ಶಿರಾಡಿ ಘಾಟ್ ಕಾಂಕ್ರಿಟ್ ರಸ್ತೆ ಕಾಮಗಾರಿ ಚಿತ್ರಗಳು
ಹಾಸನ, ಏ. 6 : ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯ ಕಾಂಕ್ರಿಟ್ ಕಾಮಗಾರಿಯನ್ನು 2015ರ ಮೇ ಯೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದ್ದಾರೆ.
ಒಟ್ಟು 26 ಕಿ.ಮೀ ಉದ್ದದ ಶಿರಾಡಿ ಘಾಟ್ ರಸ್ತೆಯನ್ನು 13 ಕಿ.ಮೀ ನಂತೆ ಎರಡು ಭಾಗಗಳನ್ನಾಗಿ ಮಾಡಿಕೊಂಡು ದುರಸ್ತಿ ಕಾರ್ಯವನ್ನು ಮಾಡಲಾಗುತ್ತಿದೆ. ಶನಿವಾರ ಕೆಂಪುಹೊಳೆ ಚೆಕ್ಪೋಸ್ಟ್ನಿಂದ ಮಾರನಹಳ್ಳಿವರೆಗಿನ 13 ಕಿ.ಮೀ ದೂರದ ರಸ್ತೆಯ ಕಾಮಗಾರಿಯ ಪರಿಶೀಲನೆಯನ್ನು ಸಚಿವರು ನಡೆಸಿದರು.[ಶಿರಾಡಿ ರಸ್ತೆ ದುರಸ್ತಿ ಆಗುತ್ತಿರುವುದಕ್ಕೆ ಈ ಚಿತ್ರಗಳೇ ಸಾಕ್ಷಿ]
ಜನವರಿಯಲ್ಲಿ ಈ ಮಾರ್ಗದ ಕಾಮಗಾರಿಯನ್ನು ಆರಂಭಿಸಲಾಗಿದ್ದು ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಸಾಗುತ್ತಿದೆ. ಮೊದಲೇ ಹೇಳಿದಂತೆ 2015ರ ಮೇ ತಿಂಗಳಿನಲ್ಲಿ 13 ಕಿ.ಮೀ. ಮಾರ್ಗದ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಕಾಂಕ್ರಿಟ್ ರಸ್ತೆ ಕಾಮಗಾರಿಗಾಗಿ ಶಿರಾಡಿ ಘಾಟ್ನಲ್ಲಿ ಜ.2ರಿಂದಲೇ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. 2015ರ ಮೇ 15ರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್ ರಾಘವನ್ ಹೇಳಿದ್ದಾರೆ. ಶಿರಾಡಿ ಘಾಟ್ ಕಾಮಗಾರಿ ಚಿತ್ರಗಳು
ಅಧ್ಯಯನ ನಡೆಸಿ ಕಾಮಗಾರಿ ಆರಂಭಿಸಲಾಗಿದೆ
ಈ ಪ್ರದೇಶದಲ್ಲಿ 500 ಮಿ.ಮೀ ನಷ್ಟು ಮಳೆ ಬೀಳುವುದರಿಂದ ರಸ್ತೆ ಹಾಳಾಗುತ್ತಿದೆ. ಈಗ ಕಾಂಕ್ರಿಟ್ ರಸ್ತೆ ಕಾಮಗಾರಿ ವೇಳೆಯಲ್ಲಿ ಅಧ್ಯಯನ ನಡೆಸಿ ಸೂಕ್ತ ಯೋಜನೆ ರೂಪಿಸಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.