'ಪವರ್' ಮಿನಿಸ್ಟರ್ ಮೇಲೆ ಐಟಿ ದಾಳಿ : ಯಾರು, ಏನು ಹೇಳಿದರು?
ಬೆಂಗಳೂರು. ಆ.3 : ಕರ್ನಾಟಕದ ಇಂಧನ ಸಚಿವ ಮತ್ತು ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ದಾಳಿ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ವಿವಿಧ ಪಕ್ಷಗಳ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಐಟಿ ದಾಳಿ : ಡಿಕೆಶಿ ಮನೆಯಲ್ಲಿ 2ನೇ ದಿನವೂ ಪರಿಶೀಲನೆ
ಬುಧವಾರ ಬೆಳಗ್ಗೆ ಡಿ.ಕೆ.ಶಿವಕುಮಾರ್ ಮನೆ, ಕಚೇರಿ, ಮಾವನ ಮನೆ, ಆಪ್ತರು ಸೇರಿ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುರುವಾರವೂ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.
ಡಿಕೆಶಿ ಐಟಿ ದಾಳಿ ಬಗ್ಗೆ ತುಟಿ ಬಿಚ್ಚದ ರಾಹುಲ್ ಗಾಂಧಿ
ಐಟಿ ದಾಳಿಯ ವೇಳೆ ಹತ್ತು ಕೋಟಿಗೂ ಅಧಿಕ ನಗದು, ಆಸ್ತಿಗಳ ಹಲವಾರು ದಾಖಲೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ. ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಐದು ಲಾಕರ್ ಗಳು ಪತ್ತೆಯಾಗಿವೆ. ಅಧಿಕಾರಿಗಳು ಮನೆಯಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದ್ದರು.
ಗೋವಿಂದರಾಜ್ ಡೈರಿ ಆಯ್ತು, ಈಗ ಡಿಕೆಶಿ ಲಾಕರ್ ಸರದಿǃ
ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ನಡೆದ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಹೇಳಿದೆ. ರಾಜ್ಯಸಭೆಯಲ್ಲಿ ಬುಧವಾರ ಈ ವಿಷಯವನ್ನು ಕಾಂಗ್ರೆಸ್ ಸದಸ್ಯರು ಪ್ರಸ್ತಾಪಿಸಿದರು. ಕರ್ನಾಟಕದ ವಿವಿಧ ನಾಯಕರು ದಾಳಿ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯಾರು, ಏನು ಹೇಳಿದರು? ನೋಡೋಣ...
ರಾಜ್ಯಸಭೆ ಚುನಾವಣೆಗೆ ಸಂಬಂಧವಿಲ್ಲ
'ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆದ ದಾಳಿಗೂ ಗುಜರಾತ್ ನಲ್ಲಿ ನಡೆಯಲಿರುವ ರಾಜ್ಯಸಭೆ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ದಾಳಿಯ ವೇಳೆ ಕೆಲವು ದಾಖಲೆಗಳನ್ನು ಹರಿದು ಹಾಕಲು ಅವರು ಪ್ರಯತ್ನ ನಡೆಸಿದರು' ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಕೈವಾಡವಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಟಿ ದಾಳಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ನೇರವಾದ ಆರೋಪ ಮಾಡಿದ್ದಾರೆ. 'ಇದು ಸಂಪೂರ್ಣ ರಾಜಕೀಯ ಪ್ರೇರಿತ ದಾಳಿಯಾಗಿದೆ. ಇದರ ಹಿಂದೆ ಕೇಂದ್ರ ಕೈವಾಡವಿರುವುದು ಜಗಜ್ಜಾಹೀರಾಗಿದೆ' ಎಂದು ಹೇಳಿದ್ದಾರೆ.
ರಾಜಕೀಯ ಪ್ರೇರಿತವಾದ ದಾಳಿ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಈ ದಾಳಿ ರಾಜಕೀಯ ಪ್ರೇರಿತವಾಗಿದೆ. ವ್ಯಾಪಾರ ಉದ್ದೇಶದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ದಾಳಿ ನಡೆಸಿದ್ದರೆ ತಕರಾರಿಲ್ಲ' ಎಂದು ಹೇಳಿದ್ದಾರೆ.
ಏನ್ ಮಾಡ್ಲಿಕಾಗುತ್ತೆ ಅಂದ್ರು ದೇವೇಗೌಡ್ರು
ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆದ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, 'ನನ್ನ ಪುತ್ರನ ಮೇಲೂ ಹನ್ನೊಂದು ಕಡೆ ದಾಳಿ ನಡೆದಿತ್ತು. ಅವರು ತಮ್ಮ ಅಧಿಕಾರ ಚಲಾಯಿಸುತ್ತಾರೆ. ಏನ್ ಮಾಡ್ಲಿಕಾಗುತ್ತೆ' ಎಂದು ಹೇಳಿದ್ದಾರೆ.
ಈ ದಾಳಿಯಲ್ಲಿ ಬಿಜೆಪಿ ಕೈವಾಡವಿಲ್ಲ
'ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ಸಿಕ್ಕಿದರೆ ಅಧಿಕಾರಿಗಳು ದಾಳಿ ಮಾಡುತ್ತಾರೆ. ದಾಳಿಯಲ್ಲಿ ಬಿಜೆಪಿಯ ಕೈವಾಡವಿಲ್ಲ' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಗುಜರಾತ್ ಚುನಾವಣೆಗೆ ಸೇರಿಸಬೇಡಿ
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಡಿ.ಕೆ.ಶಿವಕುಮಾರ್ ಶ್ರೀಮಂತರು ಎಂಬುದು ಎಲ್ಲರಿಗೂ ಗೊತ್ತು. ಅವರು ಹಲವಾರು ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಈ ದಾಳಿಯನ್ನು ಗುಜರಾತ್ ಚುನಾವಣೆಯೊಂದಿಗೆ ಸೇರಿಸಬಾರದು' ಎಂದರು.