ರಾಹುಲ್ ಗಾಂಧಿ ಹಿಂದೆ ರಮ್ಯಾ ಜಿಂಕೆ ಮರಿ: ಕುಮಾರಸ್ವಾಮಿ ವ್ಯಂಗ್ಯ
ಮಂಡ್ಯ, ಆಗಸ್ಟ್ 4: ರೈತನ ಆತ್ಮಹತ್ಯೆಯ ವಿಚಾರದಲ್ಲಿ ವಿವಿಧ ಪಕ್ಷಗಳ ಮುಖಂಡರ ರಾಜಕೀಯ ಮೇಲಾಟ ಯಥಾವತ್ತಾಗಿ ಮುಂದುವರಿದಿದೆ. ಅನ್ನದಾತನ ಸಾವು ಆಡಳಿತ, ವಿರೋಧ ಪಕ್ಷಗಳಿಗೆ ಆಹಾರವಾಗಿ ಪರಿಣಮಿಸಿರುವುದು ಮಾತ್ರ ದುರಂತ.
ಸಾಲದ ಸುಳಿಯಲ್ಲಿ ಹೈರಾಣವಾಗಿರುವ ರೈತನಿಗೆ ಆತ್ಮಸಾಕ್ಷಿಯಾಗಿ ಸಾಂತ್ವನ ಹೇಳುವ, ಧೈರ್ಯ ತುಂಬುವ ಕೆಲಸ ಮಾಡದೇ ಸಾವಿನ ವಿಚಾರದಲ್ಲೂ ರಾಜಕೀಯ ಮಾಡುವ ಧುರೀಣರು ನಮ್ಮೊಂದಿಗಿರುವುದು ದುರಂತ.
ಮೊನ್ನೆ ಮಾಜಿ ಸಂಸದೆ ರಮ್ಯಾ ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದಲ್ಲಿ ಮೃತ ರೈತ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದಾರೆ. ಜೊತೆಗೆ ಸ್ವಲ್ಪ ಕಣ್ಣೀರೂ ಹಾಕಿದ್ದಾರೆ ಅನ್ನೋದನ್ನಾ ಮರೆಯುವಂತಿಲ್ಲ.
ಅಪ್ಪ, ಮಗ ಕಣ್ಣೀರು ಹಾಕುವುದು ಪ್ರಪಂಚದ ಎಂಟನೇ ಅದ್ಭುತವೇನೂ ಅಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಆವಾಗಾವಾಗ ಲೇವಡಿ ಮಾಡಿದ್ದುಂಟು ಬಿಡಿ. (ಮಂಡ್ಯದಲ್ಲಿ ಮತ್ತೆ ಎಚ್ಡಿಕೆ ಕಣ್ಣೀರು)
ಸೋಮವಾರ (ಆ 3) ಮಂಡ್ಯ ಪ್ರವಾಸದಲ್ಲಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಮೃತ ರೈತರ ಮನೆಗೆ ಇತ್ತೀಚಿಗೆ ಭೇಟಿ ನೀಡಿದ್ದಕ್ಕೆ ಅವರನ್ನು ಜಿಂಕೆ ಮರಿಗೆ ಹೋಲಿಸಿದ್ದಾರೆ. ಮುಂದೆ ಓದಿ..
ಕೆಂಡಾಮಂಡಲವಾದ ಎಚ್ಡಿಕೆ
ಸಾಲು ಸಾಲು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಕೆಂಡಾಮಂಡಲವಾಗಿದ್ದಾರೆ. ಕೈಯಲ್ಲಾದರೆ ಕೆಲಸ ಮಾಡಿ, ಇಲ್ಲಾಂದ್ರೆ ರಾಜೀನಾಮೆ ನೀಡಿ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂಬರೀಶ್ ಬಗ್ಗೆ
ವಸತಿ ಸಚಿವ ಅಂಬರೀಶ್ ಅವರನ್ನು ಏನೆಕ್ಕೆಂದು ಸಂಪುಟಕ್ಕೆ ಸೇರಿಸಿಕೊಂಡಿರಿ. ಅವರೊಬ್ಬರು ನಟರೆಂದಾ? ಸರಕಾರದ ಕೈಯಲ್ಲೇ ಏನೂ ಮಾಡಲಾಗುತ್ತಿಲ್ಲ, ಇನ್ನು ಅಂಬರೀಶ್ ಏನು ಮಾಡ್ಯಾರು ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಮಂಡ್ಯಕ್ಕೆ ಭೇಟಿ ನೀಡಿದಾಗ ಬ್ಯಾಂಡೇಜ್
ರೈತ ಕುಟುಂಬವನ್ನು ಭೇಟಿ ನೀಡಲು ಬಂದಾಗ ರಮ್ಯಾ ಅವರ ಕಾಲಿನಲ್ಲಿ ಬ್ಯಾಂಡೇಜ್ ಇರುತ್ತೆ. ಮರುದಿನ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಭಾಗವಹಿಸುವಾಗ ಇದು ಇರುವುದೇ ಇಲ್ಲ ಎಂದು ಮಂಡ್ಯ ಸಂಸದ ಸಿ ಎಸ್ ಪುಟ್ಟರಾಜು ಅಣಕವಾಡಿದ್ದಾರೆ.
ರಾಹುಲ್ ಹಿಂದೆ ರಮ್ಯಾ ಜಿಂಕೆಮರಿ
ಮಂಡ್ಯಕ್ಕೆ ಭೇಟಿ ನೀಡಿದಾಗ ಬ್ಯಾಂಡೇಜ್ ಹಾಕಿಕೊಂಡು ಅನುಕಂಪ ಗಿಟ್ಟಿಸುವ ರಮ್ಯಾ ಅವರು ಪುಣೆ, ಮುಂಬೈನಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಜಿಂಕೆಮರಿ ತರ ಓಡುತ್ತಾರೆಂದು ಕುಮಾರಸ್ವಾಮಿ, ವ್ಯಂಗ್ಯ ಮಿಶ್ರಿತ ಗಂಭೀರ ಆರೋಪ ಮಾಡಿದ್ದಾರೆ.
ನಿದ್ದೆಗೆ ಶರಣಾದ ಸಿದ್ದು ಸರಕಾರ
ರೈತರ ಸಾವು ಮುಂದುವರಿಯುತ್ತಲೇ ಇದೆ, ಬ್ಯಾಂಕ್ ಸಾಲಕ್ಕೆ ಒತ್ತಡ ಹೇರಬೇಡಿ ಎಂದರೂ ಸರಕಾರದ ಮಾತನ್ನು ಬ್ಯಾಂಕ್ ಅಧಿಕಾರಿಗಳು ಕ್ಯಾರ್ ಅನ್ನುತ್ತಿಲ್ಲ. ನೂರಾರು ಕೋಟಿ ರೂಪಾಯಿ ಜಾಹೀರಾತಿಗೆ ಸುರಿಯುವ ಸಿದ್ದರಾಮಯ್ಯ ಸರಕಾರಕ್ಕೆ ಜನರ ತೆರಿಗೆ ದುಡ್ಡಿನ ಮಹತ್ವ ತಿಳಿದಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.