ಜಯಲಲಿತಾ ಅಕ್ರಮ ಆಸ್ತಿ ಕೇಸ್ : ಕೋರ್ಟ್ ತೀರ್ಪಿನ ತಪ್ಪುಗಳು
ಬೆಂಗಳೂರು, ಜನವರಿ 21 : ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣದ ಮೇಲ್ಮನವಿ ಅರ್ಜಿಯ ವಿಚಾರಣೆ ಫೆ.2ರಿಂದ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ಜಯಲಲಿತಾ ಅವರನ್ನು ಖುಲಾಸೆಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಮೇಲ್ಮನವಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಹೈಕೋರ್ಟ್ ತೀರ್ಪಿನಲ್ಲಿರುವ ಹಲವು ತಪ್ಪು ಅಂಶಗಳ ಕುರಿತು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡನೆ ಮಾಡಲಿದೆ. ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯದ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ದಂಡದ ತೀರ್ಪನ್ನು ಜಾರಿಗೆ ತರಬೇಕು ಎಂದು ಮನವಿ ಮಾಡಲಿದೆ. [ಅಕ್ರಮ ಆಸ್ತಿ ಕೇಸ್ : ಕರ್ನಾಟಕದ ವಾದವೇನು?]
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ಅವರು ದೋಷಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು. ಜಯಲಲಿತಾ ಅವರು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕರ್ನಾಟಕ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿ ಕೋರ್ಟ್ ಎಲ್ಲರಿಗೂ ಜಾಮೀನು ನೀಡಿತ್ತು. [ಜಯಾ ಪ್ರಕರಣದ timeline]
ಜಯಲಲಿತಾ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ವಿಶೇಷ ಪೀಠದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು 2015ರ ಮೇ 11ರಂದು ತೀರ್ಪು ಪ್ರಕಟಿಸಿದ್ದರು. ಜಯಲಲಿತಾ ಸೇರಿದಂತೆ ಎಲ್ಲರನ್ನು ಖುಲಾಸೆಗೊಳಿಸಿದ್ದರು. ನಂತರ ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದರು. ಕರ್ನಾಟಕ ಸರ್ಕಾರ ವಾದಿಸುವ 10 ಪ್ರಮುಖ ಅಂಶಗಳು.....
ಆಸ್ತಿ ಮೊತ್ತ ಹೆಚ್ಚಾಗಬೇಕು
ಆಕ್ರಮ ಆಸ್ತಿಯ ಮೊತ್ತ ಹೆಚ್ಚಾಗಬೇಕು ಎಂದು ಕರ್ನಾಟಕ ಸರ್ಕಾರ ವಾದ ಮಂಡನೆ ಮಾಡಲಿದೆ. ಹೈಕೋರ್ಟ್ ಅಕ್ರಮ ಆಸ್ತಿ ಮೊತ್ತ 2,82,36,812 ಎಂದು ಹೇಳಿದೆ. ಆದರೆ, ಅದು 16,32,36,812 ರೂ.ಗಳಾಗಬೇಕು ಎಂದು ವಾದ ಮಂಡಿಸಲಿದೆ. ರಾಷ್ಟ್ರೀಯ ಬ್ಯಾಂಕ್ಗಳಿಂದ ಪಡೆದ ಸಾಲದ ಮೊತ್ತವನ್ನು ಇದರಲ್ಲಿ ಸೇರಿಸಲಾಗಿದೆಯೇ? ಎಂದು ಸರ್ಕಾರ ಪ್ರಶ್ನಿಸಲಿದೆ.
ಪ್ರತಿವಾದಿಯನ್ನಾಗಿ ಮಾಡಿಲ್ಲ
ಜಯಲಲಿತಾ ಅವರು ಮೇಲ್ಮನವಿ ಸಲ್ಲಿಸುವಾಗ ಕರ್ನಾಟಕ ಹೈಕೋರ್ಟ್ನಲ್ಲಿ ಕರ್ನಾಟಕ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ಅರ್ಜಿಯ ವಿಚಾರಣೆ ಸಮಯದಲ್ಲಿ ಕರ್ನಾಟಕದ ಸರ್ಕಾರವನ್ನು ಪರಿಗಣಿಸಿಲ್ಲ ಎಂದು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಲಾಗುತ್ತದೆ.
ವಾದ ಮಂಡನೆ ಮಾಡಲು ಅವಕಾಶ ನೀಡಿಲ್ಲ
ಮೇಲ್ಮನವಿ ಅರ್ಜಿಯ ವಿಚಾರಣೆ ಸಮಯದಲ್ಲಿ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಲು ಅವಕಾಶ ನೀಡಿಲ್ಲ. ವಿಶೇಷ ಸರ್ಕಾರಿ ಅಭಿಯೋಜಕರಿಗೂ ಲಿಖಿತ ದಾಖಲೆ ಸಲ್ಲಿಸಲು ಕೇವಲ ಒಂದು ದಿನದ ಸಮಯ ನೀಡಲಾಗಿದೆ ಎಂದು ಕರ್ನಾಟಕ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಲಿದೆ.
ಹೈಕೋರ್ಟ್ ನಿಯಮಗಳನ್ನು ಪಾಲಿಸಿಲ್ಲ
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪೀಠ ಅಕ್ರಮ ಆಸ್ತಿಗಳಿಕೆ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದಾಗ ಮುಂದಿನ ವಿಚಾರಣೆ ವೇಳೆ ಹಲವು ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿತ್ತು. ಆದರೆ, ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಇದನ್ನು ಪಾಲಿಸಿಲ್ಲ ಎಂದು ಕರ್ನಾಟಕ ವಾದ ಮಂಡಿಸಲಿದೆ.
ಕಂಪನಿಗಳ ಆಸ್ತಿಗಳನ್ನು ಸೇರಿಸಿಲ್ಲ
ಹೈಕೋರ್ಟ್ ಆಕ್ರಮ ಆಸ್ತಿಗಳ ಲೆಕ್ಕವನ್ನು ಮಾಡುವಾಗ ಜಯಲಲಿತಾ ಅವರ ಕಂಪನಿಗಳಿಂದ ಬಂದ ಆದಾಯವನ್ನು ಸೇರಿಸಿಲ್ಲ. ಇದರಿಂದಾಗಿ ಹೈಕೋರ್ಟ್ ತೀರ್ಪಿನಲ್ಲಿಯೇ ತಪ್ಪುಗಳಾಗಿವೆ ಎಂದು ವಾದಿಸಲಿದೆ.
ಬೇನಾಮಿ ಆಸ್ತಿಗಳನ್ನು ಪರಿಗಣಿಸಿಲ್ಲ
ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 13 (1) ಇ ಪ್ರಕಾರ ಆರೋಪಿಯ ಹೆಸರಿನಲ್ಲಿರುವ ಆಸ್ತಿಯ ಜೊತೆ ಬೇನಾಮಿ ಆಸ್ತಿಯನ್ನು ಪರಿಗಣನೆ ಮಾಡಬೇಕು. ಆದರೆ, ಕರ್ನಾಟಕ ಹೈಕೋರ್ಟ್ ಜಯಲಲಿತಾ ಅವರ ಆಸ್ತಿಯನ್ನು ಮಾತ್ರ ಪರಿಗಣಿಸಿದೆ ಎಂದು ಸರ್ಕಾರ ಕೋರ್ಟ್ಗೆ ತಿಳಿಸಲಿದೆ.
ಅಕ್ರಮ ಅಸ್ತಿಯ ಶೇಕಡಾವಾರು ಲೆಕ್ಕದಲ್ಲಿ ತಪ್ಪಿದೆ
ಕರ್ನಾಟಕ ಹೈಕೋರ್ಟ್ ಅಕ್ರಮ ಆಸ್ತಿಯ ಶೇಕಡಾವಾರು ಲೆಕ್ಕ ಮಾಡುವಾಗ ತಪ್ಪಾಗಿದೆ. ಅಕ್ರಮ ಆಸ್ತಿಯ ಮೊತ್ತ 34.5ರಷ್ಟಾಗಬೇಕು. ಆದರೆ, ಕೋರ್ಟ್ 8.2ರಷ್ಟಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಿದೆ.
ಉದ್ಯಮಗಳಿಂದ ಬಂದ ಆದಾಯ ಪರಿಗಣಿಸಿಲ್ಲ
ಕರ್ನಾಟಕ ಹೈಕೋರ್ಟ್ 146 ಆಸ್ತಿಗಳ ಖರೀದಿಗಳ ಪೈಕಿ 97 ಸೇಲ್ ಡೀಡ್ಗಳನ್ನು ಮಾತ್ರ ಪರಿಗಣಿಸಿದೆ. ಸ್ಥಿರಾಸ್ತಿ ಮೌಲ್ಯಗಳನ್ನು ಸೇರಿಸಿಲ್ಲ ಮತ್ತು ಜಯಲಲಿತಾ ಅವರ ಕಂಪನಿಗಳಿಂದ ಬಂದ ಆದಾಯವನ್ನು ಮೌಲ್ಯ ಮಾಪನ ಮಾಡುವಾಗ ಸೇರಿಸಿಲ್ಲ ಎಂದು ಸರ್ಕಾರ ವಾದಿಸಲಿದೆ.
ಉಡುಗೊರೆ ಎಂದು ಪರಿಗಣಿಸಿದ್ದೇಕೆ?
ಅಕ್ರಮ ಆಸ್ತಿಗಳಿಕೆಯ ತನಿಖೆ ನಡೆಸಿದ ಸಿಬಿಐ 1,50,00,00 ರೂ.ಗಳನ್ನು ಅಕ್ರಮ ಆಸ್ತಿ ಎಂದು ಪಟ್ಟಿ ಮಾಡಿತ್ತು. ಆದರೆ, ಹೈಕೋರ್ಟ್ ಇದು ಕಾನೂನು ಬದ್ಧವಾಗಿದೆ. ಉಡುಗೊರೆ ಮೂಲಕ ಇದನ್ನು ಪಡೆಯಲಾಗಿದೆ ಎಂದು ತೀರ್ಪು ನೀಡಿದೆ ವಾದ ಮಂಡಿಸಲಿದೆ.
ತೀರ್ಪನ್ನು ಪರಿಗಣಿಸಿಲ್ಲ
ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸುವಾಗ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನ ಹಲವು ಅಂಶಗಳನ್ನು ಪರಿಗಣಿಸಿಲ್ಲ. ಅಸ್ತಿಗಳಿಕೆ ಬಗ್ಗೆ ಸಿಬಿಐ ವಿಶೇಷ ನ್ಯಾಯಾಲಯ ಹಲವು ಅಂಶಗಳನ್ನು ಸ್ಪಷ್ಟವಾಗಿ ಹೇಳಿತ್ತು. ಅದನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ವಾದ ಮಂಡಿಸಲಿದೆ.