ಐಟಿ ದಾಳಿ: ಡಿಕೆಶಿಗೆ ಸರಿಯಾಗಿ 'ಕೈ' ಕೊಡ್ತಾ ಕಾಂಗ್ರೆಸ್ ಹೈಕಮಾಂಡ್?
ಡಿ ಕೆ ಶಿವಕುಮಾರ್ ಅವರನ್ನು ನೇರವಾಗಿ ಸಮರ್ಥಿಸಿಕೊಂಡು ಪ್ರತಿಭಟನೆ, ಹೇಳಿಕೆ ನೀಡಬಾರದು ಎನ್ನುವ ಫರ್ಮಾನನ್ನು ಹೈಕಮಾಂಡ್, ರಾಜ್ಯ ಕಾಂಗ್ರೆಸ್ ಘಟಕಕ್ಕೆ ಹೊರಡಿಸಿದೆ.
ಆದಾಯ ತೆರಿಗೆ ದಾಳಿಯ ವೇಳೆ, ಬಿಜೆಪಿಗೆ ಧಿಕ್ಕಾರ.. ಮೋದಿಗೆ ಧಿಕ್ಕಾರ.. ಎನ್ನುವ ಕಾಂಗ್ರೆಸ್ಸಿಗರ, ಡಿ ಕೆ ಶಿವಕುಮಾರ್ ಅಭಿಮಾನಿಗಳ ಹೋರಾಟದ ಕಾವು ಕಮ್ಮಿಯಾಗುತ್ತಿದೆಯಾ, ಪ್ರತಿಭಟನೆ ಕೇವಲ ಕಾಟಾಚಾರಕ್ಕೆ ಸೀಮಿತವಾಗಿದೆಯಾ, ಪ್ರತಿಭಟನೆ ಸೀಮಿತಗೊಳಿಸುವಂತೆ ಸೂಚನೆ ಬಂದಿದೆಯಾ?
ಓವರ್ ಟು ಹೈಕಮಾಂಡ್!.. ಮೂಲಗಳ ಪ್ರಕಾರ ಡಿ ಕೆ ಶಿವಕುಮಾರ್ ಅವರನ್ನು ಸಮರ್ಥಿಸಿಕೊಂಡು ಪ್ರತಿಭಟನೆ, ಹೇಳಿಕೆ ನೀಡಬಾರದು ಎನ್ನುವ ಫರ್ಮಾನನ್ನು ಹೈಕಮಾಂಡ್, ರಾಜ್ಯ ಕಾಂಗ್ರೆಸ್ ಘಟಕಕ್ಕೆ ಹೊರಡಿಸಿದೆ. ಆ ಮೂಲಕ ಡಿಕೆಶಿ ಕುಟುಂಬ ಕಳವಳ ಪಡುವಂತ ಸುದ್ದಿ ಹೊರಬಿದ್ದಿದೆ.
ಡಿಕೆಶಿ ಮೇಲೆ ಐಟಿ ದಾಳಿ, ಶುಕ್ರವಾರದ 10 ಬೆಳವಣಿಗೆ
ಇತ್ತ ಶುಕ್ರವಾರ (ಆ 4) ಮುಖ್ಯಮಂತ್ರಿ ಸಿದ್ದರಾಮಯ್ಯ ಐಟಿ ದಾಳಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ನೇರವಾಗಿ ಶಿವಕುಮಾರ್ ಅವರನ್ನು ಸಮರ್ಥಿಸಿಕೊಳ್ಳದೇ, ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಐಟಿ ದಾಳಿ ನಡೆದದ್ದು ತಪ್ಪು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಡಿಕೆಶಿ ಅವರ ಮನೆ, ಕಚೇರಿ ಮೇಲೆ ದಾಳಿ ನಡೆದ ಮೊದಲ ದಿನ ಇದ್ದಷ್ಟು ಪ್ರತಿಭಟನೆಯ ಕಾವು ನಂತರ ತಣ್ಣಗಾಗುತ್ತಾ ಬಂತು. ದಾಳಿ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರು ಆದಾಯ ತೆರಿಗೆ ಕಚೇರಿ ಮೇಲೆ ಕಲ್ಲುತೂರಾಟ ನಡೆಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಕಾಂಗ್ರೆಸ್, ತಮ್ಮ ಮಕ್ಕಳ ಬೆನ್ನಿಗೆ ನಿಲ್ಲುವುದಿಲ್ಲ ಎನ್ನುವ ಮಾಹಿತಿಯನ್ನು ಅರಿತೇ ಡಿಕೆಶಿ ತಾಯಿ, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದರು ಎನ್ನುವ ಮಾಹಿತಿಯಿದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಘಟಕಕ್ಕೆ ಸೂಚನೆ ಏನು? ಈ ನಡುವೆ ಶನಿವಾರ (ಆ 5) ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಐಟಿ ದಾಳಿ ಮುಕ್ತಾಯಗೊಂಡಿದೆ. ಮುಂದೆ ಓದಿ..
ಡಿಕೆಶಿ, ಡಿಕೆ ಸುರೇಶ್ ಹೇಳಬೇಕಾದ್ದನ್ನು ಅವರ ತಾಯಿ ಹೇಳಿದ್ದಾರೆ
ಡಿ ಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿರುವ ಮಾತಿನಂತೆ, ಡಿಕೆಶಿ ಅವರ ತಾಯಿ ಏನು ಸಿದ್ದರಾಮಯ್ಯ ವಿರುದ್ದ ಮಾತನ್ನಾಡಿದ್ದಾರೋ ಅದು ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ಅವರು ಹೇಳಬೇಕು ಎಂದಿದ್ದನ್ನೇ ಡಿಕೆಶಿ ತಾಯಿ ಹೇಳಿದ್ದು.
ನನ್ನ ಮಗನ ಇಂದಿನ ಪರಿಸ್ಥಿತಿಗೆ ಸಿದ್ದರಾಮಯ್ಯನೇ ಕಾರಣ
ನನ್ನ ಮಗನ ಇಂದಿನ ಪರಿಸ್ಥಿತಿಗೆ ಸಿದ್ದರಾಮಯ್ಯನೇ ಕಾರಣ ಎಂದು ಡಿಕೆಶಿ, ಸಿಎಂ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ನನ್ನ ಮಕ್ಕಳು ಕಾಂಗ್ರೆಸ್ ಪಕ್ಷಕ್ಕಾಗಿ ಎಷ್ಟೆಲ್ಲಾ ದುಡಿದರು, ಈಗ ಅವರನ್ನು ಬೆಂಬಲಿಸುವವರು ಯಾರೂ ಇಲ್ಲ. ಸಿದ್ದರಾಮಯ್ಯನಿಗೆ ಹೆಗಲಿಗೆ ಹೆಗಲು ಕೊಟ್ಟು ನನ್ನ ಮಕ್ಕಳು ಕೆಲಸ ಮಾಡಿದರು, ಈಗ ನನ್ನ ಮಕ್ಕಳನ್ನು ದೂರ ಮಾಡಲಾಗುತ್ತಿದೆ ಎಂದು ಡಿಕೆಶಿ ತಾಯಿ ಗೌರಮ್ಮ ಮತ್ತೆ ಶುಕ್ರವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಡಿಕೆಶಿ ಅವರನ್ನು ನೇರವಾಗಿ ಸಮರ್ಥಿಸಿಕೊಳ್ಳಬಾರದು
ಡಿಕೆಶಿ ಅವರನ್ನು ನೇರವಾಗಿ ಸಮರ್ಥಿಸಿಕೊಳ್ಳಬಾರದು, ಅದು ದೇಶಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಬದಲಿಗೆ ಗುಜರಾತ್ ಚುನಾವಣೆಯ ವೇಳೆ ದಾಳಿ, CRPF ಬಳಸಿಕೊಂಡು ದಾಳಿ ನಡೆಸಿದ್ದನ್ನು ಮುಂದಿಟ್ಟುಕೊಂಡು ಪ್ರತಿಕ್ರಿಯೆ ನೀಡಿ ಎನ್ನುವ ಸೂಚನೆಯನ್ನು ಹೈಕಮಾಂಡ್ ನೀಡಿದೆ.
ಭ್ರಷ್ಟರನ್ನು ಕಾಂಗ್ರೆಸ್ ರಕ್ಷಿಸುತ್ತಿದೆ ಎನ್ನುವ ಭಾವನೆ ಜನರಲ್ಲಿ ಮೂಡಬಾರದು
ಕಪ್ಪುಹಣದ ವಿರುದ್ದ ನಮ್ಮ ಹೋರಾಟ ಎಂದು ನಾವು ಹಿಂದೆಯೂ ಹೇಳಿದ್ದೆವು, ಈಗ ಡಿಕೆಶಿ ಪರವಾಗಿ ನಿಂತರೆ ಭ್ರಷ್ಟರನ್ನು ಕಾಂಗ್ರೆಸ್ ಮತ್ತು ರಾಜ್ಯ ಸರಕಾರ ರಕ್ಷಿಸುತ್ತಿದೆ ಎನ್ನುವ ಭಾವನೆ ಜನರಲ್ಲಿ ಮೂಡುತ್ತದೆ. ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡಬಹುದು ಎಂದು ಹೈಕಮಾಂಡ್ ಎಚ್ಚರಿಸಿದೆ.
ಚುನಾವಣಾ ವರ್ಷ, ಜಾಗರೂಕತೆಯಿಂದ ಹೇಳಿಕೆ ನೀಡಿ
ಈ ದಾಳಿಯ ವಿಚಾರದಲ್ಲಿ ಸಂಯಮದಿಂದ ವರ್ತಿಸಬೇಕಾಗುತ್ತದೆ, ಚುನಾವಣಾ ವರ್ಷದಲ್ಲಿ ಈ ವಿಚಾರ ಪಕ್ಷಕ್ಕೆ ಮುಳುವಾಗಬಾರದು. ಯಾರೇ ಸಚಿವರಿರಬಹುದು ಜಾಗರೂಕತೆಯಿಂದ ಹೇಳಿಕೆ ನೀಡಬೇಕು, ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸುವಾಗಲೂ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.