ಜನಾರ್ದನ ರೆಡ್ಡಿಗೆ ಜಾಮೀನು : ಯಾರು, ಏನು ಹೇಳಿದರು?
ಬೆಂಗಳೂರು, ಜ.21 : ಸುಮಾರು ಮೂರುವರೆವರ್ಷ ಗಳಿಂದ ಜೈಲುವಾಸ ಅನುಭವಿಸುತ್ತಿದ್ದ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿಯವರಿಗೆ ಸುಪ್ರೀಂಕೊರ್ಟ್ ಜಾಮೀನು ಮಂಜೂರು ಮಾಡಿದ್ದು, ಎರಡು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ರೆಡ್ಡಿ ಬಿಡುಗಡೆ ಬಗ್ಗೆ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಓಬಳಾಪುರಂ ಮೈನಿಂಗ್ ಕಂಪನಿಯ (ಒಎಂಸಿ) ಅಕ್ರಮ ಗಣಿ ಗಾರಿಕೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿಗೆ ಸುಪ್ರೀಂಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಜಾಮೀನು ಸಿಕ್ಕರೂ ರೆಡ್ಡಿ ತವರು ಜಿಲ್ಲೆ ಬಳ್ಳಾರಿಗೆ ಕಾಲಿಡುವಂತಿಲ್ಲ ಎಂಬ ಷರತ್ತು ಹಾಕಿದೆ. [ಗಾಲಿ ರೆಡ್ಡಿಗೆ ಜಾಮೀನು, ಬಳ್ಳಾರಿಯಲ್ಲಿ ಸಂಭ್ರಮ]
ಜನಾರ್ದನ ರೆಡ್ಡಿಯವರಿಗೆ ಜಾಮೀನು ದೊರಕಿರುವುದು ಸಂತಸ ತಂದಿದೆ. ಮುಂದಿನ ನಡೆ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ರೆಡ್ಡಿ ಬಿಡುಗಡೆ ಬಗ್ಗೆ ಯಾರು ಏನು ಹೇಳಿದರು ನೋಡೋಣ ಬನ್ನಿ. [ರೆಡ್ಡಿಗೆ ಷರತ್ತುಬದ್ಧ ಜಾಮೀನು ಮಂಜೂರು]
ಮೊದಲು ಅವರು ಜೈಲಿನಿಂದ ಹೊರಬರಲಿ
ಜನಾರ್ದನ ರೆಡ್ಡಿಯವರಿಗೆ ಜಾಮೀನು ದೊರೆತಿದೆ. ಮೊದಲು ಅವರು ಬಿಡುಗಡೆ ಆಗಿ ಹೊರಬರಲಿ. ಕುಟುಂಬ ಸ್ನೇಹಿತರೊಂದಿಗೆ ಬೆರೆಯಲಿ. ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕೇ ಬೇಡವೆ ಎಂಬುದು ಅವರ ವೈಯಕ್ತಿಕ ವಿಚಾರ. ಸದ್ಯಕ್ಕೆ ಪಕ್ಷ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ರಾಜಕೀಯ ಭವಿಷ್ಯದ ಬಗ್ಗೆ ಏನೂ ಹೇಳುವುದಿಲ್ಲ
ರೆಡ್ಡಿ ಬಿಡುಗಡೆ ಬಗ್ಗೆ ಮಾತನಾಡಿರುವ ಅವರ ಆಪ್ತ ಸ್ನೇಹಿತ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು, ರೆಡ್ಡಿ ಅವರ ಬಿಡುಗಡೆಯ ನಿರೀಕ್ಷೆಯಲ್ಲಿದ್ದೆವು. ಆ ದಿನ ಬಂದಿರುವುದರಿಂದ ಸಂತಸತಂದಿದೆ. ರೆಡ್ಡಿ ಅವರನ್ನು ಒಬ್ಬ ಸ್ನೇಹಿತನನ್ನಾಗಿ ಸ್ವೀಕರಿಸಿದ್ದೇನೆ. ಹೀಗಾಗಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಏನನ್ನೂ ಹೇಳಲು ಇಚ್ಛಿಸುವುದಿಲ್ಲ ಎಂದು ತಿಳಿಸಿದ್ದಾರೆ.
ವರಿಷ್ಠರು ತೀರ್ಮಾನಿಸಲಿದ್ದಾರೆ
ಜನಾರ್ದನ ರೆಡ್ಡಿ ಅವರಿಗೆ ಜಾಮೀನು ದೊರಕಿರುವ ಬಗ್ಗೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಜನಾರ್ದನ ರೆಡ್ಡಿಗೆ ಜಾಮೀನು ದೊರೆತಿರುವುದು ಸಂತಸ ತಂದಿದೆ. ನೆಮ್ಮದಿಯಾಗಿ ಕುಟುಂಬದೊಂದಿಗೆ ಕಾಲ ಕಳೆಯಲಿ. ಬಿಜೆಪಿಯಲ್ಲಿ ಅವರ ಪಾತ್ರ ಕುರಿತು ಮುಂದೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅವರಿಗೆ ಜಾಮೀನು ಸಿಕ್ಕಿದೆ ಅಷ್ಟೆ
ಬಳ್ಳಾರಿಯ ಗಣಿ ಉದ್ಯಮಿ ಟಪಾಲ್ ಗಣೇಶ್ ರೆಡ್ಡಿ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜಾಮೀನಿನ ಮೇಲೆ ಸಾಕಷ್ಟು ನಿಬಂಧನೆಗಳೊಂದಿಗೆ ಜನಾರ್ದನ ರೆಡ್ಡಿ ಹೊರ ಬರಲಿದ್ದಾರೆ. ಅವರು ನಿರಪರಾಧಿ ಅಲ್ಲ ಎಂದು ಸಾಬೀತಾಗಿಲ್ಲ, ಅವರ ವಿರುದ್ಧದ ಬಹಳಷ್ಟು ಪ್ರಕರಣಗಳು ಇತ್ಯರ್ಥವಾಗಬೇಕಿದೆ ಎಂದು ಹೇಳಿದ್ದಾರೆ.
ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ
ಜನಾರ್ದನ ರೆಡ್ಡಿ ಅವರಿಗೆ ಜಾಮೀನು ದೊರೆತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದೆ ಜೆ.ಶಾಂತ ಅವರು, ಜಾಮೀನು ದೊರಕಿರುವುದಕ್ಕೆ ಖುಷಿ ಆಗಿದೆ. ಬಿಜೆಪಿ ಸೇರುವುದು, ಬಿಡುವುದು ವರಿಷ್ಠರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ. ಅವರ ಕುಟುಂಬದವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಕುಟುಂಬಕ್ಕೆ ಬಹಳಷ್ಟು ಖುಷಿ ತಂದಿದೆ
ಜನಾರ್ದನ ರೆಡ್ಡಿ ಅವರಿಗೆ ಜಾಮೀನು ದೊರಕಿರುವ ಬಗ್ಗೆ ರೆಡ್ಡಿಯ ಕಿರಿಯ ಸಹೋದರ ಸೋಮಶೇಖರ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ನನಗೆ, ನಮ್ಮ ಕುಟುಂಬಕ್ಕೆ ಬಹಳಷ್ಟು ಖುಷಿ ತಂದಿದೆ ಎಂದು ಹೇಳಿದರು. ಸುಪ್ರೀಂಕೋರ್ಟ್ನಲ್ಲಿ ನಡೆದ ವಿಚಾರಣೆಯನ್ನು ನೋಡಲು ಸೋಮಶೇಖರ ರೆಡ್ಡಿ ದೆಹಲಿಗೆ ತೆರಳಿದ್ದರು.