ಜಯಾ ಆರೋಪ ಮುಕ್ತ : ಕನ್ನಡ ಪತ್ರಿಕೆಗಳ ಶೀರ್ಷಿಕೆ ಹೇಗಿದೆ?
ಬೆಂಗಳೂರು, ಮೇ 12 : ಸುಮಾರು 18 ವರ್ಷಗಳಿಂದ ಜಯಲಲಿತಾ ಅವರನ್ನು ಕಾಡುತ್ತಿದ್ದ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಅವರು ಆರೋಪ ಮುಕ್ತವಾಗಿದ್ದಾರೆ. ತಮಿಳುನಾಡಿನಲ್ಲಿ 'ಅಮ್ಮಾ' ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಕೆಲವೇ ದಿನಗಳಲ್ಲಿ ಜಯಲಲಿತಾ ಪುನಃ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಚಾರಣೆ ಕರ್ನಾಟಕದಲ್ಲಿ ನಡೆದಿದ್ದು, ಇಲ್ಲಿಯೇ ತೀರ್ಪು ಪ್ರಕಟಗೊಂಡು ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಕರ್ನಾಟಕ ಹೈಕೋರ್ಟ್ನಲ್ಲಿಯೇ ಅವರು ಮೇಲ್ಮನವಿ ಸಲ್ಲಿಸಿ ಇಲ್ಲಿಯೇ ಆರೋಪ ಮುಕ್ತವಾಗಿದ್ದಾರೆ. [ಗುರು ಎಂಜಿಆರ್ ಮಾರ್ಗದಲ್ಲೇ ಸಾಗುತ್ತೇನೆ: ಜಯಲಲಿತಾ]
ಕರ್ನಾಟಕದ ಪತ್ರಿಕೆಗಳು ಜಯಲಲಿತಾ ವಿಚಾರಣೆ ಆರಂಭವಾದದಿನದಿಂದ ಅವರ ಸುದ್ದಿಗೆ ಹೆಚ್ಚು ಮಹತ್ವ ನೀಡಿವೆ. ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಪ್ರಕಟಗೊಂಡಾಗ, ಹೈಕೋರ್ಟ್ ಜಾಮೀನು ತಿರಸ್ಕರಿಸಿದಾಗ, ಸುಪ್ರೀಂ ಜಾಮೀನು ನೀಡಿದಾಗ ವಿವರವಾದ ವರದಿಗಳನ್ನು ಪ್ರಕಟಿಸಿವೆ.[ಟ್ವೀಟೋತ್ತರ : ಈ ದೇಶವನ್ನು ಆ ದೇವರೇ ಕಾಪಾಡಬೇಕು]
ಸೋಮವಾರ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ದೋಷಮುಕ್ತವಾದ ಜಯಲಲಿತಾ ಪುನಃ ಕನ್ನಡ ಪತ್ರಿಕೆಗಳ ಮುಖಪುಟ ಅಲಂಕರಿಸಿದ್ದಾರೆ. 'ಜಯಲಲಿತಾ ಅಪರಾಧಿಯಲ್ಲ', 'ತಮಿಳುನಾಡಿಗೆ ಅಮ್ಮನ ದಿನ', 'ಜಯಾ ಅಕ್ರಮ ಸಕ್ರಮ' ಮುಂತಾದ ಆಕರ್ಷಕ ಶೀರ್ಷಿಕೆಯೊಂದಿಗೆ ಮಂಗಳವಾರದ ಕನ್ನಡ ಪತ್ರಿಕೆಗಳು ಕಂಗೊಳಿಸುತ್ತಿವೆ. ಯಾವ ಪತ್ರಿಕೆಯ ಶೀರ್ಷಿಕೆ ಹೇಗಿದೆ ನೋಡಿ....
'ತಮಿಳುನಾಡಿಗೆ ಅಮ್ಮನ ದಿನ'
ವಿಜಯವಾಣಿ 'ತಮಿಳುನಾಡಿಗೆ ಅಮ್ಮನ ದಿನ' ಎಂಬ ಶೀರ್ಷಿಕೆಯೊಂದಿಗೆ ಜಯಲಲಿತಾ ಆರೋಪ ಮುಕ್ತಗೊಂಡ ಸುದ್ದಿಯನ್ನು ಪ್ರಕಟಿಸಿದೆ. ಮುಖಪುಟದಲ್ಲಿ ಹೈಕೋರ್ಟ್ ತೀರ್ಪಿನ ಪ್ರಮುಖ ಅಂಶಗಳನ್ನು ನೀಡಿದೆ. ಜಯಲಲಿತಾ ಮತ್ತು ಕರ್ನಾಟಕ ಹೈಕೋರ್ಟ್ ಫೋಟೋವನ್ನು ಹಾಕಿ ಗಮನ ಸೆಳೆದಿದೆ.
'ಜಯಲಲಿತಾ ಅಪರಾಧಿಯಲ್ಲ'
'ಜಯಲಲಿತಾ ಅಪರಾಧಿಯಲ್ಲ' ಎಂಬ ಶೀರ್ಷಿಕೆಯನ್ನು ಪ್ರಜಾವಾಣಿ ನೀಡಿದ್ದು, ಅಮ್ಮನ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ನೃತ್ಯ ಮಾಡುತ್ತಿರುವ ಫೋಟೋವನ್ನು ಪ್ರಕಟಿಸಿದೆ. ಜಯಲಲಿತಾ ಅವರು ಚಪ್ಪಾಳೆ ತಟ್ಟುತ್ತಿರುವ ಫೋಟೋ ಮುಖಪುಟಕ್ಕೆ ಮತ್ತಷ್ಟು ಮೆರಗು ನೀಡಿದೆ. ಜಯಲಲಿತಾ ರಾಜಕೀಯ ಕಡುವೈರಿ ಕರುಣಾನಿಧಿ ಅವರ ಪ್ರತಿಕ್ರಿಯೆನ್ನು ಮುಖಪುಟದಲ್ಲಿ ಹಾಕಿದೆ.
'ಜಯಾ ಅಕ್ರಮ ಸಕ್ರಮ'
ಅಕ್ರಮ-ಸಕ್ರಮ ಯೋಜನೆ ಚಿಂತನೆಯಲ್ಲಿ 'ಜಯಾ ಅಕ್ರಮ ಸಕ್ರಮ' ಎಂಬ ಶೀರ್ಷಿಕೆಯನ್ನು ಕನ್ನಡ ಪ್ರಭ ನೀಡಿದೆ. ಜಯಾಲಲಿತಾ ಅಭಿಮಾನಿಗಳ ಸಂಭ್ರಮಾಚರಣೆ ಚಿತ್ರ ಮೊದಲಪುಟದಲ್ಲಿ ರಾರಾಜಿಸುತ್ತಿದೆ. ಮತ್ತೆ ಸಿಎಂ ಗಾದಿಗೆ ಅಮ್ಮಾ ಎಂಬ ಉಪ ಶೀರ್ಷಿಕೆಯನ್ನು ನೀಡಿದೆ. ಬುಲೆಟ್ ಪಾಯಿಂಟ್ಗಳಲ್ಲಿ ತೀರ್ಪಿನ ಅಂಶಗಳನ್ನು ಮುಖಪುಟದಲ್ಲಿ ನೀಡಿದೆ.
'ಜಯಾ ರಾಜಕೀಯ ಪುನರ್ಜನ್ಮ'
ವಿಜಯ ಕರ್ನಾಟಕ 'ಜಯಾ ರಾಜಕೀಯ ಪುನರ್ಜನ್ಮ' ಎಂಬ ಶೀರ್ಷಿಕೆಯೊಂದಿಗೆ ಜಯಲಲಿತಾ ಆರೋಪ ಮುಕ್ತವಾದ ವರದಿಗಳನ್ನು ಪ್ರಕಟಿಸಿದೆ. ಮೇ 17ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಂಭವವಿದೆ ಎಂದು ಹೇಳಿದೆ. ಜಯಲಲಿತಾ, ಕರುಣಾನಿಧಿ, ಪ್ರಕರಣದ ದೂರುದಾರ ಸುಬ್ರಮಣ್ಯ ಸ್ವಾಮಿ ಅವರ ಫೋಟೋಗಳು ಮುಖಪುಟದಲ್ಲಿ ಸೇರಿವೆ.
'ಜಯಾ ಖುಲಾಸೆ'
ಹೊಸದಿಗಂತ 'ಜಯಾ ಖುಲಾಸೆ'ಎಂಬ ಶೀರ್ಷಿಕೆಯೊಂದಿಗೆ ಮುಖಪುಟದಲ್ಲಿ ಜಯಲಲಿತಾ ವರದಿಗಳನ್ನು ಪ್ರಕಟಿಸಿದೆ. ಜಯಲಲಿತಾ, ಜಯ ಅಭಿಮಾನಿಗಳ ಸಂಭ್ರಮಾಚರಣೆ ಚಿತ್ರಗಳು ಮುಖಪುಟ ಸೇರಿವೆ. ರಾಜೀನಾಮೆಗೆ ಸಿದ್ಧವಾದ ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಎಂಬ ಸುದ್ದಿಗೂ ಮುಖಪುಟದಲ್ಲಿ ಜಾಗ ನೀಡಲಾಗಿದೆ.
ಉದಯವಾಣಿ ಹೆಡ್ಲೈನ್ ಹೇಗಿದೆ ಗೊತ್ತೆ?
ಜಯಲಲಿತಾ ಪ್ರಕರಣದ ಪ್ರಮುಖ ಮುಖ್ಯಾಂಶಗಳನ್ನು ಉಪ ಶೀರ್ಷಿಕೆಯಾಗಿ ನೀಡಿ ಉದಯವಾಣಿ ವರದಿಗಳನ್ನು ಪ್ರಕಟಿಸಿದೆ. ಜಯಾ ರಾಜಕೀಯ ಮರು ಪ್ರವೇಶ ಎಂಬ ಸುದ್ದಿಯನ್ನು ನೀಡಿದೆ. ಪ್ರಕರಣದ ಐದು ಪ್ರಮುಖ ಅಂಶಗಳನ್ನು ಬುಲೆಟ್ ಪಾಯಿಂಟ್ನಲ್ಲಿ ನೀಡಲಾಗಿದೆ.
'ಜಯಾ ದೋಷಮುಕ್ತೆ'
ವಾರ್ತಾಭಾರತಿ 'ಜಯಾ ದೋಷಮುಕ್ತೆ' ಎಂಬ ಶೀರ್ಷಿಕೆ ನೀಡಿ ಅಮ್ಮಾ ಆರೋಪ ಮುಕ್ತಗೊಂಡ ವರದಿಗಳನ್ನು ಪ್ರಕಟಿಸಿದೆ. ಜಯಲಲಿತಾ ವಿಕ್ಟರಿ ಸಿಂಬಲ್ ತೋರಿಸುತ್ತಿರುವ ಚಿತ್ರವನ್ನು ಮುಖಪುಟದಲ್ಲಿ ಹಾಕಿದೆ.