ಜಯಲಲಿತಾ ಕೇಸ್ : ಬಿವಿ ಆಚಾರ್ಯ ನೂತನ ಎಸ್ಪಿಪಿ
ಬೆಂಗಳೂರು, ಏ. 28 : ಕರ್ನಾಟಕ ಸರ್ಕಾರ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರನ್ನು ನೇಮಕ ಮಾಡಿದೆ.
ಮಂಗಳವಾರ ಬೆಳಗ್ಗೆ ಕಾನೂನು ಸಚಿವರು ಮತ್ತು ಕಾನೂ ಕಾರ್ಯದರ್ಶಿಗಳ ಜೊತೆ ಬಿ.ವಿ.ಆಚಾರ್ಯ ಅವರು ಮಾತುಕತೆ ನಡೆಸಿದ್ದು, ಪ್ರಕರಣದಲ್ಲಿ ಸರ್ಕಾರದ ಪರವಾದ ಲಿಖಿತ ವಿವರಣೆಯನ್ನು ಹೈಕೋರ್ಟ್ ರಿಜಿಸ್ಟ್ರಾಟ್ ಅವರಿಗೆ ಸಲ್ಲಿಕೆ ಮಾಡಲಿದ್ದಾರೆ. [ಜಯಲಲಿತಾ ಮೇಲ್ಮನವಿ ತೀರ್ಪು ಏ.30ಕ್ಕೆ?]
ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಕರ್ನಾಟಕ ಸರ್ಕಾರ ಹೈಕೋರ್ಟ್ಗೆ ಲಿಖಿತ ವಿವರಣೆಯನ್ನು ಸಲ್ಲಿಸಬೇಕಾಗಿದೆ. ಸರ್ಕಾರದ ಲಿಖಿತ ವಿವರಣೆ ಮತ್ತು ಡಿಎಂಕೆ ಮುಖಂಡ ಅನ್ಬಳಗನ್ ಅವರು ಸಲ್ಲಿಸುವ ದಾಖಲೆಗಳ ಪರಿಶೀಲನೆ ನಂತರ ಪ್ರಕರಣದ ತೀರ್ಪು ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. [ಜಯಾ ಕೇಸ್: ಮ್ಯಾನ್ ಆಫ್ ದಿ ಮ್ಯಾಚ್ ಆಚಾರ್ಯ ಸಂದರ್ಶನ]
ಮೂಲಗಳ ಪ್ರಕಾರ ಸಿಬಿಐ ವಿಶೇಷ ನ್ಯಾಯಾಲಯ ಜಯಲಲಿತಾ ಮತ್ತು ಇತರ ನಾಲ್ವರಿಗೆ ವಿಧಿಸಿದ ಶಿಕ್ಷೆಯನ್ನು ಎತ್ತಿ ಹಿಡಿಯಬೇಕು ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್ ವಿಶೇಷ ಪೀಠಕ್ಕೆ ಸಲ್ಲಿಕೆ ಮಾಡುವ ಲಿಖಿತ ವಿವರಣೆಯಲ್ಲಿ ಮನವಿ ಮಾಡಲಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ವಿಶೇಷ ನ್ಯಾಯಪೀಠ ಪ್ರಕಟಿಸಲಿದ್ದು, ಅದಕ್ಕೂ ಮೊದಲು ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಡಿಎಂಕೆ ಮುಖಂಡ ಅನ್ಬಳಗನ್ ಮತ್ತು ಕರ್ನಾಟಕ ಸರ್ಕಾರದ ಲಿಖಿತ ವಿವರಣೆಗಳನ್ನು ಪರೀಶಿಲಿಸಲಿದ್ದಾರೆ.
ಈಗಾಗಲೇ ಪ್ರಕರಣದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಪ್ರಕಟಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಮೇ 1ರಿಂದ ಒಂದು ತಿಂಗಳ ಕಾಲ ಹೈಕೋರ್ಟ್ಗೆ ಬೇಸಿಗೆ ರಜೆ ಇದೆ. ಆದ್ದರಿಂದ, ಏ.30ರಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.