ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಸಿಎಂ: ಏನ್ ದೇವೇಗೌಡ್ರೇ ಹೀಗೆ ಹೇಳ್ಬಿಟ್ರೀ!
ಮೂವತ್ತು ಕೋಟಿ ಜನಸಂಖ್ಯೆ ಇರುವ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಜೆಡಿಎಸ್ ಸಮಾವೇಶದಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು, ಮಾ 23: ನಗರದ ಅರಮನೆ ಮೈದಾನದಲ್ಲಿ ರಾಯರ ದಿನದಂದು (ಮಾ 23) ನಡೆದ ಜೆಡಿಎಸ್ 'ಸ್ವಾಭಿಮಾನಿ ಸಮಾನತೆ' ಸಮಾವೇಶದಲ್ಲಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ್ರು ಉತ್ತರಪ್ರದೇಶದ ಮುಖ್ಯಮಂತ್ರಿಯ ಬಗ್ಗೆ ಎಂದಿನ ಶೈಲಿನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಯೋಗಿ ಆದಿತ್ಯನಾಥ್ ಅವರ ಹೆಸರು ಉಲ್ಲೇಖಿಸದೇ, ಸ್ವಾಮೀಜಿಯೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಎಲ್ಲಿಗೆ ಬಂತು ನೋಡಿ ನಮ್ಮ ದೇಶ ಎಂದು ಅಪ್ರತಿಮ ದೈವಭಕ್ತರಾದ ಮತ್ತು ಮಠಮಾನ್ಯವನ್ನು ನಂಬುವ ದೇವೇಗೌಡ್ರು ವ್ಯಂಗ್ಯವಾಡಿದ್ದಾರೆ. (ಗಣಿಧಣಿ ಕೇಸ್ ಕೈ ಬಿಡಲು 500 ಕೋಟಿ ಡೀಲ್)
ಐದು ಬಾರಿ ಭಾರೀ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿಗಳನ್ನು ಸೋಲಿಸಿ, ಲೋಕಸಭೆಯಲ್ಲಿ ಗೋರಖಪುರ ಕ್ಷೇತ್ರದ ಜನಪ್ರತಿನಿಧಿಯಾಗಿದ್ದ, ಹಿಂದುತ್ವದ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಉತ್ತರಪ್ರದೇಶದ ಸಿಎಂ ಆಗಿ ಆಯ್ಕೆ ಮಾಡಿದ್ದಕ್ಕೆ ಈ ರೀತಿ ದೇವೇಗೌಡ್ರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನನ್ನ ಇಡೀ ರಾಜಕೀಯ ಜೀವನದಲ್ಲಿ ನಾನು ನಂಬಿದ್ದು ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರನ್ನು. ಹಾಗಾಗಿ, ನಮ್ಮ ನೂತನ ಕಚೇರಿಗೆ 'ಜೆ ಪಿ ಭವನ' ಎಂದು ಹೆಸರಿಡಲಾಗಿದೆ ಎಂದು ಸಮಾವೇಶದಲ್ಲಿ ದೇವೇಗೌಡ್ರು ಹೇಳಿದ್ದಾರೆ.
ಪಕ್ಷದ ನೂತನ ಕಚೇರಿಗೆ ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರನ್ನು ಆಹ್ವಾನಿಸುವ ಉದ್ದೇಶ ಹೊಂದಿದ್ದೆವು. ಆದರೆ ಅವರ ಹೆಸರು ರಾಷ್ಟ್ರಪತಿ ಹುದ್ದೆಗೆ ಕೇಳಿ ಬರುತ್ತಿರುವುದರಿಂದ ಅವರನ್ನು ಆಹ್ವಾನಿಸುವ ವಿಚಾರವನ್ನು ಕೈಬಿಟ್ಟೆವು ಎಂದು ದೇವೇಗೌಡ್ರು ಎರಡು ದಿನದ ಹಿಂದೆ ಹೇಳಿದ್ದರು.
ಯೋಗಿ ಆದಿತ್ಯನಾಥ್ ಬಗ್ಗೆ ದೇವೇಗೌಡ್ರು ಹೇಳಿದ್ದೇನು, ಮುಂದೆ ಓದಿ...
ಕರ್ನಾಟಕದ ಪರಿಸ್ಥಿತಿ ಉತ್ತರಪ್ರದೇಶದಂತಲ್ಲ
ಉತ್ತರಪ್ರದೇಶದಲ್ಲಿ ಎರಡೂ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಸೋತಿರಬಹುದು, ಆದರೆ ಕರ್ನಾಟಕದ ಪರಿಸ್ಥಿತಿಯೇ ಬೇರೆ. ಇಲ್ಲಿ ನಾವು ಪಕ್ಷವನ್ನು ಅಧಿಕಾರಕ್ಕೆ ತರುವ ರಾಜಕೀಯ ನಿರ್ಣಯ ಅಂಗೀಕಾರ ಮಾಡಿದ್ದೇವೆ - ದೇವೇಗೌಡ.
ಮಠಾಧೀಶರೊಬ್ಬರು ಮುಖ್ಯಮಂತ್ರಿ, ಗೌಡ್ರ ವ್ಯಂಗ್ಯ
ಮೂವತ್ತು ಕೋಟಿ ಜನಸಂಖ್ಯೆ ಇರುವ ರಾಜ್ಯಕ್ಕೆ ಮಠಾಧೀಶರೊಬ್ಬರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಎಲ್ಲಿಗೆ ಬಂತು ನೋಡಿ ನಮ್ಮ ದೇಶದ ಸ್ಥಿತಿ - ದೇವೇಗೌಡ ವ್ಯಂಗ್ಯ. (ಚಿತ್ರದಲ್ಲಿ, ಜೆಡಿಎಸ್ ನೂತನ ಕಚೇರಿ)
ದೇಶದಲ್ಲಿ ಇನ್ನೇನಾಗುತ್ತೋ, ಗೌಡ್ರ ಭಯ
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಸರನ್ನು ಉಲ್ಲೇಖಿಸಿದೇ ಮಾತನಾಡಿದ ದೇವೇಗೌಡ, ಉತ್ತರಪ್ರದೇಶದ ಕಥೆ ಹೀಗಾದರೆ, ಮುಂದೆ ಇನ್ನೇನಾಗುತ್ತೋ ಈ ದೇಶದಲ್ಲಿ. ನಾನೂ ಹತ್ತು ತಿಂಗಳು ದೇಶವನ್ನು ಆಳಿದ್ದೇನೆಂದು ಈ ಸಂದರ್ಭದಲ್ಲಿ ದೇವೇಗೌಡ್ರು ಹೇಳಿದರು.
ಪ್ರಾದೇಶಿಕ ಪಕ್ಷ ಬೇಕೇ ಅಥವಾ ಬೇಡವೇ ಜನತೆ ನಿರ್ಧರಿಸುತ್ತಾರೆ
ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೇ ಅಥವಾ ಬೇಡವೇ ಎನ್ನುವುದನ್ನು ತೀರ್ಮಾನಿಸಬೇಕಾದವರು ಈ ರಾಜ್ಯದ ಜನತೆಯೇ ಹೊರತು, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅಲ್ಲ. ಜನತಾ ಪರಿವಾರ ಒಂದಾಗುವ ಕೆಲಸಕ್ಕೆ ಮುಂದಿನ ದಿನದಲ್ಲಿ ನಾನೇ ನಾಂದಿ ಹಾಡಲಿದ್ದೇನೆ - ದೇವೇಗೌಡ.
ಐದು ಬಾರಿ ಲೋಕಸಭಾ ಸದಸ್ಯರಾಗಿರುವ ಯೋಗಿ
1998ರಿಂದ ಕಳೆದ ಸಾರ್ವತ್ರಿಕ ಚುನಾವಣೆಯ ವರೆಗೆ ಯೋಗಿ ಆದಿತ್ಯನಾಥ್ ಐದು ಬಾರಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ 26 ಸಾವಿರ ಅಂತರಗಳಿಂದ ಜಯಗಳಿಸಿದ್ದ ಯೋಗಿ ಅವರ ವಿಜಯದ ಅಂತರ ಕಳೆದ ಚುನಾವಣೆಯಲ್ಲಿ ಮೂರು ಲಕ್ಷದ ಹದಿಮೂರು ಸಾವಿರಕ್ಕೆ ಏರಿತ್ತು.