ನ್ಯಾ.ಲಲಿತ್ ವಿಚಾರಣೆಯಿಂದ ಹಿಂದೆ ಸರಿಯಲಿ: ಸುಬ್ಬಾರೆಡ್ಡಿ
ಬೆಂಗಳೂರು, ಸೆಪ್ಟೆಂಬರ್ 29: ಕಾವೇರಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶಗಳ ಬಗ್ಗೆ ಕರ್ನಾಟಕದ ಜನರಲ್ಲಿ ಅಸಮಾಧಾನ ಮೂಡಿದ್ದು, ಇದೇ ವೇಳೆ ವಕೀಲರ ಸಂಘದಿಂದ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಇತ್ತೀಚೆಗೆ ಕಾವೇರಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಿಂದ 'ಖಾತ್ರಿ'ಯಾಗುತ್ತದೆ ನ್ಯಾಯಮೂರ್ತಿ ಯು.ಯು.ಲಲಿತ್ ಅವರಿಗೆ 'ತಮಿಳುನಾಡಿನ ಪರವಾದ ಒಲವಿದೆ' ಎಂದು ಆರೋಪಿಸಿದ್ದಾರೆ.
ಯು.ಯು.ಲಲಿತ್ ಅವರು ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಪರವಾಗಿ ಅಕ್ರಮ ಆಸ್ತಿ ಪ್ರಕರಣದಲ್ಲಿ ವಕೀಲರಾಗಿದ್ದರು. ಈಗ ಕಾವೇರಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳ ಪೈಕಿ ಅವರೂ ಒಬ್ಬರು. ಲಲಿತ್ ನ್ಯಾಯಮೂರ್ತಿಯಾಗಿ ಮುಂದುವರಿದಿರುವುದರ ವಿರುದ್ಧ ವಕೀಲರ ಸಂಘದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲು ಪ್ರತಿಭಟನೆ ನಡೆಸಿದರು.[ದೇವೇಗೌಡರ ಕಂಬನಿ: ಕಾವೇರಿ ವಿಷ್ಯದಲ್ಲಿ ಕರ್ನಾಟಕಕ್ಕೆ ಅನ್ಯಾಯ]
ಸೆ.28ರಂದು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರು ಬರೆದಿರುವ ಪತ್ರದಲ್ಲಿ, ಕರ್ನಾಟಕದ ವಕೀಲರ ಸಂಘವು ನಡೆಸಿದ ಸಭೆಯಲ್ಲಿ ಕಾವೇರಿ ಜಲ ವಿವಾದದ ವಿಚಾರಣೆಯಲ್ಲಿ ಯು.ಯು.ಲಲಿತ್ ನ್ಯಾಯಮೂರ್ತಿಗಳಾಗಿ ಮುಂದುವರಿಯದಂತೆ ಪ್ರತಿಭಟಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪರವಾಗಿ ಲಲಿತ್ ವಕೀಲರಾಗಿದ್ದರು.[ಇಂಥವರಿಂದ ಕಾವೇರಿ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೆ?]
ಆದ್ದರಿಂದ ಸಹಜವಾಗಿ ತಮಿಳುನಾಡಿನ ಪರವಾಗಿ ಒಲವಿರುತ್ತದೆ ಎಂಬುದು ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆ. ಪಾಲನೆಯೇ ಮಾಡಲಾಗದ ನಿರ್ಣಯಗಳನ್ನು ಕರ್ನಾಟಕಕ್ಕೆ ಆದೇಶಿಸುತ್ತಿರುವುದು ಗಮನಿಸಿದರೆ ಅದು ಖಾತ್ರಿಯಾಗುತ್ತದೆ ಎಂದು ತಿಳಿಸಲಾಗಿದೆ. ಆದರೂ ಕರ್ನಾಟಕ ನ್ಯಾಯಮೂರ್ತಿಗಳ ಬದಲಾವಣೆಗಾಗಿ ಕೇಳಿಲ್ಲ. ಅದನ್ನು ಆರಂಭದಲ್ಲೇ ಮಾಡಬೇಕಿತ್ತು ಎಂದಿದ್ದಾರೆ.