ಗೌಡ್ರ ತಂತ್ರಗಾರಿಕೆ, ನಾಲ್ವರು ಕಾಂಗ್ರೆಸ್ಸಿಗರು ಜೆಡಿಎಸ್ ತೆಕ್ಕೆಗೆ?
ಕಾವೇರಿ ನದಿನೀರು ಹಂಚಿಕೆ ವಿವಾದದಲ್ಲಿ ಪಕ್ಷಬೇಧ, ಭಿನ್ನಾಭಿಪ್ರಾಯ ಮೆರೆತು ಸರಕಾರದ ಪರವಾಗಿ ನಿಂತು, ಇತರ ಪಕ್ಷಗಳನ್ನೂ ಒಗ್ಗೂಡಿಸಿ, ಸಾರ್ವಜನಿಕ ವಲಯದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಜೆಡಿಎಸ್ ವರಿಷ್ಠ ದೇವೇಗೌಡರು ಪಕ್ಷದ ಬೇರನ್ನೂ ಗಟ್ಟಿಗೊಳಿಸಿದ್ದಂತೂ ನಿಜ.
ಮುಂಬರುವ ಅಸೆಂಬ್ಲಿ ಚುನಾವಣೆಗೆ ಎಲ್ಲರಿಗಿಂತ ಮೊದಲೇ ಸಜ್ಜಾದಂತೆ ಕಾಣುತ್ತಿರುವ ಜೆಡಿಎಸ್, ಕಾರ್ಯಕರ್ತರ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗಿದೆ. ಜೊತೆ ಜೊತೆಗೆ ಇತರ ಪಕ್ಷಗಳ ಅತೃಪ್ತರನ್ನೂ ಸೆಳೆಯುವ ಕೆಲಸಕ್ಕೆ ಕೈಹಾಕಿದೆ. (ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಲು ಶ್ರೀನಿವಾಸ್ ಪ್ರಸಾದ್ ನಿರ್ಧಾರ)
ಇತ್ತ ಮಗನ ಜಾಗ್ವಾರ್ ಸಿನಿಮಾ ಮುಗಿಸಿ, ರಿಲೀಸ್ ಗೊಳಿಸಿದ ತೃಪ್ತಿಯಲ್ಲಿರುವ ಕುಮಾರಸ್ವಾಮಿ, ನನ್ನ ರಾಜಕೀಯ ಜಾಗ್ವಾರ್ ನವೆಂಬರ್ ಒಂದರಿಂದ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮನೆಮಾಡಿ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗಲಿದ್ದೇನೆಂದು ಈಗಾಗಲೇ ಹೇಳಿದ್ದಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ಅತೃಪ್ತರನ್ನು ತನ್ನತ್ತ ಸೆಳೆಯಲು ಈಗಾಗಲೇ ಕಾರ್ಯತಂತ್ರ ರೂಪಿಸಿರುವ ದೇವೇಗೌಡ ಅಂಡ್ ಕೋ, ಪ್ರಮುಖವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ವಿರುದ್ದ ಮುನಿಸಿಕೊಂಡು ಒಂದು ಹೆಜ್ಜೆ ಹೊರಗಿಟ್ಟಿರುವ ಮುಖಂಡರನ್ನು ಓಲೈಸುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನುವ ಮಾಹಿತಿಯಿದೆ.
ನಾಲ್ವರು ಕಾಂಗ್ರೆಸ್ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ, ನೇರವಾಗಿ ದೇವೇಗೌಡರೇ ಆಖಾಡಕ್ಕಿಳಿದಿದ್ದಾರೆ ಎನ್ನುವ ಸುದ್ದಿ ಜೆಡಿಎಸ್ ವಲಯದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ..
ಸಚಿವ ಸಂಪುಟ ವಿಸ್ತರಣೆ
ಇತ್ತೀಚೆಗೆ ನಡೆದ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅಸಮಾಧಾನಗೊಂಡ ಕಾಂಗ್ರೆಸ್ ಮುಖಂಡರನ್ನು ಪಕ್ಷಕ್ಕೆ ಸೆಳೆದು, ಆಯಾಯ ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸಕ್ಕೆ ದೇವೇಗೌಡರು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಅಸಮಾಧಾನ
ಒಂದು ಕಾಲದಲ್ಲಿ ದೇವೇಗೌಡರ ಪರಮಾಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮತ್ತು ಹಾಲೀ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿರುವ ಸಿ ಎಂ ಇಬ್ರಾಹಿಂ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಗೌಡ್ರು ಉತ್ಸುಕರಾಗಿದ್ದು, ಈಗಾಗಲೇ ಮೊದಲ ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾಜಿ ವಸತಿ ಸಚಿವ
ಕಳೆದ ಬಾರಿ ಸಂಪುಟ ವಿಸ್ತರಣೆಯ ಸಮಯದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಸಾಕಷ್ಟು ಪ್ರತಿಭಟನೆ ವ್ಯಕ್ತವಾಗಿದ್ದರೂ, ಸಿದ್ದರಾಮಯ್ಯ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿರಲಿಲ್ಲ. ಅಂಬರೀಶ್ ಅವರನ್ನು ಜೆಡಿಎಸ್ಸಿಗೆ ಸೆಳೆಯುವ ಕೆಲಸ ನಡೆಯುತ್ತಿದೆ.
ಬೆಳಗಾವಿಯ ಯಮಕನಮರಡಿ ಕ್ಷೇತ್ರದ ಶಾಸಕ
ಬೆಳಗಾವಿಯ ಯಮಕನಮರಡಿ ಕ್ಷೇತ್ರದ ಶಾಸಕ ಮತ್ತು ಸಿದ್ದರಾಮಯ್ಯ ಸರಕಾರದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿದ್ದ ಸತೀಶ್ ಜಾರಕಿಹೊಳೆಯವರನ್ನು ಸಂಪುಟ ವಿಸ್ತರಣೆಯ ವೇಳೆ ಕೈಬಿಡಲಾಗಿತ್ತು. ಜಾರಕಿಹೊಳೆ ಅಭಿಮಾನಿಗಳು ಭಾರೀ ಪ್ರತಿಭಟನೆ ನಡೆಸಿದ್ದರು. ಗೌಡ್ರ ಪಟ್ಟಿಯಲ್ಲಿರುವ ಮತ್ತೊಬ್ಬ ಕಾಂಗ್ರೆಸ್ ನಾಯಕರು ಇವರೇ.
ಬಹುತೇಕ ಜೆಡಿಎಸ್ ಪಕ್ಷಕ್ಕೆ
ನಂಜನಗೂಡು ಶಾಸಕ ಶ್ರೀನಿವಾಸ ಪ್ರಸಾದ್ ಇದೇ ತಿಂಗಳು 17ರಂದು ಶಾಸಕ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಸಿದ್ದು ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಸಿದ್ದರಾಮಯ್ಯ ವಿರುದ್ದ ವಾಕ್ ಪ್ರಹಾರ ನಡೆಸುತ್ತಿರುವ ಶ್ರೀನಿವಾಸ್ ಪ್ರಸಾದ್ ಬಹುತೇಕ ಜೆಡಿಎಸ್ ಪಕ್ಷ ಸೇರಲಿದ್ದಾರೆ ಎನ್ನಲಾಗುತ್ತಿದೆ.