ಆತ ಕರೆದಾಗ ಹೋಗುತ್ತೇನೆ: ದೇವೇಗೌಡ
ಬೆಂಗಳೂರು, ಮಾ. 27: 'ಇಲ್ಲಿಯವರೆಗೆ ನಾನು ಯಾರಿಗೂ ದ್ರೋಹ ಮಾಡಿಲ್ಲ. ಮತ್ತೊಮ್ಮೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಅದನ್ನು ಕಣ್ತುಂಬಿ ನೋಡಬೇಕು. ದೇವರು ಕರೆದಾಗ ಹೋಗಲು ಸಿದ್ಧ' ಇದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸ್ಪಷ್ಟ ನುಡಿಗಳು.
ಬೆಂಗಳೂರಿನ ಓಕಳೀಪುರದ ಬಳಿ ಪಕ್ಷದ ನೂತನ ಕಚೇರಿ ಉದ್ಘಾಟನೆ ನೆರವೇರಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು. ಅನಿವಾರ್ಯ ಕಾರಣದಿಂದ ಕಾಂಗ್ರೆಸ್ ಭವನ ಪ್ರವೇಶಿಸಬೇಕಾಗಿ ಬಂತು. ನಮ್ಮ ಪಕ್ಷದಲ್ಲಿದ್ದವರೇ ಅಲ್ಲಿ ಕಾಣಿಸಿಕೊಂಡರು ಅಲ್ಲದೇ ಕುಣಿದು ಕುಪ್ಪಳಿಸಿದರು. ಇಂಥ ಘಟನೆಗಳು ಮನಸ್ಸಿಗೆ ತೀವ್ರ ನೋವು ತರುತ್ತವೆ ಎಂದು ಹೇಳಿದರು.[ಪರಮೇಶ್ವರ, ದೇವೇಗೌಡ ನಡುವೆ ನಿಂಬೆಹಣ್ಣು, ಬಟ್ಟೆ ಜಗಳ!]
ಜನರ ಮುಂದೆ ಕೈ ಮುಗಿದು ನಿಂತಿದ್ದೇವೆ. ಕನ್ನಡಿಗರ ಆಶೀರ್ವಾದ ಇರುವವರೆಗೂ ನಾನು ಗಟ್ಟಿಯಾಗಿರುತ್ತೇನೆ. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ರಾಜಕೀಯವಾಗಿ ನಿವೃತ್ತಿ ಹೊಂದುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮರೆತು ಎಲ್ಲರೂ ಒಂದಾಗಿ ಪಕ್ಷ ಕಟ್ಟಬೇಕಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ನೆಲೆನಿಲ್ಲುವಂತೆ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.[ಗೌಡರ ವಿರುದ್ಧ ಗುಡುಗಿದ ಜಮೀರ್, ಚೆಲುವರಾಯಸ್ವಾಮಿ]
ಹಿಂದೆ ಬಿಜೆಪಿಯಿಂದ ಮೈತ್ರಿ ಕಳೆದುಕೊಂಡ ಮೇಲೆ ಜೆಡಿಎಸ್ ಗೆ ಅಧಿಕಾರ ಕನಸಾಗಿಯೇ ಉಳಿದಿದೆ. ಅಲ್ಲದೇ ಇತ್ತೀಚೆಗೆ ಪಕ್ಷದೊಳಗೆ ಕೆಲ ಶಾಸಕರು ನಡೆದುಕೊಳ್ಳುತ್ತಿರುವ ರೀತಿ ದೊಡ್ಡ ಗೌಡರಿಗೆ ಅಸಮಾಧಾನ ತಂದಿದೆ ಎಂಬ ಅಂಶಗಳು ಅವರ ಮಾತಿನಿಂದಲೇ ಗೊತ್ತಾದವು. ದೇವೇಗೌಡರು ತಾನು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು.