ಸಿಎಂ ಭೇಟಿಯಾದ ನಂತರ ಜೆಡಿಎಸ್ ಬಂಡಾಯ ಶಾಸಕರ ಖಡಕ್ ನಿರ್ಧಾರ!
ಸಿಎಂ ಸಿದ್ದರಾಮಯ್ಯ ಜೊತೆ ಒಂದು ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆಸಿದ ಬಂಡಾಯ ಜೆಡಿಎಸ್ ಶಾಸಕರು, ತಾವು ಕಾಂಗ್ರೆಸ್ ಪಕ್ಷ ಸೇರುವುದು ನಿಶ್ಚಿತ, ಚುನಾವಣೆಯ ವೇಳೆ ಅಧಿಕೃತವಾಗಿ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ.
ಬೆಂಗಳೂರು, ಮಾ 3: ಪಕ್ಷದ ವರಿಷ್ಠರ ಜೊತೆ ಮುನಿಸಿಕೊಂಡು ಮನಸ್ಸು, ಕಾಲು ಎರಡೂ ಹೊರಗಿಟ್ಟಿರುವ ಜೆಡಿಎಸ್ ಬಂಡಾಯ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಶುಕ್ರವಾರ (ಮಾ 3) ಭೇಟಿ ಮಾಡಿ ಖಡಕ್ ನಿರ್ಧಾರಕ್ಕೆ ಬಂದಿದ್ದಾರೆ!
ಸಿಎಂ ಸಿದ್ದರಾಮಯ್ಯ ಜೊತೆ ಒಂದು ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆಸಿದ ಬಂಡಾಯ ಶಾಸಕರು, ತಾವು ಕಾಂಗ್ರೆಸ್ ಪಕ್ಷ ಸೇರುವುದು ನಿಶ್ಚಿತ, ಚುನಾವಣೆಯ ವೇಳೆ ಅಧಿಕೃತವಾಗಿ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಭೇಟಿಯ ನಂತರ ಮಾಧ್ಯಮದವರ ಮುಂದೆ ಮಾತನಾಡುತ್ತಿದ್ದ ಮಾಗಡಿ ಶಾಸಕ ಬಾಲಕೃಷ್ಣ, ನಾವು ಈಗ ನೂರಕ್ಕೆ ನೂರರಷ್ಟು ಜೆಡಿಎಸ್ ನಲ್ಲಿಲ್ಲ. ಆ ಪಕ್ಷದ ಎಲ್ಲಾ ಚಟುವಟಿಕೆಯಿಂದ ಈಗಾಗಲೇ ನಾವು ಏಳೂ ಜನ ಶಾಸಕರು ಹೊರಬಂದಿದ್ದಾಗಿದೆ ಎಂದು ಹೇಳಿದ್ದಾರೆ.
ನಮ್ಮ ನಮ್ಮ ಕ್ಷೇತ್ರದ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಯಾವಾಗ ಸೇರಬೇಕು ಎನ್ನುವುದರ ಬಗ್ಗೆ ನಿರ್ಧರಿಸುವುದಾಗಿ ಬಾಲಕೃಷ್ಣ ಹೇಳಿದ್ದಾರೆ.
ನಮ್ಮನ್ನು ರಾಜಕೀಯವಾಗಿ ಮೇಲಕ್ಕೆ ತಂದಿದ್ದು ದೇವೇಗೌಡ್ರು, ಅವರ ಬಗ್ಗೆ ನಮಗೆ ಅಪಾರ ಗೌರವವಿದೆ, ಆದರೆ ಜೆಡಿಎಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ಅಲ್ಲಿ ನಮಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ನಿರೀಕ್ಷೆಯಂತೆ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಬಂಡಾಯ ಶಾಸಕರಾದ ಚೆಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಜಮೀರ್ ಅಹ್ಮದ್ ಮತ್ತು ಅಖಂಡ ಶ್ರೀನಿವಾಸಮೂರ್ತಿ, ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು.
ಕೊನೇಮಾತು: ಅಯ್ಯೋ.. ಶಿವನೇ.. ಮಗಂದು ಇನ್ನೂ ಇವ್ರು ಕಾಂಗ್ರೆಸ್ಸಿಗೆ ಎಂಟ್ರಿ ಕೊಟ್ಟಿಲ್ವೇನ್ಲಾ.. ಎಂದು ಅಲ್ಲಿ ಯಾರೋ ಮಾತಾಡ್ಕೋತಾ ಇದ್ರಂತೆ!!