ಹರಿದ್ವಾರದ ಕಾಶೀ ಮಠ ವೃಂದಾವನದಲ್ಲಿ ಹನುಮ ವಿಗ್ರಹ ಪ್ರತಿಷ್ಠೆ
ಹರಿದ್ವಾರದ ಶ್ರೀ ವ್ಯಾಸಮಂದಿರದ ಬಲಭಾಗದಲ್ಲಿ ನಿರ್ಮಾಣಗೊಂಡ ಶಿಲಾಮಯ ವೃಂದಾವನದಲ್ಲಿ ಹನುಮ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಭಾನುವಾರ (ಜ 1) ನಡೆಯಿತು.
ಮಂಗಳೂರು, ಜ 1: ವೃಂದಾವನಸ್ಥ ಕಾಶೀಮಠ ಸಂಸ್ಥಾನದ ಸುಧೀಂಧ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿ, ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಹರಿದ್ವಾರದಲ್ಲಿ ನಿರ್ಮಾಣಗೊಂಡ ಶಿಲಾಮಯ ವೃಂದಾವನದಲ್ಲಿ ಹನುಮ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಭಾನುವಾರ (ಜ 1) ನಡೆಯಿತು.
ಶ್ರೀ ವ್ಯಾಸಮಂದಿರದ ಬಲಭಾಗದಲ್ಲಿ ಅಷ್ಟಕೋನಾಕೃತಿಯಲ್ಲಿ ನಿರ್ಮಾಣಗೊಂಡಿರುವ ವೃಂದಾವನದಲ್ಲಿ ಕೃಷ್ಣಶಿಲೆಯಿಂದ ಕೆತ್ತಿರುವ ಶ್ರೀ ಮುಖ್ಯಪ್ರಾಣ ವಿಗ್ರಹವನ್ನು ಕಾಶೀಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಪೂರ್ವಾಹ್ನ 11.19ರ ಮೀನ ಲಗ್ನದಲ್ಲಿ ವಿದ್ಯುಕ್ತವಾಗಿ ಪ್ರತಿಷ್ಠಾಪಿಸಿ ಮಂಗಳಾರತಿ ಬೆಳಗಿದರು.
ಇದಕ್ಕೂ ಮೊದಲು ಬೆಳಗ್ಗೆ ಆರಂಭಗೊಂಡಿದ್ದ ಧಾರ್ಮಿಕ ಕಾರ್ಯಗಳಲ್ಲಿ ಮುಖ್ಯಪ್ರಾಣ ವಿಗ್ರಹಕ್ಕೆ ಶ್ರೀಗಳವರ ದಿವ್ಯಹಸ್ತದಿಂದ ತೀರ್ಥಾಭಿಷೇಕ, ಕ್ಷೀರಾಭಿಷೇಕ, ಕನಕಾಭಿಷೇಕ ಸಹಿತ ಸಹಸ್ರಧಾರಾ ನಡೆಯಿತು.
ಮಹಾವಿಷ್ಣು ಹವನದ ಪೂರ್ಣಾಹುತಿ ನಡೆಯಿತು. ಶಿಲಾಮಯ ವೃಂದಾವನದ ದ್ವಾರಪೂಜೆ, ವಿಗ್ರಹ ಪ್ರತಿಷ್ಠೆಯೊಂದಿಗೆ ಶ್ರೀಗಳವರು ಅಲಂಕಾರದ ಬಳಿಕ ಮಹಾಮಂಗಳಾರತಿಯನ್ನು ಬೆಳಗಿದರು.
ದೆಹಲಿ ಸಮಾಜದ ಶ್ರೀನಿವಾಸ ಪ್ರಭು ಅವರು ಸಮಾಜದವರ ಪರವಾಗಿ ಪ್ರಸಾದವನ್ನು ಸ್ವೀಕರಿಸಿದರು. ಸಂಸ್ಥಾನದ ಪಟ್ಟದ ದೇವರುಗಳಿಗೆ ಮಹಾಪೂಜೆಯ ಬಳಿಕ ಮಹಾಸಮಾರಾಧನೆ ನಡೆಯಿತು.
ಸಂಜೆ ಶ್ರೀ ಸುಧೀಂಧ್ರ ಮಂಟಪದಲ್ಲಿ ವಿವಿಧೆಡೆಯ ವೈದಿಕರಿಂದ ಅಷ್ಟಾವಧಾನ ಕಾರ್ಯಕ್ರಮ, ಬಳಿಕ ನಡೆದ ಮಹಾಸಭೆಯಲ್ಲಿ ಶ್ರೀಗಳವರಿಂದ ಆಶೀರ್ವಚನ ನಡೆಯಿತು.
ಆರಾಧನಾ ಮಹೋತ್ಸವ ಡಿ30ರಿಂದ ಆರಂಭಗೊಂಡಿದ್ದು ಜ6ರವರೆಗೆ ಹರಿದ್ವಾರದ ವ್ಯಾಸಮಂದಿರದಲ್ಲಿ ನಡೆಯಲಿದೆ. ವ್ಯಾಸಮಂದಿರದ ಪರಿಸರ ಸಿಂಗರಿಸಲ್ಪಟ್ಟಿದ್ದು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಡಿ30ರಿಂದ ಧಾರ್ಮಿಕ ಹವನಾದಿ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಜ4ರಂದು ಏಕಾಹ ಭಜನೆ, ಜ6ರಂದು ಶ್ರೀಗಳವರ ಪ್ರಥಮ ಪುಣ್ಯತಿಥಿ ಆರಾಧನಾ ಮಹೋತ್ಸವ, ಮಹಾಸಭೆ ನಡೆಯಲಿದೆ.
ದೇಶವಿದೇಶಗಳಿಂದ ಸಂಸ್ಥಾನದ ಎಲ್ಲೆಡೆಯ ಸುಮಾರು 7ರಿಂದ 8 ಸಾವಿರ ಶಿಷ್ಯವರ್ಗ ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೆಹಲಿಯ ಜಿ.ಎಸ್.ಬಿ. ಸಮಾಜ ಸಮಾರಂಭದ ಉಸ್ತುವಾರಿ ವಹಿಸಿಕೊಂಡಿದ್ದು ದೆಹಲಿಯಿಂದ ಜಿಎಸ್.ಬಿ.ಎಕ್ಸ್ಪ್ರೆಸ್ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಿನಿಂದ ಒಂದೂವರೆ ಸಾವಿರದಷ್ಟು ಮಂದಿ ವಿಶೇಷ ರೈಲಿನ ಮೂಲಕ ಮಂಗಳೂರಿನಿಂದ ಜ2ರಂದು ಗುರುಪ್ರಣಾಮ್ ಯಾತ್ರೆ ಆರಂಭಿಸಿ ಜ4ರಂದು ಹರಿದ್ವಾರ ತಲುಪುತ್ತಿದ್ದಾರೆ.