ಲೆಹರ್ ಸಿಂಗ್ ಗೆಲ್ಲಿಸಿದ ಯಡಿಯೂರಪ್ಪ ಯಾರಿಗೆ ಸಂದೇಶ ಕೊಟ್ರು?
ಬೆಂಗಳೂರು, ಜೂನ್ 11 : 2009ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಕರ್ನಾಟಕದಲ್ಲಿ ಹತ್ತು ವರ್ಷ ಬಿಜೆಪಿಯದ್ದೇ ಆಡಳಿತ ಎಂದು ಭಾವಿಸಲಾಗಿತ್ತು. ಪಕ್ಷದ ಪ್ರಬಲ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಹೊರ ಹೋದ ಬಳಿಕ ಪಕ್ಷದ ಅಸ್ತಿತ್ವವೇ ಬದಲಾಗಿ ಹೋಯಿತು.
ಈಗ ಕಾಲ ಚಕ್ರ ಮತ್ತೊಂದು ಸುತ್ತು ತಿರುಗಿದ್ದು, ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ತಮ್ಮ ಆಪ್ತ ಲೆಹರ್ ಸಿಂಗ್ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆಯಾಗುವಂತೆ ಮಾಡಿದ್ದಾರೆ. [ವಿಧಾನಪರಿಷತ್ ಫಲಿತಾಂಶ: ಯಾರಿಗೆ ಲಾಭ? ಯಾರಿಗೆ ನಷ್ಟ?]
ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ವಿರುದ್ಧ ಮಾತನಾಡಿದ್ದಕ್ಕೆ ಪಕ್ಷದಿಂದ ಅಮಾನತುಗೊಂಡಿದ್ದ ಲೆಹರ್ ಸಿಂಗ್ ಮತ್ತೆ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಎಲ್.ಕೆ.ಅಡ್ವಾಣಿ ಬಣದ ನಾಯಕರಿಗೆ ಇದು ಸಂದೇಶವೊಂದನ್ನು ರವಾನಿಸಿದೆ. [2018ರ ಚುನಾವಣೆಗೆ ಯಡಿಯೂರಪ್ಪ ತಂಡ ಸಿದ್ಧ]
ಅಡ್ವಾಣಿ ಪಕ್ಷದ ಹೈಕಮಾಂಡ್ ನಾಯಕರಾಗಿರುವಾಗ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗುವುದು ಸಾಧ್ಯವಿಲ್ಲ ಎಂದು ಕರ್ನಾಟಕದ ಕೆಲವು ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ, ಯಡಿಯೂರಪ್ಪ ಅಧ್ಯಕ್ಷರಾದರು. ತಮ್ಮ ಆಪ್ತರನ್ನು ಪರಿಷತ್ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿಕೊಂಡು ಬಂದರು. [ಯಡಿಯೂರಪ್ಪ ಮುಂದಿರುವ 6 ಪ್ರಮುಖ ಸವಾಲುಗಳು]
ಲೆಹರ್ ಸಿಂಗ್ ಅವರ ಗೆಲುವು ಅಚ್ಚರಿ ಅಲ್ಲ, ಚುನಾವಣೆಗೆ ನಾಮಪತ್ರ ಸಲ್ಲಿಸುವಾಗಲೇ ಸಿಂಗ್ ಅವರನ್ನು ಗೆಲ್ಲಿಸಬೇಕು ಎಂದು ಯಡಿಯೂರಪ್ಪ ಪಣ ತೊಟ್ಟಿದ್ದರು. ಅಡ್ವಾಣಿ ಬಣದ ನಾಯಕರಿಗೆ ಇದು ಸ್ಟಷ್ಟ ಸಂದೇಶವೊಂದನ್ನು ಸಾರಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿದ ನಾಯಕರಲ್ಲಿ ಅಡ್ವಾಣಿ ಅವರು ಒಬ್ಬರಾಗಿದ್ದರು. [ಬಿಜೆಪಿಯಿಂದ ಎಂಎಲ್ ಸಿ ಲೆಹರ್ ಸಿಂಗ್ ಉಚ್ಚಾಟನೆ]
2013ರಲ್ಲಿ ಲೆಹರ್ ಸಿಂಗ್ ಅವರು ಅಡ್ವಾಣಿ ಅವರಿಗೆ ಖಾರವಾದ ಪತ್ರವೊಂದನ್ನು ಬರೆದಿದ್ದರು. ರಾಜ್ಯದಲ್ಲಿ ಪಕ್ಷದ ಹಿನ್ನಡೆಗೆ ನಿಮ್ಮ ಕೊಡುಗೆಯೂ ಇದೆ. ರಾಜಿಯಾಗದ ನಿಮ್ಮ ಈಗಿನ ಮನೋಭಾವ ಮೊದಲೇ ಇದ್ದಿದ್ದರೆ ರಾಜ್ಯದಲ್ಲಿ ಪಕ್ಷ ಇವತ್ತು ಈ ದಯನೀಯ ಸ್ಥಿತಿಗೆ ತಲುಪುತ್ತಿರಲಿಲ್ಲ ಎಂದು 13 ಅಂಶಗಳನ್ನು ಒಳಗೊಂಡ ಪತ್ರ ಬರೆದಿದ್ದರು.
ಈ ಪತ್ರ ದೆಹಲಿ ತಲುಪಿದ ತಕ್ಷಣ ಲೆಹರ್ ಸಿಂಗ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಆದರೆ, ಈಗ ಯಡಿಯೂರಪ್ಪ ಅವರ ಕಾಲ. ಪರಿಷತ್ ಚುನಾವಣೆ ಘೋಷಣೆಯಾದ ತಕ್ಷಣ ಲೆಹರ್ ಸಿಂಗ್ ಅವರನ್ನು ಕಣಕ್ಕಿಳಿಸಿದ ಯಡಿಯೂರಪ್ಪ ಅವರು ಗೆಲ್ಲಿಸಿಕೊಂಡು ಬರುವಲ್ಲಿಯೂ ಯಶಸ್ವಿಯಾಗಿದ್ದಾರೆ. ಯಡಿಯೂರಪ್ಪ ಅವೇ ಮುಖ್ಯ ಎಂಬ ಸಂದೇಶವೊಂದು ಈ ಮೂಲಕ ಅಡ್ವಾಣಿ ಬಣದ ನಾಯಕರಿಗೆ ರವಾನೆಯಾಗಿದೆ.