ಐದು ರಾಜ್ಯಗಳ ಫಲಿತಾಂಶ : ಕರ್ನಾಟಕ ಕಾಂಗ್ರೆಸ್ಸಿಗೆ ಪಾಠ!
ಬೆಂಗಳೂರು, ಮೇ 20 : ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ 'ಕಾಂಗ್ರೆಸ್ ಮುಕ್ತ ಭಾರತ' ಎಂಬ ಬಿಜೆಪಿಯ ಕನಸಿಗೆ ಮಿಂಚಿನ ಸಂಚಲನ ಸಿಕ್ಕಿದೆ. ಕರ್ನಾಟಕದಲ್ಲಿ ಮೂರು ವರ್ಷ ಪೂರೈಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆಯೂ ಚುನಾವಣೆ ಫಲಿತಾಂಶ ಪ್ರಭಾವ ಬೀರಲಿದೆ.
ಕಾಂಗ್ರೆಸ್ ಪಕ್ಷದ ಪಾಲಿಗೆ ಕರ್ನಾಟಕವೇ ಈಗ ಬಹುದೊಡ್ಡ ಶಕ್ತಿ. ಪಕ್ಷ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶ, ಉತ್ತರಾಖಂಡ್, ಮೇಘಾಲಯ, ಮಣಿಪುರ, ವಿಜೋರಾಂ, ಕರ್ನಾಟಕ ರಾಜ್ಯಗಳ ಪೈಕಿ ಕನ್ನಡ ನಾಡೇ ಅತೀ ದೊಡ್ಡದು. ಆದ್ದರಿಂದ, ಪಕ್ಷದೊಳಗಿನ ಭಿನ್ನಮತ ಬಗೆಹರಿಸಿ ಜನಪರ ಆಡಳಿತ ನೀಡಬೇಕಾದ ಸವಾಲು ಪಕ್ಷದ ಮುಂದಿದೆ. ['ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣರಲ್ಲ']
ಕರ್ನಾಟಕದಲ್ಲಿ 2018ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿಯಾಗಲಿದೆ. ಆದ್ದರಿಂದ, ಪಕ್ಷ ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ರಣತಂತ್ರ ರೂಪಿಸಬೇಕು. ಇಲ್ಲವಾದಲ್ಲಿ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗುವ ಅಪಾಯವಿದೆ. [ಸೋಲೊಪ್ಪಿಕೊಂಡ ರಾಹುಲ್ ರನ್ನು ಕಿಚಾಯಿಸಿದ ಟ್ವೀಟ್ಸ್]
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಸಿದ್ದರಾಮಯ್ಯ ಅವರು 'ಸೇಫ್' ಎಂಬುದು ಪಕ್ಷದ ಒಂದು ಬಣದ ವಾದ. ನಾಯಕತ್ವ ಬದಲಾವಣೆ ಮಾಡದಿದ್ದರೆ ಅಸ್ಸಾಂ ಫಲಿತಾಂಶ ಇಲ್ಲೂ ಬರಲಿದೆ ಎನ್ನುವುದು ಮತ್ತೊಂದು ಬಣದ ವಾದ. ಬಿಜೆಪಿ ನಾಯಕರು ಆಗಲೇ 'ಕಾಂಗ್ರೆಸ್ ಮುಕ್ತ ಕರ್ನಾಟಕ'ದ ಮಂತ್ರ ಪಠಿಸುತ್ತಿದ್ದಾರೆ. ಫಲಿತಾಂಶ ಕರ್ನಾಟಕದ ಮೇಲೆ ಬೀರುವ ಪ್ರಭಾವವೇನು? ಇಲ್ಲಿದೆ ವಿವರಗಳು......[ಕರ್ನಾಟಕ ಸರ್ಕಾರಕ್ಕೆ ಮೂರು ವರ್ಷ, ಮುಂದಿದೆ ಎರಡು ವರ್ಷ!]
ಕರ್ನಾಟಕ ಕಾಂಗ್ರೆಸ್ನ ಸದ್ಯದ ಸ್ಥಿತಿ
ಮೇ 13ರಂದು 4ನೇ ವರ್ಷಕ್ಕೆ ಕಾಲಿಟ್ಟಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಆಂತರಿಕ ಭಿನ್ನಮತಗಳಿವೆ. ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ, ದಲಿತ ಮುಖ್ಯಮಂತ್ರಿ ಕೂಗು, ನಿಗಮ ಮಂಡಳಿ ಅಧ್ಯಕ್ಷ ಪಟ್ಟ, ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವೆಂಬ ಆರೋಪ ಹೀಗೆ ಪಕ್ಷದೊಳಗೆ ಹಲವಾರು ಹಗ್ಗ-ಜಗ್ಗಾಟಗಳಿವೆ. ಬಯಲಿಗೆ ಬರುತ್ತಿರುವ ಹಗರಣಗಳು ಸರ್ಕಾರದ ಪಾರದರ್ಶಕತೆ ಇಮೇಜ್ಗೆ ಧಕ್ಕೆ ತರುತ್ತಿವೆ.
ಸಿದ್ದರಾಮಯ್ಯ ಸೇಫ್ ಅಂತಾರೆ ಬೆಂಬಲಿಗರು
ಪಂಚರಾಜ್ಯಗಳ ಫಲಿತಾಂಶ ನೋಡಿದ ಹೈಕಮಾಂಡ್ ನಾಯಕರು ನಾಯಕತ್ವ ಬದಲಾವಣೆಯಂತಹ ಮಹತ್ವದ ಕಾರ್ಯಕ್ಕೆ ಕೈ ಹಾಕುವುದಿಲ್ಲ. ಆದ್ದರಿಂದ, ಸಿದ್ದರಾಮಯ್ಯ ಅವರು ಸೇಫ್. ಮುಂದಿನ ಎರಡು ವರ್ಷ ಅವರೇ ರಾಜ್ಯದ ಮುಖ್ಯಮಂತ್ರಿ ಎಂಬ ವಾದ ಸಿದ್ದರಾಮಯ್ಯ ಬೆಂಬಲಿಗರದ್ದು.
ಅಸ್ಸಾಂ ಫಲಿತಾಂಶ ಪಾಠವಾಗಲಿದೆ
ಅಸ್ಸಾಂನಲ್ಲಿ ಸತತ ಮೂರು ಅವಧಿಗೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಅನ್ನು ಮಣಿಸಿ ಬಿಜೆಪಿ ಗೆಲುವು ಸಾಧಿಸಿದೆ. ಅಸ್ಸಾಂನಲ್ಲಿ ನಾಯಕತ್ವ ಬದಲಾವಣೆ ಕೂಗಿತ್ತು. ಅದನ್ನು ಪರಿಗಣಿಸಿಲ್ಲ. ಆದ್ದರಿಂದ, ಚುನಾವಣೆಯಲ್ಲಿ ಸೋಲಾಗಿದೆ. ನಾಯಕತ್ವ ಬದಲಾವಣೆ ಮಾಡದಿದ್ದರೆ ಕರ್ನಾಟಕದಲ್ಲಿಯೂ ಇದೇ ಫಲಿತಾಂಶ ಬರುತ್ತದೆ ಎಂಬುದು ಸಿದ್ದರಾಮಯ್ಯ ವಿರೋಧಿ ಬಣದ ವಾದ.
ಭಿನ್ನಮತ ಬಿಡಿ, ಆಡಳಿತ ನೋಡಿ
ಫಲಿತಾಂಶದ ನಂತರ ಪಕ್ಷದೊಳಗಿನ ಭಿನ್ನಮತವನ್ನು ಬಿಟ್ಟು ಜನಸ್ನೇಹಿ ಆಡಳಿತದತ್ತ ಗಮನ ಕೊಡಿ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಖಡಕ್ ಸೂಚನೆ ಕೊಡುವ ಸಾಧ್ಯತೆ ಇದೆ. ಆ ಮೂಲಕ ಪಕ್ಷ ಅಧಿಕಾರದಲ್ಲಿರುವ ದೊಡ್ಡ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯಕ್ಕೆ ಹೈಕಮಾಂಡ್ ಚಾಲನೆ ಕೊಡುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆ ಮೇಲೆ ಕಣ್ಣು
ಕರ್ನಾಟಕದಲ್ಲಿ 2018ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಆಗ ಪಕ್ಷ ಬಲಿಷ್ಠವಾಗಲು ದೊಡ್ಡ ರಾಜ್ಯದ ಬೆಂಬಲ ಬೇಕಾಗುತ್ತದೆ. ಆದ್ದರಿಂದ, ಹೈಕಮಾಂಡ್ ನಾಯಕರು ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳುವತ್ತ ಗಮನಹರಿಸುತ್ತಾರೆ.
ವಿರೋಧಿಗಳ ಬಾಯಿಗೆ ಸಿಗಬಾರದು
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ವಲಯದಲ್ಲಿ ಆತಂಕ ಹೆಚ್ಚಾಗಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ವಿರೋಧ ಪಕ್ಷಗಳ ಬಾಯಿಗೆ ಸಿಲುಕಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗದಂತೆ ಕೆಲಸ ಮಾಡಬೇಕಾದ ಸವಾಲು ಸರ್ಕಾರದ ಮುಂದಿದೆ. ಆಡಳಿತ ವಿರೋಧಿ ಅಲೆ ಎದ್ದರೆ ಅಸ್ಸಾಂ ಫಲಿತಾಂಶ ಪುನರಾವರ್ತನೆಯಾಗುವ ಆತಂಕವೂ ಇದೆ.