನಾಯಕರನ್ನು ಕಾಂಗ್ರೆಸ್ ಮನವೊಲಿಸಬೇಕು. ಅಲ್ಲಿನ ಆಡಳಿತ ಪಕ್ಷಗಳೊಂದಿಗೆ ನಾವು ಮಾತನಾಡುತ್ತೇವೆ ಎಂದು ಮಾಜಿ ಸಿಎಂ, ಸಂಸದ ಬಿ ಎಸ್ ಯಡಿಯೂರಪ್ಪ ಹೇಳಿದರು.
ಕುಮಾರಸ್ವಾಮಿ ಗೈರು
ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಗೈರಾಗಿದ್ದರು.