ರಾಕ್ಷಸಿ ಅಂದರೆ ಜಯಲಲಿತಾ, ಪ್ರಜಾಪ್ರಭುತ್ವ ಅಂದರೆ ಪ್ರತಿಭಟನೆ
ಬೆಂಗಳೂರು, ಸೆಪ್ಟೆಂಬರ್ 7: 'ಜಯಲಲಿತಾ ರಾಕ್ಷಸಿ. ಆಕೆಗೆ ಎಲ್ಲವೂ ಬೇಕು...'-ಹೀಗೆ ಗುಡುಗಿದವರು ವಾಟಾಳ್ ನಾಗರಾಜ್. ಅಂದಹಾಗೆ, ವಾಟಾಳ್ ನಾಗರಾಜ್ ಅವರು ಸೆ.9ರ ಬಂದ್ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ.
'ಅಕೆಯಂಥ ಮೂರ್ಖಳು ಯಾರೂ ಇಲ್ಲ. ನಮ್ಮ ಹೋರಾಟ ಆಸೆಬುರುಕಿ ಜಯಲಲಿತಾ ಹಾಗೂ ಅಮಾನವೀಯ ಸುಪ್ರೀಂ ಕೋರ್ಟ್ ವಿರುದ್ಧ. ಆ ರಾಕ್ಷಸಿ (ಜಯಲಲಿತಾ)ಗೆ ಎಲ್ಲವೂ ತನಗೇ ಬೇಕು. ಪ್ರತಿ ಸಲ ಮುಖ್ಯಮಂತ್ರಿ ಆದಾಗಲೂ ಕಾವೇರಿ ವಿವಾದ ತರ್ತಾಳೆ. 1991ರಲ್ಲಿ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಸಂಘಟನೆ ಅವರ ಜತೆಗೆ ನಿಂತು, ನೀರು ಬಿಡದಂತೆ ತಡೆದ್ವಿ.'[ಟೀಕೆ ಎದುರಿಸಿ, ಕೇಸ್ ಹಾಕ್ಬೇಡಿ: ಜಯಲಲಿತಾಗೆ ಸುಪ್ರೀಂಕೋರ್ಟ್ ಪಾಠ]
'ಪ್ರಜಾಪ್ರಭುತ್ವ ಅಂದರೆ ಪ್ರತಿಭಟನೆ. ಹಾಗಂತ ಪ್ರತಿಭಟಿಸುವುದಕ್ಕೆ ಮೀಸಲಲ್ಲ'. 'ನಾವು ಇದರಿಂದ ಏನು ಸಾಧಿಸ್ತೀವಿ ಅಂದರೆ ಅದು ಬೇರೆ ಕಥೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು ಜನರ ಹಕ್ಕು. ನಮಗೆ ಅನ್ಯಾಯ ಆಗಿದೆ, ನಾವು ಪ್ರತಿಭಟಿಸ್ತೀವಿ.'
'ಜನರು ಅವರ ಅಭಿಪ್ರಾಯ ತಿಳಿಸಬೇಕು. ಈ ಪ್ರಕರಣದಲ್ಲಿ ಕೋರ್ಟ್ ನಮ್ಮ ಪಾಲಿಗೆ ಕುರುಡುಗಣ್ಣಾಗಿದೆ. ಅದನ್ನ ನಾವು ಎತ್ತಿ ತೋರಿಸ್ತಿದೀವಿ.' 'ನಾವೀಗ ಪ್ರತಿಭಟನೆ ಮಾಡದಿದ್ದರೆ ಮುಂದಿನ ದಿನಗಳು ಕಷ್ಟವಾಗಲಿವೆ. ನಾವು ಕೇಳ್ತಿರೋದಾದರೂ ಏನು, ತೀರ್ಪನ್ನ ಮರುಪರಿಶೀಲಿಸಿ ಅಂತಷ್ಟೆ. ತೀರ್ಪಿಗೂ ಮುಂಚೆ ಕೆಆರ್ ಎಸ್ ಪರಿಸ್ಥಿತಿ ಏನು ಅಂತ ತಿಳಿದುಕೊಳ್ಳುವುದಕ್ಕೆ ಕೋರ್ಟ್ ನಿಂದ ಪ್ರತಿನಿಧಿಗಳನ್ನ ಕಳಿಸಬೇಕಿತ್ತು'.[ಸೆ.9ರ ಕರ್ನಾಟಕ ಬಂದ್ ಬಿಸಿ ಎಲ್ಲಿಗೆ ತಟ್ಟಲಿದೆ?]
ಕಾವೇರಿ ಹೋರಾಟ, ಪರಭಾಷೆ ಚಿತ್ರಗಳ ಡಬ್ಬಿಂಗ್, ಬೆಲೆಯೇರಿಕೆ, ಕನ್ನಡ ಭಾಷೆ, ನೆಲ-ಜಲದ ವಿಚಾರದಲ್ಲಿ ವಾಟಾಳ್ ನಾಗರಾಜ್ ಸದಾ ಹೋರಾಟದ ಮೂಡ್ ನಲ್ಲಿ ಇರುತ್ತಾರೆ. ಬಂದ್, ಪ್ರತಿಭಟನೆ ಡಿಫರೆಂಟ್ ಆಗಿ ಮಾಡುವುದರಲ್ಲೂ ಅವರೇ ಫಸ್ಟ್.[ಕರ್ನಾಟಕ ಬಂದ್ ಗೆ 1,200 ಸಂಘಟನೆಗಳ ಬೆಂಬಲ]
ಸೆಪ್ಟೆಂಬರ್ 9ನೇ ತಾರೀಕು ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿದೆ. ತಮಿಳುನಾಡಿಗೆ ಕಾವೇರಿ ನೀರೇ ಬಿಡುವುದು ಹೌದಾದರೆ ಇದೆಂಥ ಪ್ರತಿಭಟನೆ ಅನ್ನೋರು ಇರುವ ಹಾಗೆಯೇ, ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ನಮ್ಮ ಪ್ರತಿಭಟನೆ ಹೀಗೂ ದಾಖಲಿಸದಿದ್ದರೆ ಹೇಗೆ ಎಂದು ಪ್ರಶ್ನಿಸುವವರೂ ಇದ್ದಾರೆ. ವಾಟಾಳ್ ನಾಗರಾಜ್ ಅವರ ಮಾತುಗಳಿಗೆ ನಿಮ್ಮ ಸಹಮತ ಇದೆಯೇ? ನಿಮ್ಮ ಅಭಿಪ್ರಾಯ ತಿಳಿಸಬಹುದು.