ಶ್ರೀಗಳ ಮೇಲೆ ಹವ್ಯಕ ಸಮಾಜಕ್ಕಿರುವ ಗೌರವ: 'ಬದ್ಧತಾ ಸಮಾವೇಶ'
ಬೆಂಗಳೂರು, ನ 27: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಬಗ್ಗೆ ಸಮಾಜಕ್ಕಿರುವ ಬದ್ಧತೆಯನ್ನು ಬಹಿರಂಗವಾಗಿ ಸಾರಿ ಹೇಳುವ ಸಲುವಾಗಿ ಹವ್ಯಕ ಮಹಾಮಂಡಲದ ಸಾರಥ್ಯದಲ್ಲಿ ಶನಿವಾರ (ನ 28) ಬೆಳಗ್ಗೆ ಹನ್ನೊಂದು ಗಂಟೆಗೆ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದ ಆವರಣದಲ್ಲಿ "ಬದ್ಧತಾ ಸಮಾವೇಶ"ವನ್ನು ಆಯೋಜಿಸಲಾಗಿದೆ.
ಶ್ರೀಗಳು ಎರಡು ದಶಕಗಳಿಂದ ಸಮಾಜದ ಹಿತಚಿಂತನೆಯ ಹಲವು ಕಾರ್ಯ ಯೋಜನೆಗಳನ್ನು ಹಾಕಿಕೊಂಡು, ಸಾವಿರಾರು ಸೇವಾಬಿಂಧುಗಳಿಗೆ ಕಾರ್ಯಕರ್ತರಾಗಿ ಸೇವೆಸಲ್ಲಿಸಲು ಅವಕಾಶವನ್ನು ನೀಡಿ ಸಮಾಜವನ್ನು ಸಂಘಟಿಸುತ್ತಾ, ಸಮಾಜದ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಲಕ್ಷಾಂತರ ಶಿಷ್ಯ ಭಕ್ತರನ್ನು ಪ್ರತಿನಿಧಿಸಿ ಶ್ರೀಮಠದ ಬಗೆಗಿನ ಬದ್ಧತೆಯನ್ನು ಬಹಿರಂಗವಾಗಿ ಸಾರಿ ಹೇಳುವ ಅಪರೂಪದ ಸಮಾವೇಶ ಈ ಬದ್ಧತಾ ಸಮಾವೇಶ. (ಶ್ರೀಗಳ ಕೇಸ್ ಬಗ್ಗೆ ಕೆಲವು ಅನುಮಾನಗಳು)
ಸಮಸ್ತ ಹವ್ಯಕ ಶಿಷ್ಯ ಭಕ್ತರನ್ನು ಪ್ರತಿನಿಧಿಸುವ ಹವ್ಯಕ ಮಹಾಮಂಡಲದ ನೇತೃತ್ವದಲ್ಲಿ ಶ್ರೀಸಂಸ್ಥಾನದ ಶಾಸನತಂತ್ರ ವ್ಯವಸ್ಥೆಯ ಕಾರ್ಯದರ್ಶಿಗಳು, ಮಹಾಮಂಡಲ-ಮಂಡಲ-ವಲಯಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಅಲ್ಲದೇ, ಗುರಿಕ್ಕಾರರು, ಶ್ರೀಕಾರ್ಯಕರ್ತರು ಹಾಗೂ ವಿವಿಧ ಅಂಗಸಂಸ್ಥೆಗಳ ಪದಾಧಿಕಾರಿಗಳು ಒಂದೆಡೆ ಸೇರಿ ಸಂಘಟನೆಯ ವಿರಾಟ್ ಸ್ವರೂಪವನ್ನು ಪ್ರಕಟಿಸಲಿದ್ದಾರೆ.
ಬದ್ಧತಾ ಸಮಾವೇಶದಲ್ಲಿ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.