ಚಿತ್ರಗಳು : ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಆಗಿದ್ದೇನು?
ಹುಬ್ಬಳ್ಳಿ, ಫೆಬ್ರವರಿ 09 : ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪುರಾತನ ಕಟ್ಟಡ 7 ಬಲಿ ಪಡೆದಿದೆ. ರೈಲು ನಿಲ್ದಾಣದ ಬಳಿ ಇರುವ ಪಾರ್ಸೆಲ್ ಕಟ್ಟಡ ಸೋಮವಾರ ಕುಸಿದುಬಿದ್ದಿದ್ದು, 16 ಜನರು ಗಾಯಗೊಂಡಿದ್ದಾರೆ. ಅವಶೇಷಗಳಡಿ ಇನ್ನೂ ಮೂವರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
ಎರಡು ಅಂತಸ್ತಿನ ಸುಮಾರು 50 ವರ್ಷದ ಹಳೆಯ ಕಟ್ಟದ ಮೇಲಿದ್ದ ಪೊಲೀಸ್ ಠಾಣೆಯನ್ನು ಕಳೆದ ವಾರ ಸ್ಥಳಾಂತರ ಮಾಡಲಾಗಿತ್ತು. ಹಳೆಯ ಕಟ್ಟಡದ ಮೇಲ್ಭಾಗವನ್ನು ಒಡೆಯುವ ಕಾರ್ಯಾಚರಣೆ ನಡೆಸುವಾಗ ಇಡೀ ಕಟ್ಟಡ ಕುಸಿದು ಬಿದ್ದು, ಈ ದುರ್ಘಟನೆ ಸಂಭವಿಸಿದೆ. [LIVE : ಹುಬ್ಬಳ್ಳಿಯಲ್ಲಿ ಕಟ್ಟಡ ಕುಸಿತ, 7 ಸಾವು]
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು, 'ಕಚೇರಿ ಸ್ಥಳಾಂತಕ್ಕೆ ಸೂಚಿಸಿದ್ದರೂ ಇದುವರೆಗೂ ಯಾಕೆ ಇಲ್ಲಿಯೇ ಕಾರ್ಯನಿರ್ವಹಿಸಲಾಗುತ್ತಿತ್ತು ಎಂಬುದು ತಿಳಿದಿಲ್ಲ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಘಟನೆಗೆ ಕಾರಣರಾದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು' ಎಂದು ಹೇಳಿದ್ದಾರೆ. [ಹುಬ್ಬಳ್ಳಿ ಕಟ್ಟಡ ದುರಂತ : ಸೋಮವಾರದ ವಿವರಗಳು]
7 ಜನರನ್ನು ಬಲಿ ಪಡೆದ ಕಟ್ಟಡ
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆಗೆ ಸೇರಿದ 50 ವರ್ಷ ಹಳೆಯ ಪಾರ್ಸೆಲ್ ಕಟ್ಟಡ ಸೋಮವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಭೀಕರ ದುರಂತದಲ್ಲಿ ಈವರೆಗೆ 7 ಜನರು ದುರ್ಮರಣಕ್ಕೀಡಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
2 ಅಂತಸ್ತಿನ ಕಟ್ಟದ ಕುಸಿದು ಬಿತ್ತು
ಎರಡು ಅಂತಸ್ತಿನ ಸುಮಾರು 50 ವರ್ಷಗಳ ಹಳೆಯದಾದ ಕಟ್ಟಡದಲ್ಲಿ ಪಾರ್ಸೆಲ್ ಕಚೇರಿ ಮತ್ತು ಪೊಲೀಸ್ ಠಾಣೆಗಳಿತ್ತು. ರೈಲ್ವೆ ಪೊಲೀಸ್ ಠಾಣೆ ಇತ್ತು. ವಾರದ ಹಿಂದೆ ಹೊಸ ಕಟ್ಟಡಕ್ಕೆ ಅದನ್ನು ಸ್ಥಳಾಂತರಿಸಲಾಗಿತ್ತು. ಸೋಮವಾರ ರೈಲ್ವೆ ಪೊಲೀಸ್ ಸಿಬ್ಬಂದಿ ತಮ್ಮ ಕಚೇರಿಯಲ್ಲಿದ್ದ ಹಳೆಯ ಕಡತ ಮತ್ತು ಬಂದೂಕುಗಳನ್ನು ತೆಗೆದುಕೊಳ್ಳಲು ಕಚೇರಿಗೆ ಆಗಮಿಸಿದ್ದರು.
ಸಂಪೂರ್ಣ ಕಟ್ಟಡವೇ ಕುಸಿಯಿತು
ಪೊಲೀಸ್ ಠಾಣೆ ಇದ್ದ ಭಾಗದಲ್ಲಿನ ಕಟ್ಟಡದ ಗೋಡೆಯನ್ನು ಕೆಡವಲು ಜೆಸಿಬಿಯಿಂದ ಕಾರ್ಯಾಚರಣೆ ನಡೆಸುವಾಗ ಇಡೀ ಕಟ್ಟಡ ಕುಸಿದು ಈ ದುರಂತ ಸಂಭವಿಸಿತು. 7 ಜನರು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಕಟ್ಟಡದದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
2 ಲಕ್ಷ ಪರಿಹಾರ ಘೋಷಣೆ
ಕೇಂದ್ರ ಸಚಿವ ಅನಂತಕುಮಾರ್ ಅವರು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದರು. ಗಾಯಗೊಂಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಗಾಯಗೊಂಡವರು
ಈ ದುರಂತದಲ್ಲಿ ಗುರುರಾಜ್, ರೆಹಮಾನ್, ತುಂಬು ಬಿ.ಎಸ್, ಗಂಗಾಧರ ರಾಠೋಡ, ಚನ್ನಬಸನಗೌಡ, ಮುರಳೀಧರ, ರೈಲ್ವೆ ಪೊಲೀಸ್ ಬಸಯ್ಯ ಎಸ್, ರುಕ್ಮುದ್ದೀನ್ ಖಾನ್, ಮೋಹನ್ ಪಿ.ಎಸ್, ಪಿ.ಆರ್.ಹುರುಳಿಕೊಪ್ಪಿ, ಪ್ರವೀಣ ಪಾಟೀಲ, ಬಸವರಾಜ ಕೋಣಿಯವರ, ಲಿಂಗಪ್ಪ ಶಿವಳ್ಳಿ, ವಿಶ್ವನಾಥ ಅವರು ಗಾಯಗೊಂಡಿದ್ದಾರೆ.
ಮೃತಪಟ್ಟವರ ಹೆಸರುಗಳು
ದುರಂತದಲ್ಲಿ ಕೈಲಾಸ ರಂಜನ್ (68), ಸಂಡೂರಿನ ಎಂ.ಗಾಳೆಪ್ಪ (39), ಬುಕ್ಕಿಂಗ್ ಕಚೇರಿಯ ವಾಣಿಜ್ಯ ವಿಭಾಗದ ಮುಖ್ಯ ಗುಮಾಸ್ತ ತಿಮ್ಮಾರೆಡ್ಡಿ (50), ಕೂಲಿ ಕಾರ್ಮಿಕ ಸಲೀಂ ರಫೀಕ್ ಈಟಿ (38), ಪೊಲೀಸ್ ಇನ್ಸ್ಪೆಕ್ಟರ್ ಕಚೇರಿ ರೈಟರ್ ಸಿದ್ದಯ್ಯ ಹಿರೇಮಠ (32), ಪೊಲೀಸ್ ಕಚೇರಿ ದ್ವಿತೀಯ ದರ್ಜೆ ಸಹಾಯಕಿ ದಾಕ್ಷಾಯಿಣಿ ಗೌಡರ (35), ಪೊಲೀಸ್ ಪೇದೆ ಎಸ್.ಎಸ್.ದೀಕ್ಷಿತ್ ಮೃತಪಟ್ಟಿದ್ದಾರೆ.
ಕ್ರಿಮಿನಲ್ ಮೊಕದ್ದಮೆ ದಾಖಲು
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು, 'ಕಚೇರಿ ಸ್ಥಳಾಂತಕ್ಕೆ ಸೂಚಿಸಿದ್ದರೂ ಇದುವರೆಗೂ ಯಾಕೆ ಇಲ್ಲಿಯೇ ಕಾರ್ಯನಿರ್ವಹಿಸಲಾಗುತ್ತಿತ್ತು ಎಂಬುದು ತಿಳಿದಿಲ್ಲ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಘಟನೆಗೆ ಕಾರಣರಾದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು' ಎಂದು ಹೇಳಿದ್ದಾರೆ.
ನಿರಂತರವಾಗಿ ಪರಿಶೀಲನೆ
'ಪ್ರತಿ ಎರಡು ವರ್ಷಕ್ಕೊಮ್ಮೆ ರೈಲ್ವೆ ಇಲಾಖೆಯ ಎಲ್ಲ ಕಟ್ಟಡಗಳನ್ನು ಪರಿಶೀಲಿಸಲಾಗುತ್ತದೆ' ಎಂದು ನೈಋತ್ಯ ರೈಲ್ವೆ ವಿಭಾಗ ವ್ಯವಸ್ಥಾಪಕ ಎ.ಕೆ.ಜೈನ್ ಹೇಳಿದ್ದಾರೆ. 'ಎರಡು ವರ್ಷಗಳ ಹಿಂದಷ್ಟೇ ಕಟ್ಟಡದ ಪರಿಶೀಲನೆ ನಡೆಸಲಾಗಿತ್ತು. ಒಂದು ವಾರದ ಹಿಂದೆ ಕಟ್ಟಡ ತೆರವುಗೊಳಿಸಲು ಸೂಚಿಸಲಾಗಿತ್ತು. ಘಟನೆ ಕುರಿತು ತನಿಖೆ ನಡೆಸಲಾಗುವುದು' ಎಂದು ಅವರು ತಿಳಿಸಿದ್ದಾರೆ.
ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿತ್ತು
10 ದಿನಗಳ ಹಿಂದೆ ಶಿಥಿಲಗೊಂಡಿರುವ ಈ ಕಟ್ಟಡದಿಂದ ಪಾರ್ಸೆಲ್ ಕಚೇರಿಯನ್ನು ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿತ್ತು. ಆದರೆ, ಸ್ಥಳಾಂತರ ಮಾಡುವ ಮೊದಲೇ ಈ ದುರಂತ ಸಂಭವಿಸಿದೆ.
ಮಂಗಳವಾರ ಸಿದ್ದರಾಮಯ್ಯ ಭೇಟಿ?
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಪ್ರಚಾರ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಾರವಾಡ ಜಿಲ್ಲೆಗೆ ಮಂಗಳವಾರ ಭೇಟಿ ನೀಡಲಿದ್ದು, ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.