ಕಾಂಗ್ರೆಸ್ನೊಂದಿಗೆ ಜೆಡಿಎಸ್ಗೆ ಯಾಕೆ ಮೈತ್ರಿ ಬೇಡ?
ಬೆಂಗಳೂರು, ನವೆಂಬರ್, 29: ಜಾತ್ಯತೀತ ಜನತಾದಳದಲ್ಲಿ ಗೊಂದಲಗಳಿವೆ ಅದನ್ನು ಆದಷ್ಟು ಬೇಗ ನಾಯಕರು ಬಗೆಹರಿಸಿದರೆ ಪಕ್ಷಕ್ಕೆ ಒಳ್ಳೆಯದು ಎಂದು ಶಾಸಕ ಮಧು ಬಂಗಾರಪ್ಪ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಪಕ್ಷದಲ್ಲಿ ಗೊಂದಲ ಇರುವುದು ನಿಜ, ವರಿಷ್ಠರು ಪಕ್ಷದ ವೇದಿಕೆಯಲ್ಲಿ ಬಗೆಹರಿಸುತ್ತಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಿದರೆ ಪಕ್ಷಕ್ಕೆ ಒಳಿತು ಎಂದು ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ.[ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಮಾತಾಡಿದ್ದು ಏಕೆ?]
ಪಕ್ಷ ವಿಧಾನ ಪರಿಷತ್ ನಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೂ ಏಳೆಂಟು ಸ್ಥಾನ ಗೆಲ್ಲುತ್ತದೆ. ಹೀಗಿದ್ದಾಗ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯ ಕಂಡುಬರುತ್ತಿಲ್ಲ. ಇದನ್ನೇ ಕುಮಾರಸ್ವಾಮಿಯವರು ಹೇಳುತ್ತಿರುವುದು ಎಂದು ಮಧು ಬಂಗಾರಪ್ಪ ಹೇಳಿದರು.
ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್ ಮತ್ತು ಕುಮಾರಸ್ವಾಮಿ ನಡುವಿನ ಭಿನ್ನಾಭಿಪ್ರಾಯವನ್ನು ದೇವೇಗೌಡರು ಬಗೆಹರಿಸುತ್ತಾರೆ. ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ಉತ್ತಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಿಬಿಎಂಪಿ ದೋಸ್ತಿ
ಜೆಡಿಎಸ್ ಮತ್ತು ಕಾಂಗ್ರೆಸ್ ಬಿಬಿಎಂಪಿಯಲ್ಲಿ ದೋಸ್ತಿ ಮಾಡಿಕೊಂಡು ಅಧಿಕಾರ ಹಂಚಿಕೊಂಡು ಬಿಜೆಪಿಯನ್ನು ಆಡಳಿತದಿಂದ ದೂರ ಇಟ್ಟಿವೆ. ಶಾಸಕ ಜಮೀರ್ ಅವರೇ ಮುಂದಾಗಿ ಮೈತ್ರಿ ಮಾತುಕತೆ ನಡೆಸಿ ಯಶಸ್ವಿಯಾಗಿದ್ದರು. ವಿಧಾನಪರಿಷತ್ ನಲ್ಲೂ ಅಂಥದ್ದೆ ಕೆಲಸಕ್ಕೆ ಮುಂದಾಗಿದ್ದರು.
ಕುಮಾರಸ್ವಾಮಿ ಎಚ್ಚರಿಕೆ
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತನಾಡುತ್ತಿರುವ ಪಕ್ಷದ ಶಾಸಕರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದರು. ನಂತರ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ ಎಂದು ದೇವೇಗೌಡರು ಸ್ಪಷ್ಟನೆ ನೀಡಿದ್ದರು.
ಸಾರಿ ಕೇಳಿದ್ದ ಜಮೀರ್
ಮೈತ್ರಿ ಮಾತುಕತೆ ಮುರಿದುಬಿದ್ದ ಬಳಿಕ ಶಾಸಕ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು. ಜಮೀರ್ ಅಹಮದ್ ಖಾನ್ ಮತ್ತು ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಸಮಯ ವ್ಯರ್ಥ ಮಾಡಿದ್ದಕ್ಕೆ ಮುಖ್ಯಮಂತ್ರಿಗಳ ಬಳಿ ಸಾರಿ ಎಂದಿದ್ದರು.
ಒಂದೆರಡು ಹೆಚ್ಚಿಗೆ ಸ್ಥಾನ ಬೇಕಿಲ್ಲ
ಕುಮಾರಸ್ವಾಮಿ ಆಣತಿಯಂತೆ ಜೆಡಿಎಸ್ ತನ್ನ ಮುಂದಿನ ನಡೆ ನಡೆಸಲಿದೆ. ವಿಧಾಣಪರಿಷತ್ ನಲ್ಲಿ ಮೈತ್ರಿ ಮಾಡಿಕೊಂಡು ಒಂದೆರಡು ಸ್ಥಾನ ಹೆಚ್ಚಿಗೆ ಗಳಿಸಬಹುದು. ಆದರೆ ಇದಾಗಲೇ ಬಿಬಿಎಂಪಿಯಲ್ಲಿ ಮೈತ್ರಿ ಮಾಡಿಕೊಂಡು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿರುವ ಸಂಗತಿ ನಾಯಕರಿಗೆ ಗೊತ್ತು. ಅದನ್ನು ಮೊದಲು ನಿವಾರಣೆ ಮಾಡುವುದು ಜೆಡಿಎಸ್ ಆದ್ಯತೆ.
ಲೆಕ್ಕಾಚಾರವೇನು?
ಮೈತ್ರಿ ಬೆಂಗಳೂರಿಗೆ ಮಾತ್ರ ಸೀಮಿತ. ಬೆಂಗಳೂರು ಅಭಿವೃದ್ಧಿಗಾಗಿ ಕೈ ಜೋಡಿಸಿದ್ದೇವೆ. ರಾಜ್ಯ ರಾಜಕಾರಣಕ್ಕೂ ಕಾಂಗ್ರೆಸ್ ನೊಂದಿಗಿನ ಮೈತ್ರಿಗೂ ಸಂಬಂಧವಿಲ್ಲ ಎಂಬುದನ್ನು ಜನರಿಗೆ ಮತ್ತು ಕಾರ್ಯಕರ್ತರಿಗೆ ತೊರಿಸಬೇಕಾದ್ದು ಜೆಡಿಎಸ್ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ.