ಪಂಚಾಯಿತಿ ಫಲಿತಾಂಶದಲ್ಲಿ ಹಿಂಗೂ ಆಯ್ತು ನೋಡಿ!
ಬೆಂಗಳೂರು, ಜೂ. 05 : ಲಾಟರಿ ಮೂಲಕ ಗೆಲುವು ನಿರ್ಧಾರ, ಟಾಸ್ನಲ್ಲಿ ಅಡಗಿತ್ತು ಗೆಲುವಿನ ಅದೃಷ್ಟ, ಅಪ್ಪನ ವಿರುದ್ಧ ಗೆದ್ದ ಮಗ, ಗಂಡ-ಹೆಂಡತಿ ಇಬ್ಬರು ಪಂಚಾಯ್ತಿ ಮೆಂಬರ್, ಅಷ್ಟೂ ಓಟು ತಾನೇ ಪಡೆದ ಅಭ್ಯರ್ಥಿ ಇನ್ನೂ ಮುಂತಾದವು ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶದ ಮುಂಖ್ಯಾಂಶಗಳು.
ಶುಕ್ರವಾರ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪಂಚಾಯಿತಿ ಚುನಾವಣಾ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 5,735 ಗ್ರಾಮ ಪಂಚಾಯಿತಿಗಳ 84,854 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಪಕ್ಷಗಳ ಚಿಹ್ನೆಯಡಿಯಲ್ಲಿ ಮತದಾನ ನಡೆಯದಿದ್ದರೂ, ವಿಧಾನಸಭೆ, ಲೋಕಸಭೆ ಚುನಾವಣೆ ಮೀರಿಸುವಂತೆ ಫಲಿತಾಂಶ ಕುತೂಹಲ ಹುಟ್ಟಿಸಿದೆ. [ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ]
ಪಂಚಾಯಿತಿ ಚುನಾವಣೆಯಲ್ಲಿ ಸಾಕಷ್ಟು ಆಸಕ್ತಿಕರ ಅಂಶಗಳಿವೆ. ಚಿಕ್ಕಬಳ್ಳಪುರದಲ್ಲಿ ಅಭ್ಯರ್ಥಿಗಳ ಜೇಬಿನಲ್ಲಿ ನಿಂಬೆ ಹಣ್ಣು ಸಿಕ್ಕರೆ, ಕೊಪ್ಪಳದಲ್ಲಿ ವಾಮಾಚಾರ ಚುನಾವಣಾಧಿಕಾರಿಗಳನ್ನು ಬೆಳಗ್ಗೆ ಸ್ವಾಗತಿಸಿತು. ಗಂಡ-ಹೆಂಡತಿ ಇಬ್ಬರು ಗೆದ್ದರು, ಲಾಟರಿಯಲ್ಲಿ ವಿಜಯಲಕ್ಷ್ಮೀ ಅಡಗಿ ಕೂತಿದ್ದಳು, ಒಂದೇ ಓಟಿನಲ್ಲಿ ಗೆಲುವು ತಪ್ಪಿ ಹೋಯಿತು.
ಏನೇನು ಆಯ್ತು ನೋಡಿ...
* ಚಾಮರಾಜನಗರದಲ್ಲಿ ಶತಾಯುಷಿಗೆ ಗೆಲುವು : ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ 102 ವರ್ಷದ ವೃದ್ಧೆ ಗೆಲುವು ಸಾಧಿಸಿದ್ದಾರೆ. ದೊಡ್ಡಾಲತ್ತೂರು ಪಂಚಾಯಿತಿಯಿಂದ ಸ್ಪರ್ಧಿಸಿದ್ದ ಗವಿತಿಮ್ಮಮ್ಮ 136 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಗವಿತಿಮ್ಮಮ್ಮ ಪ್ರತಿಸ್ಪರ್ಧಿ ಚಿನ್ನಮ್ಮ 218 ಮತಗಳನ್ನು ಪಡೆದಿದ್ದಾರೆ.
* ಎಲ್ಲ ಅಭ್ಯರ್ಥಿಗಳು 420 : ಹಾಸನದ ಮತ ಎಣಿಕೆ ಕೇಂದ್ರದಲ್ಲಿ ಪತ್ತೆಯಾದ ಬ್ಯಾಲೆಟ್ ಪೇಪರ್ನಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ 'ಎಲ್ಲರೂ 420' ಎಂದು ಬರೆಯಲಾಗಿತ್ತು.
* ಚಾಮರಾಜನಗರದಲ್ಲಿ ಒಂದು ಮತ ತಂದಿತು ಗೆಲುವು : ಚಾಮರಾಜನಗರ ಜಿಲ್ಲೆಯ ಎಬ್ಬಸೂರು ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧನಲಕ್ಷ್ಮೀ 1 ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಮಂಜುಳಾ ಅವರಿಗೆ 183 ಮತಗಳು ಲಭ್ಯವಾಗಿದ್ದರೆ, ಧನಲಕ್ಷ್ಮಿಗೆ 184 ಮತಗಳು ಸಿಕ್ಕಿವೆ.
* ಚಿಕ್ಕಬಳ್ಳಾಪುರದಲ್ಲಿ ಎಲ್ಲಾ ಓಟು ಒಬ್ಬರಿಗೆ : ಚಲಾವಣೆಯಾದ ಎಲ್ಲಾ ಮತಗಳನ್ನು ತಾನೇ ಪಡೆಯುವ ಮೂಲಕ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮ ಪಂಚಾಯತಿಯ ಸಿಂಗಾಟಕದಿರೇನಹಳ್ಳಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ಕೆ.ಮಲ್ಲಪ್ಪ ದಾಖಲೆ ಬರೆದಿದ್ದಾರೆ. ಚಲಾವಣೆಯಾದ ಎಲ್ಲಾ 409 ಮತಗಳು ಮಲ್ಲಪ್ಪರಿಗೆ ಸಿಕ್ಕಿವೆ. ಪ್ರತಿಸ್ಪರ್ಧಿ ಅಭ್ಯರ್ಥಿ ಗೀತಾ ಅವರಿಗೆ ಒಂದು ಮತವಿಲ್ಲದಂತಾಗಿದೆ. ಮೂರನೇ ಬಾರಿ ಮಲ್ಲಪ್ಪ ಪಂಚಾಯಿತಿ ಖುರ್ಚಿ ಏರುತ್ತಿದ್ದಾರೆ.
* ಕೊಪ್ಪಳದಲ್ಲಿ ಟಾಸ್ ತಂದ ಜಯ : ಕೊಪ್ಪಳ ತಾಲೂಕಿನ ಮಾದನೂರು ಪಂಚಾಯಿತಿಯಲ್ಲಿ ಸೋಮಪ್ಪ ಮತ್ತು ಸಚಿನ್ ಇಬ್ಬರು 130 ಮತಗಳನ್ನು ಪಡೆದಿದ್ದರು. ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಟಾಸ್ ಹಾಕಿದಾಗ ಸಚಿನ್ಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ. ಟಾಸ್ನಲ್ಲಿ ಗೆಲುವು ಅಡಗಿ ಕುಳಿತಿತ್ತು.
* ಹೊಡೆಯಿತು ಗೆಲುವಿನ ಲಾಟರಿ : ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಶಾಗೆ ಗೆಲುವಿನ ಲಾಟರಿ ಹೊಡೆದಿದೆ. ಬಿಜೆಪಿ ಬೆಂಬಲಿಕ ಕಾಮಾಕ್ಷಿ, ಮತ್ತು ಕಾಂಗ್ರೆಸ್ ಬೆಂಬಲಿತ ಆಶಾ ಇಬ್ಬರಿಗೂ 287 ಮತಗಳು ಬಂದಿದ್ದವು. ಚುನಾವಣಾಧಿಕಾರಿಗಳು ಲಾಟರಿ ಹಾಕಿದಾಗ ಗೆಲುವು ಆಶಾ ಅವರಿಗೆ ಲಭಿಸಿದೆ.
* ಬಾಗಲಕೋಟೆಯಲ್ಲಿ ತಂದೆಗೆ ಸೋಲು : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಲಿಂಗಾಪುರ (ಎಸ್ಕೆ) ಪಂಚಾಯಿತಿಯಲ್ಲಿ ತಂದೆ ವಿರುದ್ಧ ಮಗ ಜಯಗಳಿಸಿದ್ದಾನೆ. ರಾಮಪ್ಪ ಮತ್ತು ಯಲ್ಲಪ್ಪ ದಾಸಪ್ಪ ಚುನಾವಣೆ ಅಖಾಡಕ್ಕೆ ಧುಮುಕಿದ್ದರು. ತಂದೆಯನ್ನು ಸೋಲಿಸಿ ಯಲ್ಲಪ್ಪ ದಾಸಪ್ಪ ಜಯಭೇರಿ ಬಾರಿಸಿದ್ದಾರೆ.