ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ ಜೆಡಿಎಸ್
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆ.ಡಿಎಸ್ ನೂತನ ಕಚೇರಿಗೆ ಜೆ.ಪಿ ಭವನ ನಾಮಕರಣ ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶ ಜಾತ್ಯಾತೀತ ಜನತಾ ದಳದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಬೆಂಗಳೂರು, ಮಾರ್ಚ್ 24: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆ.ಡಿಎಸ್ ನೂತನ ಕಚೇರಿಗೆ ಜೆ.ಪಿ ಭವನ ನಾಮಕರಣ ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶ ಜಾತ್ಯಾತೀತ ಜನತಾ ದಳದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಅಂದಾಜು 50 ಸಾವಿರ ಜನ ಸೇರಿದ್ದ ಬೃಹತ್ ಸಮಾವೇಶದಲ್ಲಿ ವಿಧಾನಸಭಾ ಚುನಾವಣೆಗೆ ಜೆ.ಡಿ.ಎಸ್ ರಣ ಕಹಳೆ ಮೊಳಗಿಸಿತು. ರಾಷ್ಟ್ರಾಧ್ಯಕ್ಷ ದೇವೇಗೌಡ ಮಾರ್ಗದರ್ಶನ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್ ಸ್ವತಂತ್ರ ಸರಕಾರವನ್ನು ರಚಿಸುವ ಪಣ ತೊಡಲಾಯಿತು.
ಜೆಡಿಎಸ್ ನಾಯಕರಾದ ದೇವೇಗೌಡರ, ಕುಮಾರಸ್ವಾಮಿ, ವೈಎಸ್.ವಿ ದತ್ತಾ ಮೊದಲಾದವರು ಕೇಂದ್ರ ಮತ್ತು ರಾಜ್ಯಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.[ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಸಿಎಂ: ಏನ್ ದೇವೇಗೌಡ್ರೇ ಹೀಗೆ ಹೇಳ್ಬಿಟ್ರೀ!]
ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಪ್ರಣಾಳಿಕೆಯ ರೀತಿಯಲ್ಲಿ ಜೆಡಿಎಸ್ ನಿರ್ಣಯಗಳನ್ನೂ ಬಿಡುಗಡೆ ಮಾಡಿದ್ದು ಕಾರ್ಯಕರ್ತರ ಸಮಾವೇಶದ ವಿಶೇವಾಗಿತ್ತು.
ನಿರ್ಣಯದಲ್ಲೇನೇನಿದೆ?
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಬಿಪಿಎಲ್ ಕಾರ್ಡುದಾರರಿಗೆ ಉಚಿತ ವಿದ್ಯುತ್, 7ನೇ ವೇತನ ಆಯೋಗದ ಶಿಫಾರಸ್ಸುಗಳ ಯಥಾವತ್ತು ಜಾರಿ, ಮತ್ತು ಜನ ಸಾಮಾನ್ಯರ ದಿನ ನಿತ್ಯದ ಬೇಡಿಕೆಗಳಾದ ನೀರು, ರಸ್ತೆ, ವಿದ್ಯುತ್ ಹಾಗೂ ಸೂರು ಒದಗಿಸಲಾಗುವುದು ಎಂದು ಜೆಡಿಎಸ್ ನಿರ್ಣಯ ಕೈಗೊಂಡಿದೆ. ಈ ಮೂಲಕ ಜನರಲ್ಲಿ ಆಶ್ವಾಸನೆ ಬಿತ್ತುವ ಕೆಲಸ ಶುರುವಿಟ್ಟುಕೊಂಡಿದೆ.[ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ರೈತರ ಸಾಲ ಮನ್ನಾ- ಕುಮಾರಸ್ವಾಮಿ]
ಮಣ್ಣಿನಿಂದ ಎದ್ದು ಬರುವ ಗುಣ ಇದೆ
ಸಮಾವೇಶದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಸಕ ವೈಎಸ್ ವಿ ದತ್ತಾ, ಜೆಡಿಎಸ್ ಗೆ ಮಣ್ಣಿನಿಂದ ಮೇಲೆದ್ದು ಬರುವ ಗುಣ ಇದೆ. ಇತಿಹಾಸದಲ್ಲಿ ಹಲವು ಬಾರಿ ಇಂಥಹ ನಿದರ್ಶನಗಳು ನಡೆದಿವೆ. ಅದರಂತೆ ಈ ಬಾರಿಯೂ ಮಣ್ಣಿನಿಂದ ಎದ್ದು ಬಂದು ಈ ನಾಡಿನ ಸೊಗಡಿನ ಅಧಿಕಾರ ನಡೆಸುತ್ತೇವೆ ಎಂದು ಹೇಳಿದ್ದಾರೆ.[ಗಣಿಧಣಿ ಕೇಸ್ ಕೈ ಬಿಡಲು ಬಿಜೆಪಿ ಜತೆ 500 ಕೋಟಿ ಡೀಲ್- ಹೆಚ್ಡಿಕೆ]
ಜೆಪಿ ನೆನೆಸಿಕೊಂಡರೆ ಮನಸ್ಸು ಕರಗುತ್ತೆ
ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡ ಜಯಪ್ರಕಾಶ್ ನಾರಾಯಣ್ ನೆನಪು ಮಾಡಿಕೊಂಡರೆ ನನ್ನ ಮನಸ್ಸು ಕರಗುತ್ತದೆ. ಗಾಂಧೀಜಿ ಬಿಟ್ಟರೆ ಈ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಹೋರಾಟಗಾರ. ಆ ಕಾರಣಕ್ಕೆ ಅವರ ಹೆಸರನ್ನು ಜೆ.ಡಿ.ಎಸ್ ಕಚೇರಿಗೆ ಇಡಲಾಗಿದೆ ಎಂದು ಹೇಳಿದರು.
ಜೆಪಿ ಮುಂದೆ ನಾವು ಹುಳುಗಳಿದ್ದ ಹಾಗೆ
ಜಯಪ್ರಕಾಶ್ ನಾರಾಯಣ್ ಮೇರು ವ್ಯಕ್ತಿ. ಚಂಬಲ್ ಕಣಿವೆ ಡಕಾಯಿತೆ ಪೂಲಂ ದೇವಿಯಂಥವರನ್ನೂ ಸರಿ ದಾರಿಗೆ ತಂದು ಲೋಕಸಭೆ ಸದಸ್ಯೆಯಾಗುವಂತೆ ಮಾಡಿದವರು. ಅವರು ಅತ್ತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರಿಂದಲೂ ಒದೆ ತಿಂದರು. ಇತ್ತ ಸ್ವಾತಂತ್ರ್ಯ ನಂತರ ಭಾರತೀಯರಿಂದಲೂ ಒದೆ ತಿಂದರು. ಅವರ ಮುಂದೆ ನಾವೆಲ್ಲಾ ಹುಳುಗಳಿದ್ದ ಹಾಗೆ ಎಂದು ವಿಶ್ಲೇಷಿಸಿದರು.
ಸನ್ಯಾಸಿಗಳು ಸಿಎಂ ಆಗುವ ಕಾಲ
ರಾಜಕೀಯ ಎತ್ತ ಸಾಗುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ. 30 ಕೋಟಿ ಜನರಿರುವ ರಾಜ್ಯಕ್ಕೆ ಸನ್ಯಾಸಿಯೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ. ನಾನು ಬದುಕಿರುವಾಗಲೇ ಇಂತಹದ್ದನ್ನೆಲ್ಲಾ ನೋಡಬೇಕಾಯಿತಲ್ಲ. ಈ ದೇಶ ಎತ್ತ ಸಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ನಾಳೆ ಏನಾಗುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೀದಿ ಬೀದಿಗೆ ಹೋಗಿ ಮತ ಕೇಳ್ತೇನೆ
ನಾನು ದೇಶವನ್ನು ಆಳಿದಾಗ ಒಂದೇ ಒಂದು ಕೋಮು ಗಲಭೆಯಾಗಲಿ ಅಹಿತಕರ ಘಟನೆಗಳಾಗಲೀ ಆಗಲಿಲ್ಲ. ಈಗ ಏನೆಲ್ಲಾ ನಡೆಯುತ್ತಿದೆ. ನಮಗೆ ಒಂದು ಬಾರಿ ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಾನು ಬೀದಿ ಬೀದಿಗೆ ಹೋಗಿ ಮತ ಕೇಳುತ್ತೇನೆ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿ ಎಂದು ದೇವೇಗೌಡರು ಕಾರ್ಯಕರ್ತರ ಬಳಿ ಕೇಳಿಕೊಂಡರು.