ಸುಡುತ್ತಿದೆ ಕರ್ನಾಟಕ, ಬಾ ಮಳೆಯೇ ಬೇಗ ಬಾ..
ಬೆಂಗಳೂರು, ಮಾರ್ಚ್.28: ಕರ್ನಾಟಕ ಪ್ರತಿದಿನ ಬಿಸಿಯಾಗುತ್ತಿದೆ. ಸೂರ್ಯ ಸುಡುತ್ತಿದ್ದಾನೆ. ಉತ್ತರ ಕರ್ನಾಟಕದ ಜನರಂತೂ 42 ಡಿಗ್ರಿ ಉಷ್ಣತೆಯನ್ನು ಪ್ರತಿ ದಿನ ಅನುಭವಿಸುತ್ತಿದ್ದಾರೆ.
ಇನ್ನೊಂದೆಡೆ ಕುಡಿವ ನೀರು ಸಮಸ್ಯೆ ತಲೆದೋರಿದೆ. 120 ಅಧಿಕ ತಾಲೂಕುಗಳಲ್ಲಿ ಬರ ಕಾಣಿಸಿಕೊಂಡಿದೆ. ಒಂದೆಡೆ ಸೆಕೆ, ಕುಡಿಯುವ ನೀರಿಗೆ ತತ್ವಾರ, ಬತ್ತಿದ ಜಲಾಶಯಗಳು ಸದ್ಯದ ಕರ್ನಾಟಕದ ಪರಿಸ್ಥಿತಿಗೆ ಕನ್ನಡಿ ಹಿಡಿದಿವೆ.[ಕುಡಿಯುವ ನೀರಿಗೆ 3ನೇ ಮಹಾಯುದ್ಧ ಆಗಬೇಕೆ?]
ರಾಜ್ಯದ ಹಲವೆಡೆ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಶುರುವಾಗಿದೆ. ಜಲಾಶಯಗಳು ಬರಿದಾಗುತ್ತಿರುವುದರಿಂದ ಕಾಲುವೆಗಳಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಸೆಕೆ, ಸೊಳ್ಳೆ ಕಾಟ, ಸಾಂಕ್ರಾಮಿಕ ರೋಗ ತಾತ್ಕಾಲಿಕ ಸಮಸ್ಯೆಯಾಗಿದ್ದರೆ ಕುಡಿಯುವ ನೀರು ಕೊರತೆ, ಬರ ಶಾಶ್ವತ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಪರಿಸ್ಥಿತಿ ಬಿಗಡಾಯಿಸಲಿದೆ
ಉತ್ತರ ಕರ್ನಾಟಕದ 196 ಹಳ್ಳಿಗಳಲ್ಲಿ ಬರದ ವಾತಾವರಣ ಬಿಗಡಾಯಿಸಿದೆ. 25 ಸಾವಿರ ಹೆಕ್ಟೇರ್ ಪ್ರದೇಶ ನೀರಿಲ್ಲದೆ ಒಣಗುತ್ತಿದೆ.
ಅಂತರ್ಜಲ ಮಾಯ
ರಾಜ್ಯದ ಎಲ್ಲೆಡೆ ಅಂತರ್ಜಲ ಮಾಯವಾಗುತ್ತಿದೆ. ಅಂತರ್ಜಲ ಹೆಚ್ಚಳಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿದ್ದರೂ ಸದ್ಯಕ್ಕೆ ಯಾವ ಪರಿಹಾರ ಕಾಣುತ್ತಿಲ್ಲ.
ಪರಿಹಾರ
ಬರ ಪರಿಹಾರವೆಂದು ರೈತರಿಗೆ 9.2 ಕೋಟಿ ರು. ವಿತರಣೆ ಮಾಡಲಾಗಿದೆ. 375 ಕುಡಿಯುವ ನೀರಿನ ಹೊಸ ಯೋಜನೆಗಳ ಆರಂಭ ಮಾಡಲಾಗಿದೆ.
ಕಲಬುರಗಿ ಕಷ್ಟ ಕಷ್ಟ
ಕಲಬುರಗಿ ಜಿಲ್ಲೆಯ 314 ಹಳ್ಳಿಗಳ ಸ್ಥಿತಿ ಅಯೋಮಯವಾಗಿದೆ. ಇನ್ನು ನೂರು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
1972 ರ ನಂತರ
1972 ರ ನಂತರ ಕರ್ನಾಟಕ ಭೀಕರ ಬರ ಎದುರಿಸುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗುತ್ತಿದೆ. ಈ ಬಾರಿ ಉತ್ತರ ಕರ್ನಾಟಕದ ಪರಿಸ್ಥಿತಿ ಬಿಗಡಾಯಿಸುವುದು ನಿಚ್ಚಳ.
ಕೇಂದ್ರ ತಂಡ ಬಂದಿತ್ತು
ಫೆಬ್ರವರಿ ತಿಂಗಳಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡ ವಿವಿಧ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಕಲೆಹಾಕಿತ್ತು.. 10 ಜನ ಅಧಿಕಾರಿಗಳ ತಂಡ ಕಲಬುರಗಿ, ಬೆಳಗಾವಿ, ವಿಜಯಪುರ, ಹುಬ್ಬಳ್ಳಿ, ಗದಗ ಜಿಲ್ಲೆಯ ಹಲವು ಗ್ರಾಮಗಳಿಗೆ ತೆರಳಿ ರೈತರೊಂದಿಗೆ ಮಾತುಕತೆ ನಡೆಸಿತ್ತು.
ಕೆಆರ್ ಎಸ್ ಖಾಲಿ
ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ತಗ್ಗುತ್ತಿದ್ದು ಕೆಆರ್ ಎಸ್ 82 ಅಡಿಗೆ ಕುಸಿದಿದೆ. ಪರಿಣಾಮ ಈ ಬೇಸಿಗೆಯಲ್ಲಿ ಬೆಂಗಳೂರು ಮಹಾನಗರ ಕುಡಿಯುವ ನೀರಿನ ಸಮಸ್ಯೆ ಎದುರಿಸಿದರೂ ಆಶ್ಚರ್ಯವಿಲ್ಲ.
ವಿದ್ಯುತ್ ಅಭಾವ
ಒಂದೆಡೆ ವಿದ್ಯುತ್ ಅಭಾವ ಇನ್ನೊಂದೆಡೆ ಕುಡಿಯುವ ನೀರಿನ ಸಮಸ್ಯೆ ಎರಡೂ ಕರ್ನಾಟಕವನ್ನು ಕಾಡಲು ಶುರುಮಾಡಿದೆ. ನಾಗರಿಕರ ಮೂಲ ಅಗತ್ಯಗಳಿಗೆ ಆತಂಕ ಎದುರಾಗಿದ್ದು ಬೇಸಿಗೆ ರೈತನೊಬ್ಬನನ್ನೆ ಅಲ್ಲದೇ ಸಾಮಾನ್ಯ ನಾಗರಿಕರನ್ನು ಕಾಡುವುದು ಪಕ್ಕಾ.
ಪರಿಹಾರವೇನು?
ನಿಸರ್ಗ ಮುನಿಸಿಕೊಂಡರೆ ಯಾರೂ ಏನು ಮಾಡಲೂ ಸಾಧ್ಯವಿಲ್ಲ. ಆದರೆ ಜನರಿಗೆ ತ್ವರಿತವಾಗಿ ಬೇಕಿರುವ ಕುಡಿಯುವ ನೀರನ್ನು ನೀಡುವ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡರ ಮೇಲೂ ಇದೆ. ಆದಷ್ಟು ಬೇಗನೇ ಬರ ಪರಿಹಾರ ವಿತರಣೆಯಾದರೆ ರೈತರ ಸಾವನ್ನು ತಡೆಯಬಹುದು