ಚಿತ್ರಗಳು : ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಕಟ್ಟಡ ಕುಸಿತ
ಹುಬ್ಬಳ್ಳಿ, ಫೆಬ್ರವರಿ 07 : ಸುಮಾರು 50 ವರ್ಷಗಳಷ್ಟು ಹಳೆಯದಾದ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಾರ್ಸೆಲ್ ಕೌಂಟರ್ನ ಕಟ್ಟಡ ಸೋಮವಾರ ಮಧ್ಯಾಹ್ನ ಕುಸಿದು ಬಿದ್ದಿದೆ. 8ಕ್ಕೂ ಅಧಿಕ ಜನರು ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಎರಡು ಮಹಡಿಯ ಕಟ್ಟಡದಲ್ಲಿ ಪೊಲೀಸ್ ಠಾಣೆ ಹಾಗೂ ಪಾರ್ಸೆಲ್ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯನ್ನು ಸ್ಥಳಾಂತರ ಮಾಡಲಾಗಿತ್ತು. ಆ ಕಟ್ಟಡದ ಗೋಡೆ ಒಡೆಯುವ ಸಂದರ್ಭದಲ್ಲಿ ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಕಟ್ಟಡ ಕುಸಿದುಬಿದ್ದಿದೆ. [ಹುಬ್ಬಳ್ಳಿಯಲ್ಲಿ ಕಟ್ಟಡ ಕುಸಿತ, ಜೀವ ಉಳಿಸಲು ಶತಪ್ರಯತ್ನ]
ಕಟ್ಟಡದ ಅವಶೇಷಗಳಡಿ ಓರ್ವ ಮಹಿಳೆ ಮತ್ತು ಮಗು ಸೇರಿದಂತೆ 8ಕ್ಕೂ ಹೆಚ್ಚು ಜನ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಅಗ್ನಿಶಾಮಕದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಜನರು ಸಹ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಸ್ಥಳಕ್ಕೆ ಆಗಮಿಸಿದ್ದು, ಅಧಿಕಾರಿಗಳಿಂದ ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಅವೇಶಷಗಳ ಅಡಿ ಸಿಲುಕಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕುಸಿದು ಬಿದ್ದ ಪಾರ್ಸೆಲ್ ಕಟ್ಟಡ
ಹುಬ್ಬಳ್ಳಿ ಸೆಂಟ್ರಲ್ ರೈಲ್ವೆ ನಿಲ್ದಾಣದ ಪಾರ್ಸೆಲ್ ವಿಭಾಗದ ಕಟ್ಟಡ ಸೋಮವಾರ ಮಧ್ಯಾಹ್ನ ಕುಸಿದುಬಿದ್ದಿದೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣೆ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.
ಕುಸಿದು ಬಿದ್ದ ಎರಡು ಅಂತಸ್ತಿನ ಕಟ್ಟಡ
ಎರಡು ಮಹಡಿಯ ಕಟ್ಟಡದಲ್ಲಿ ಪೊಲೀಸ್ ಠಾಣೆ ಹಾಗೂ ಪಾರ್ಸೆಲ್ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯನ್ನು ಸ್ಥಳಾಂತರ ಮಾಡಲಾಗಿತ್ತು. ಆ ಕಟ್ಟಡದ ಗೋಡೆ ಒಡೆಯುವ ಸಂದರ್ಭದಲ್ಲಿ ಕಟ್ಟಡ ಕುಸಿದುಬಿದ್ದಿದೆ.
5 ಜೆಸಿಬಿಗಳ ಆಗಮನ
ಅವಶೇಷಗಳ ಅಡಿಯಿಂದ ಇದುವರೆಗೂ ಮೂವರನ್ನು ರಕ್ಷಣೆ ಮಾಡಲಾಗಿದೆ. 5 ಜೆಸಿಬಿಗಳು ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿವೆ. 10 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ.
ಜನರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ
'ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಜನರಿಂದ ತೊಂದರೆಯಾಗುತ್ತಿದೆ. ಜನರನ್ನು ದೂರಕ್ಕೆ ಕಳಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇವೆ' ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತುರ್ತು ನಿರ್ವಾಹಕ ಪ್ರದೀಪ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಟ್ಟಡ ಖಾಲಿ ಮಾಡಲು ಸೂಚನೆ ನೀಡಲಾಗಿತ್ತು
ಶಿಥಿಲಗೊಂಡಿದ್ದ ಈ ಕಟ್ಟಡವನ್ನು ತೆರವುಗೊಳಿಸಿ ಎಂದು ಅಸಿಸ್ಟೆಂಟ್ ಇಂಜಿನಿಯರ್ಗೆ ಸೂಚಿಸಲಾಗಿತ್ತು. ಆದರೆ, ಕಟ್ಟಡವನ್ನು ತೆರವುಗೊಳಿಸುವ ಮುನ್ನವೇ ಈ ದುರಂತ ನಡೆದಿದೆ.
ಅವಶೇಷಗಳಡಿ ಸಿಲುಕಿ ನಾಲ್ವರ ಸಾವು
ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಆರು ಜನರನ್ನು ಇದುವರೆಗೂ ಹೊರತೆಗೆಯಲಾಗಿದೆ. ಇವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರಿಗೆ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.