ಭೀಕರ ಬರಗಾಲದಲ್ಲೂ 'ಶ್ರಮಬಿಂದು ಸಾಗರ'ದಲ್ಲಿ ನೀರೋ ನೀರು
ಈ ಸಲದ ಭೀಕರ ಬರಗಾಲಕ್ಕೆ ಕೃಷ್ಣಾ ತೀರದ ರೈತರು ಮೊದಲೇ ಎಚ್ಚೆತ್ತುಕೊಂಡಿದ್ದರು. ತಾವೇ ಹಣ ಸಂಗ್ರಹಿಸಿ ಶ್ರಮಬಿಂದು ಸಾಗರಕ್ಕೆ ನೀರು ತುಂಬಿಸಿದ್ದರು. ಇದರಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಕೃಷ್ಣಾ ತೀರದ ರೈತರಲ್ಲಿ ಸಂತಸ ಮೂಡಿಸಿದೆ.
ಜಮಖಂಡಿ, ಮಾರ್ಚ್ 29: ಈ ಸಲದ ಭೀಕರ ಬರಗಾಲಕ್ಕೆ ಕೃಷ್ಣಾ ತೀರದ ರೈತರು ಮೊದಲೇ ಎಚ್ಚೆತ್ತುಕೊಂಡಿದ್ದರು. ತಾವೇ ಹಣ ಸಂಗ್ರಹಿಸಿ ಶ್ರಮಬಿಂದು ಸಾಗರಕ್ಕೆ ನೀರು ತುಂಬಿಸಿದ್ದರು. ಇದರಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಕೃಷ್ಣಾ ತೀರದ ರೈತರಲ್ಲಿ ಸಂತಸ ಮೂಡಿಸಿದೆ.
ಕಳೆದ ಬೇಸಿಗೆಯ ಜನವರಿ ತಿಂಗಳಿನಲ್ಲೇ ನದಿ ಸಂಪೂರ್ಣ ಬತ್ತಿ ಬರಿದಾಗಿತ್ತು. ನದಿ ತೀರದ ಜನತೆ ನದಿ ಒಡಲಿನಲ್ಲಿ ಬಾವಿಗಳನ್ನು ತೋಡಿ ಜಾನುವಾರುಗಳಿಗೆ ನೀರು ಅಗೆಯುತ್ತಾ ಹನಿ ನೀರಿಗಾಗಿ ಪರದಾಡಿದ್ದರು.[ಬೇಸಿಗೆ 2017: ದಾವಣಗೆರೆ 'ಜಲ ಸಿರಿ' ಕಾಣದ ಶ್ರೀಮಂತ ಜಿಲ್ಲೆ]
ಆದರೆ ಈ ಬಾರಿ ಹಾಗಾಗಿಲ್ಲ. ಶಾಸಕ ಸಿದ್ದು ನ್ಯಾಮಗೌಡ ಅವರ ನೇತೃತ್ವದಲ್ಲಿ ರೈತರು ವಂತಿಗೆ ಸಂಗ್ರಹಿಸಿದ್ದರು. ಈ ಹಣದಲ್ಲಿ ಚಿಕ್ಕಪಡಸಲಗಿಯಿಂದ ಹಿಪ್ಪರಗಿ ಬ್ಯಾರೆಜ್ ಗೆ ಸುಮಾರು 39 ಕಿಮೀ ನದಿ ನೀರು ತಂದು ಶ್ರಮಬಿಂದು ಸಾಗರಕ್ಕೆ ನೀರು ತುಂಬಿಸಿದ್ದರು. ಇದರಿಂದ ಈ ಸಲ ರೈತರ ಬೆಳೆಗಳಿಗೂ, ಜನ ಜಾನುವಾರುಗಳಿಗೂ ನೀರಿನ ಕೊರತೆ ಇಲ್ಲದೆ ಒಳ್ಳೆ ಪಸಲಿನ ಲೆಕ್ಕಾಚಾರದಲ್ಲಿ ರೈತರಿದ್ದಾರೆ.
ರೈತರಿಂದ ನೀರು, ವಿದ್ಯುತ್ ಉಳಿತಾಯ:
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಅತ್ತ ಪಕ್ಕದ ಜಿಲ್ಲೆಗಳ ನದಿ ಒಡಲೂ ಖಾಲಿಯಾಗಿವೆ. ಇದರಿಂದ ನದಿಯಲ್ಲಿನ ನೀರು ಖಾಲಿಯಾದರೆ ಬೇರಡೆಯಿಂದ ನೀರು ಸಿಗುವ ಸಾಧ್ಯತೆ ಕಡಿಮೆ ಎಂದು ರೈತರು ಮನಗಂಡಿದ್ದರು.
ನದಿಯಲ್ಲಿನ ನೀರನ್ನು ಪ್ರತಿ ಭಾನುವಾರದ ದಿನ ಪಂಪ್ ಮಾಡುವುದನ್ನು ನಿಲ್ಲಿಸಿದ್ದರು. ಹೀಗೆ ತಿಂಗಳಿನಲ್ಲಿ ಐದು ದಿನ, ಒಟ್ಟಾರೆ ನಾಲ್ಕು ತಿಂಗಳಿನಲ್ಲಿ ಸುಮಾರು 20 ನೀರು ಬಳಕೆ ಮಾಡದೇ ಇದ್ದುದರಿಂದ 20 ದಿನಗಳವರೆಗೆ ಹೆಚ್ಚುವರಿಯಾಗಿ ನೀರು ಸಿಗಲಿದೆ.[ಭೀಕರ ಬರ, ಜನರ ಸುಲಿಗೆ ಮಾಡುತ್ತಿರುವ ಟ್ಯಾಂಕರ್ ಮಾಫಿಯಾ]
ಇದರಿಂದ ರೈತರಿಗೆ ಬೇಕಾದ ನೀರೂ ಉಳಿತಾಯವಾಗಿದೆ. ಜತೆಗೆ ವಿದ್ಯುತ್ ಕೂಡಾ ಉಳಿಕೆಯಾಗಿದೆ.
ರೈತರ ಪ್ರಕಾರ ಇನ್ನೂ ಒಂದು ತಿಂಗಳವರೆಗೆ ನದಿ ನೀರು ಖಾಲಿಯಾಗುವುದಿಲ್ಲ. ಆದರೆ ಮುಂದಿನ ದಿನಮಾನಗಳಲ್ಲಿ ಉಂಟಾಗುವ ನೀರಿನ ಕೊರತೆ ಬಗ್ಗೆ ಈಗಿನಿಂದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ನದಿಯಲ್ಲಿ ನೀರು ನಳನಳಿಸುತ್ತಿರುವುದರಿಂದ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ. ಭೀಕರ ಬರಗಾಲದಲ್ಲೂ ಈ ವರ್ಷದ ಬೇಸಿಗೆಯಲ್ಲಿ ನದಿ ತೀರದಲ್ಲಿ ಹಸಿರು ವೃದ್ದಿಸಿದೆ. ಇದು ಮುಂದುವರೆಯಬೇಕಾದರೆ ನದಿಗೆ ನೀರು ತರುವಲ್ಲಿ ನಿರಂತರ ಕಾರ್ಯ ನಡೆಯಬೇಕೆಂಬುದು ರೈತರ ಒತ್ತಾಸೆಯಾಗಿದೆ.