ಡಿಕೆಶಿ ಮೇಲೆ ಐಟಿ ದಾಳಿ : 10 ಪ್ರಮುಖ ಬೆಳವಣಿಗೆಗಳು
ಬೆಂಗಳೂರು, ಆಗಸ್ಟ್ 02 : ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು, ನಗರದಿಂದ 40 ಕಿ.ಮೀ. ದೂರದಲ್ಲಿರುವ ಈಗಲ್ಟನ್ ಗೋಲ್ಫ್ ವಿಲೇಜ್ ರೆಸಾರ್ಟ್ ನಲ್ಲಿ ಇರಿಸಿ ಭವ್ಯ ಆತಿಥ್ಯ ನೀಡಿದ್ದಕ್ಕೆ ಕರ್ನಾಟಕ ಕಾಂಗ್ರೆಸ್ ಪಕ್ಷ ಭಾರೀ ಬೆಲೆ ತೆರಬೇಕಾದಂಥ ಪ್ರಸಂಗ ಎದುರಾಗಿದೆ.
ಡಿಕೆ ಶಿವಕುಮಾರ್ ಸಂಕ್ಷಿಪ್ತ ಪರಿಚಯ
ಗುಜರಾತ್ ನಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಕುದುರೆ ವ್ಯಾಪಾರ ನಡೆಯಬಾರದೆಂದು ಕಾಂಗ್ರೆಸ್ ಶಾಸಕರಿಗೆ ಮತ್ತು ಅವರ ಹೆಂಡಂದಿರು ಮಕ್ಕಳಿಗೆ ಬೆಂಗಳೂರಿನಲ್ಲಿ ಆತಿಥ್ಯ ನೀಡಲು ಭಾರೀ ಹಣಕಾಸಿನ ವ್ಯವಹಾರ ನಡೆದಿದೆ ಎಂಬ ಮಾಹಿತಿಯ ಮೇರೆಗೆ ಆದಾಯ ತೆರಿಗೆ ಇಲಾಖೆ ಭರ್ಜರಿ ದಾಳಿ ನಡೆಸಿದೆ.
ಡಿಕೆ ಶಿವಕುಮಾರ್ ಮನೆ, ಈಗಲ್ಟನ್ ರೆಸಾರ್ಟ್ ಮೇಲೆ ಐಟಿ ದಾಳಿ
ಹಿರೇಹುದ್ದರಿಯಂತೆ ಓಡಾಡಿ ಗುಜರಾತ್ ಶಾಸಕರಿಗೆ ಆತಿಥ್ಯ ನೀಡಿದ ಇಂಧನ ಸಚಿವ ಡಿಕೆ ಶಿವಕುಮಾರ್, ಅವರ ಸಹೋದರ ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಸಂಸದ ಡಿಕೆ ಸುರೇಶ್, ಡಿಕೆಶಿ ಅವರ ಆಪ್ತ ಜ್ಯೋತಿಷಿ ದ್ವಾರಕಾನಾಥ್ ಮತ್ತಿತರರ ಮೇಲೆ ಬುಧವಾರ ಬೆಳಿಗ್ಗೆ 7 ಗಂಟೆಯಿಂದಲೇ ದಾಳಿ ನಡೆದಿದೆ.
ಈ ದಾಳಿ ಕರ್ನಾಟಕ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸುವಲ್ಲಿ, ಮುಂದೆ ಕೆಚ್ಚೆದೆಯ ಯುದ್ಧಕ್ಕೆ ನಾಂದಿ ಹಾಡುವುದರಲ್ಲಿ ಸಂದೇಹವೇ ಇಲ್ಲ. ಡಿಕೆ ಶಿವಕುಮಾರ್ ಅವರು ಕರ್ನಾಟಕ ಕಾಂಗ್ರೆಸ್ಸಿನ ಬಲವಾದ ಅಸ್ತ್ರ ಮಾತ್ರವಲ್ಲ, ಏಳೇಳು ಸಮುದ್ರಗಳ ನೀರು ಕುಡಿದಿರುವ ಪ್ರಖರ 'ಪವರ್'ಫುಲ್ ರಾಜಕಾರಣಿ ಕೂಡ.
ಐಟಿ ದಾಳಿ ರಾಜ್ಯಸಭೆ ಚುನಾವಣೆ ರಾಜಕೀಯ : ಅಹಮದ್ ಪಟೇಲ್
ಇಡೀ ಕರ್ನಾಟಕದಲ್ಲಿ ಅಲ್ಲೋಕಲ್ಲೋಲ ಎಬ್ಬಿಸಿರುವ, ಸುಮಾರು 40 ಕಡೆಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗಿರುವ ಈ ದಾಳಿ ಮಾಡಿ, ಕಾಂಗ್ರೆಸ್ ಮತ್ತು ಗುಜರಾತ್ ಕಾಂಗ್ರೆಸ್ ರಾಜಕಾರಣಿಗಳ ನಿದ್ದೆ ಕೆಡಿಸಿರುವ ಬುಧವಾರದ ಬೆಳಗಿನ ಬೆಳವಣಿಗೆಯ ಪ್ರಮುಖ ಅಂಶಗಳು ಮುಂದಿವೆ.
7 ಗಂಟೆಯಿಂದಲೇ ಐಟಿ ದಾಳಿ
ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಬೆಳಿಗ್ಗೆ 7 ಗಂಟೆಗೇ ದಾಳಿಯನ್ನು ಆರಂಭಿಸಿದ್ದಾರೆ. ಏಕಕಾಲಕ್ಕೆ ಶಾಸಕರು ಬೀಡಿಬಿಟ್ಟಿರುವ ಈಗಲ್ಟನ್ ರೆಸಾರ್ಟ್, ಡಿಕೆ ಶಿವಕುಮಾರ್ ಅವರ ಸದಾಶಿವನಗರ ಮತ್ತು ಕನಕಪುರದಲ್ಲಿರುವ ಮನೆ, ಕಚೇರಿಗಳ ಮೇಲೆ 30ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳು ಮುಗಿಬಿದ್ದಿದ್ದಾರೆ.
ಡಿಕೆಶಿ ಅವರಿಗೆ ಐಟಿ ಅಧಿಕಾರಿಗಳಿಂದ ದಿಗ್ಬಂಧನ
ಈ ಅಚ್ಚರಿಯ ದಾಳಿ ನಡೆಯುವಾಗ ಡಿಕೆ ಶಿವಕುಮಾರ್ ಅವರನ್ನು ಅವರ ಸದಾಶಿವನಗರದ ಮನೆಯಲ್ಲಿಯೇ ದಿಗ್ಬಂಧನ ಹಾಕಲಾಗಿದೆ. ಈ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ರಿಸರ್ವ್ ಪೊಲೀಸ್ ಪಡೆಯ ರಕ್ಷಣೆಯನ್ನು ಕೂಡ ಪಡೆಯಲಾಗಿದೆ. ಅವರ ಆಪ್ತರ ಮೇಲೆಯೂ ದಾಳಿ ನಡೆಸಲಾಗುತ್ತಿದ್ದು, ಸಂಜೆಯ ವೇಳೆ ವಿವರಗಳು ತಿಳಿದುಬರಲಿವೆ.
ರೆಸಾರ್ಟ್ ಮೂಲೆಮೂಲೆ ತಪಾಸಣೆ
ಈಗಲ್ಟನ್ ರೆಸಾರ್ಟ್ ಗೆ ಬರುವ ಪ್ರತಿಯೊಂದು ವಾಹನಗಳನ್ನು, ಗುಜರಾತ್ ಶಾಸಕರು ತಂಗಿರುವ ಪ್ರತಿಯೊಂದು ಕೋಣೆಯನ್ನು ಇಂಚಿಂಚು ತಪಾಸಣೆ ಮಾಡಲಾಗುತ್ತಿದೆ. ರೆಸಾರ್ಟಿಗೆ ಭಾರೀ ಪ್ರಮಾಣದಲ್ಲಿ ಹಣ ಹರಿದುಬಂದಿದೆ ಎಂಬ ಆರೋಪದ ಮೇರೆಗೆ ಈ ಕ್ರಮವನ್ನು ಆದಾಯ ತೆರಿಗೆ ಅಧಿಕಾರಿಗಳು ಕೈಗೊಂಡಿದ್ದಾರೆ.
ಅಣ್ಣತಮ್ಮಂದಿರು ಎರಡು ರೂಂ ಬುಕ್ ಮಾಡಿದ್ದರು
ಗುಜರಾತ್ ಶಾಸಕರ ಆತಿಥ್ಯದ ಉಸ್ತುವಾರಿ ವಹಿಸಿದ್ದ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಿಕೆ ಸುರೇಶ್ ಅವರು ಈಗಲ್ಟನ್ ಗೋಲ್ಫ್ ರೆಸಾರ್ಟಿನಲ್ಲಿ ಎರಡು ಕೋಣೆಗಳನ್ನು ಕೂಡ ಬುಕ್ ಮಾಡಿದ್ದರು. ಆ ಕೋಣೆಯ ಬೀಗವನ್ನು ಒಡೆದು ಆದಾಯ ತೆರಿಗೆ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ.
ಡಿಕೆಶಿ ಮೊಬೈಲ್ ವಶಕ್ಕೆ
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಮೊಬೈಲನ್ನು ಕೂಡ ವಶಪಡಿಸಿಕೊಂಡಿದ್ದು, ಅವರು ಯಾರ್ಯಾರಿಗೆ ಕರೆ ಮಾಡಿದ್ದರು, ಏನೇನು ಮಾತುಕತೆಗಳಾಗಿವೆ ಮುಂತಾದ ಮಾಹಿತಿಯನ್ನು ಕೂಡ ಕಲೆಹಾಕುತ್ತಿದ್ದಾರೆ. ಅವರನ್ನು ವಿಚಾರಣೆಗಾಗಿ ವಶಕ್ಕೆ ಕೂಡ ಪಡೆದಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಅದೇ ರೆಸಾರ್ಟಿನಲ್ಲಿ ಇರಿಸಿದ್ದು ಏಕೆ?
ಅಚ್ಚರಿಯ ಸಂಗತಿಯೆಂದರೆ, ಗುಜರಾತ್ ಶಾಸಕರು ಬೆಂಗಳೂರಿಗೆ ಬರುವ ಮುನ್ನ ಕರ್ನಾಟಕ ಸರಕಾರ, ಅತಿಕ್ರಮಿಸಿಕೊಂಡಿರುವ 77 ಎಕರೆ ಜಮೀನನ್ನು ವಾಪಸ್ ನೀಡಿ, ಇಲ್ಲವೆ 982 ಕೋಟಿ ರುಪಾಯಿ ದಂಡವನ್ನು ತೆತ್ತಿ ಎಂದು ಈಗಲ್ಟನ್ ರೆಸಾರ್ಟಿಗೆ ನೋಟೀಸ್ ನೀಡಿತ್ತು. ಹೀಗಿರುವಾಗ, ಶಾಸಕರನ್ನು ಅದೇ ರೆಸಾರ್ಟಿನಲ್ಲಿ ಇರಿಸಿದ್ದು ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ.
ದಾಳಿ ಮಾಡಿದ್ದು ರೆಸಾರ್ಟ್ ಮೇಲಲ್ಲ
ಬಲ್ಲ ಮಾಹಿತಿಯ ಪ್ರಕಾರ, ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದು ಗುಜರಾತ್ ಕಾಂಗ್ರೆಸ್ ಶಾಸಕರಾಗಲಿ ಅಥವಾ ಭೂಅತಿಕ್ರಮಣ ಆರೋಪ ಎದುರಿಸುತ್ತಿರುವ ಈಗಲ್ಟನ್ ಗೋಲ್ಫ್ ರೆಸಾರ್ಟ್ ಮೇಲಲ್ಲ, ಬದಲಾಗಿ ಲಂಚ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮೇಲೆ ದಾಳಿ ನಡೆಸಲಾಗಿದೆ.
ಕಾಂಗ್ರೆಸ್ ಇಂಥ ದಾಳಿಗೆ ಬೆದರುವುದಿಲ್ಲ
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ ಅವರು, ನಾವು ಇಂಥ ದಾಳಿಗಳಿಗೆ ಬೆದರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ 120 ವರ್ಷಗಳ ಭವ್ಯ ಇತಿಹಾಸವಿದೆ. ಕಾನೂನಿನ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ. ತಪ್ಪು ಮಾಡಿದ್ದರೆ ನೀವಾಗಲಿ, ನಾವಾಗಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನತೆಗೆ ಕಾಂಗ್ರೆಸ್ ಪಕ್ಷ ಎಂಥದೆಂದು ಗೊತ್ತಿದೆ. ಅವರು ನಮಗೆ ಮತ್ತೆ ಆಶೀರ್ವಾದ ಮಾಡೇ ಮಾಡುತ್ತಾರೆ ಎಂದಿದ್ದಾರೆ.
ಬಿಜೆಪಿ ವಿಹ್ವಲಗೊಂಡಿದೆ
ಗುಜರಾತ್ ನಲ್ಲಿ ರಾಜ್ಯಸಭೆಗೆ ಸ್ಪರ್ಧಿಸುತ್ತಿರುವ ಅಹ್ಮದ್ ಪಟೇಲ್ ಅವರು, ಕೇವಲ 1 ಸೀಟು ಗೆಲ್ಲಲು ಭಾರತೀಯ ಜನತಾ ಪಕ್ಷ ಎಂಥ ಹೇಯ ಕೃತ್ಯವನ್ನಾದರೂ ಮಾಡುತ್ತದೆ ಎಂಬುದಕ್ಕೆ ಈ ದಾಳಿಯೇ ಸಾಕ್ಷಿ. ರಾಜ್ಯದ ಅಧಿಕಾರಿಗಳನ್ನು ಬಳಸಿಕೊಂಡು ದಾಳಿ ಮಾಡಿಸಿರುವುದನ್ನು ನೋಡಿದರೆ, ಬಿಜೆಪಿ ಎಷ್ಟರ ಮಟ್ಟಿಗೆ ವಿಹ್ವಲಗೊಂಡಿದೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಡಿಕೆಶಿ ದೆಹಲಿ ನಿವಾಸದ ಮೇಲೂ ದಾಳಿ
ಇದೀಗ ಬಂದಿರುವ ಮಾಹಿತಿಯ ಪ್ರಕಾರ, ಡಿಕೆ ಶಿವಕುಮಾರ್ ಅವರಿಗೆ ಸೇರಿದೆ ದೆಹಲಿಯಲ್ಲಿರುವ ನಿವಾಸದ ಮೇಲೆಯೂ ಆದಾಯ ತೆರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿ ದಾಖಲೆಗಳ ತಪಾಸಣೆ ನಡೆಸಿದ್ದು, ಹೆಚ್ಚಿನ ವಿವರಗಳು ಇನ್ನೂ ತಿಳಿದುಬರಬೇಕಿದೆ.