'ಡಿಕೆಶಿ ಏನು ಟೆರರಿಸ್ಟಾ?’ ಸಿಆರ್ಪಿಎಫ್ ಬಳಕೆಗೆ ಪೂಜಾರಿ ಆಕ್ರೋಶ
ಬೆಂಗಳೂರು, ಆಗಸ್ಟ್ 2: "ರಾಜಕೀಯ ಸಂಚಿಗೆ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳಲಾಗಿದೆ. ಇದು ಸರಿಯಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ
ಡಿಕೆ ಶಿವಕುಮಾರ್ ಮನೆ ಮತ್ತು ಕಚೇರಿಗಳ ಮೇಲೆ ಐಟಿ ದಾಳಿಯಾಗುತ್ತಿದ್ದಂತೆ ಕೇಂದ್ರದ ವಿರುದ್ಧ ಕೆಂಡಾಮಂಡಲವಾಗಿರುವ ಸಿದ್ದರಾಮಯ್ಯ, "ತನ್ನ ವಿರುದ್ಧ ಧ್ವನಿ ಎತ್ತಿದವರನ್ನು ಕೇಂದ್ರ ಸರಕಾರ ಹತ್ತಿಕ್ಕುತ್ತಿದೆ. ಈ ರೀತಿಯ ಷಡ್ಯಂತ್ರಕ್ಕೆ ಜನ ತಕ್ಕ ಶಾಸ್ತಿ ಮಾಡಲಿದ್ದಾರೆ. ಐಟಿ ದಾಳಿ ವೇಳೆ ಪೊಲೀಸರ ಸಹಕಾರ ಕೇಳುವ ಬದಲು ಸಿಆರ್'ಪಿಎಫ್ ಬಳಸಿಕೊಳ್ಳಲಾಗಿದೆ. ಈ ಮೂಲಕ ನಿಯಮ ಉಲ್ಲಂಘಿಸಲಾಗಿದೆ," ಎಂದು ಕಿಡಿಕಾರಿದ್ದಾರೆ.
'ಡಿಕೆಶಿ ಏನು ಟೆರರಿಸ್ಟಾ?’ ಸಿಆರ್ಪಿಎಫ್ ಬಳಕೆಗೆ ಪೂಜಾರಿ ಆಕ್ರೋಶ
"ಐಟಿ ಇಲಾಖೆ ಯಾವುದೇ ಪಕ್ಷದ ಆಸ್ತಿಯಲ್ಲ. ಡಿಕೆಶಿಗೆ ಸಂಬಂಧಿಸಿ 39 ಕಡೆ ದಾಳಿ ಮಾಡಿದ್ದಾರೆ. ದಾಳಿಗೆ ಸೇನೆಗೆ ಸಮವಾದ ಸಿಆರ್'ಪಿಎಫ್ ಬಳಸಿದ್ದಾರೆ. ಡಿಕೆಶಿ ಏನು ಟೆರರಿಸ್ಟಾ?" ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ್ ಪೂಜಾರಿ ಕಿಡಿಕಾರಿದ್ದಾರೆ.
"ಮೋದಿ ಅಧಿಕಾರಕ್ಕೆ ಬಂದ ಬಳಿಕ 1038 ಕಡೆ ದಾಳಿ ಮಾಡಿಸಿದ್ದಾರೆ. ಇದರಿಂದ ಎಷ್ಟು ಮೊತ್ತ ನಿಮಗೆ ಸಂಗ್ರಹವಾಗಿದೆ? ವಾರಂಟ್ ಇಲ್ಲದೆ ದಾಳಿ ಮಾಡೋಕೆ ಅಧಿಕಾರ ಇದೆಯೇ? ಇವತ್ತು ಶಿವಕುಮಾರ್, ನಾಳೆ ಪೂಜಾರಿ, ನಾಡಿದ್ದು ಸೋನಿಯಾ ಗಾಂಧಿ. ಆ ಬಳಿಕ ರಾಹುಲ್ ಗಾಂಧಿಯನ್ನೂ ದಾಳಿ ಮಾಡಿ ಜೈಲಿಗೆ ಕಳಿಸುತ್ತೀರಿ. ಸುಬ್ರಹ್ಮಣ್ಯ ಸ್ವಾಮಿ ಸಹವಾಸದಿಂದ ಹೀಗಾಗುತ್ತಿದೆ. ಅಲ್ಪರ ಸಹವಾಸ, ಮಾನಭಂಗ ಖಂಡಿತ," ಎಂದು ಪೂಜಾರಿ ಕಿಡಿಕಾರಿದ್ದಾರೆ.
ಸದ್ಯದಲ್ಲೇ ನನ್ನ ಮನೆ ಮೇಲೆಯೂ ದಾಳಿ : ಎಂ.ಬಿ. ಪಾಟೀಲ್
ಡಿಕೆ ಶಿವಕುಮಾರ್ ಮನೆ ಮೇಲೆ ದಾಳಿಯಾಗುತ್ತಿದ್ದಂತೆ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್, "ಸದ್ಯದಲ್ಲೇ ನಮ್ಮ ಮನೆ ಮೇಲಯೂ ದಾಳಿಯಾಗಲಿದೆ. ನನ್ನ ಮನೆ ಮೇಲೆ ದಾಳಿ ನಡೆಸಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಬಿಜೆಪಿ ಮೂಲಗಳಿಂದಲೇ ನನಗೆ ಈ ಮಾಹಿತಿ ಸಿಕ್ಕಿದೆ," ಎಂದು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆಯನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಕೇಂದ್ರ ಸರಕಾರ ಅನುವು ಮಾಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಐಟಿ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ: ಶೆಟ್ಟರ್
ಐಟಿ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ. ಈ ದಾಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ಸ್ಪಷ್ಟಪಡಿಸಿದರು.
"ಐಟಿ ಸ್ವಾಯತ್ತ ಸಂಸ್ಥೆ. ದಾಳಿ ಮಾಡುವುದು ಸಂಸ್ಥೆ ಹಾಗೂ ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು. ಒಂದು ವೇಳೆ ದಾಳಿ ಮಾಡಿದಾಗ ಹಣ ಸಿಗದಿದ್ದರೆ ಐಟಿ ಸಂಸ್ಥೆಯೇ ಜವಾಬ್ದಾರಿಯಾಗುತ್ತದೆ," ಎಂದು ಅವರು ತಿಳಿಸಿದರು.
"ವ್ಯಾಪಾರಸ್ಥರ ಮೇಲೆ ದಾಳಿ ನಡೆದರೆ ಚರ್ಚೆ ಆಗಲ್ಲ ಆದರೆ, ರಾಜಕಾರಣಿಗಳ ಮೇಲೆ ದಾಳಿ ನಡೆದಾಗ ಮಾತ್ರ ಚರ್ಚೆಗೆ ಬರುತ್ತೆ. ಆದರೆ, ವಿನಾಕಾರಣ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಖ್ಯಮಂತ್ರಿ, ಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾನೂನು ಬದ್ಧವಾಗಿ ಇದ್ದರೆ ಹೆದರುವ ಅವಶ್ಯಕತೆಯಿಲ್ಲ," ಎಂದು ಶೆಟ್ಟರ್ ಪ್ರತಿಕ್ರಿಯಿಸಿದರು.
ಡಿಕೆಶಿ ಮೇಲೆ ಐಟಿ ದಾಳಿ : 10 ಪ್ರಮುಖ ಬೆಳವಣಿಗೆಗಳು
ರಾಜಕೀಯ ಪ್ರೇರಿತ ದಾಳಿ - ಪರಮೇಶ್ವರ್
"ಇದೊಂದು ರಾಜಕೀಯ ಪ್ರೇರಿತ ದಾಳಿ. ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲೇಬೇಕೆಂಬ ಪ್ರತೀಕಾರದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ," ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪ್ರಜಾಪ್ರಭುತ್ವವನ್ನು ಬಿಜೆಪಿ ಪಕ್ಷ ಕಗ್ಗೊಲೆ ಮಾಡುತ್ತಿದೆ
"ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ದುರುದ್ದೇಶದಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲೇಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಮುಖಂಡರ ಮೇಲೆ ಐಟಿ, ಇಡಿ ಮೂಲಕ ದಾಳಿ ನಡೆಸಲಾಗುತ್ತಿದೆ", ಎಂದು ಕಾಂಗ್ರೆಸ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾಪ್ರಭುತ್ವವನ್ನು ಬಿಜೆಪಿ ಪಕ್ಷ ಕಗ್ಗೊಲೆ ಮಾಡಲು ಹೊರಟಿದೆ. ಸರ್ವಾಧಿಕಾರಿ ಧೋರಣೆ ತಾಳಿರುವ ಬಿಜೆಪಿ ವಿರುದ್ಧ ಧ್ವನಿ ಎತ್ತುವವರ ಮೇಲೆ ಐಟಿ ಬ್ರಹ್ಮಾಸ್ತ್ರ ಬಿಡುತ್ತಿದೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಕೇಂದ್ರ ಸರಕಾರದ ಮೇಲೆ ಹರಿಹಾಯ್ದಿದ್ದಾರೆ.
ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ, 11 ಕೋಟಿ ರೂ. ನಗದು ವಶ
|
ಐಟಿ ಮೋದಿ, ಶಾ ತಾಳಕ್ಕೆ ಕುಣಿಯುತ್ತಿದೆ
"ಆದಾಯ ತೆರಿಗೆ ಇಲಾಖೆ ಪ್ರಧಾನಿ ಮತ್ತು ಅಮಿತ್ ಶಾ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ವಿರೋಧ ಪಕ್ಷಗಳನ್ನು ನಾಶಪಡಿಸುವುದು ಬಿಜೆಪಿಯ ಅನೈತಿಕ ಗುರಿ," ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಎಲ್ಲಾ ಆಟಗಳನ್ನೂ ನೋಡಿದ್ದೇನೆ
"ರೈಡ್ಸ್ ಆಗುತ್ತೆ. ನನ್ನ ಮಗನ ಮೇಲೆಯೂ 11 ಕಡೆ ರೈಡ್ ಆಗಿತ್ತು. ಇದೆಲ್ಲಾ ಆಟಗಳನ್ನು ನಾನು ನೋಡಿದ್ದೇನೆ," ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಐಟಿ ದಾಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.