ಕಸಾಯಿಖಾನೆಗೆ ಎಮ್ಮೆ ಸಾಗಿಸುತ್ತಿದ್ದ ಮೂವರ ಬಂಧನ
ಮದ್ದೂರು, ಮೇ 12 : ರಾಜ್ಯದಲ್ಲಿ ಬರಬಂದು ರೈತರು ಸಂಕಷ್ಟ ಅನುಭವಿಸುತ್ತಿದ್ದರೆ, ಅದನ್ನೇ ಬಂಡವಾಳವಾಗಿಸಿಕೊಂಡಿರುವ ಸಮಯಸಾಧಕರು, ಹಣದ ಆಮಿಷವೊಡ್ಡಿ ಜಾನುವಾರುಗಳನ್ನು ಕಡಿಮೆ ದರಕ್ಕೆ ಖರೀದಿಸಿ ಕಸಾಯಿಖಾನೆಗೆ ಸಾಗಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಕೆ.ಎಂ.ದೊಡ್ಡಿ ಪೊಲೀಸರು ಕಂಟೈನರ್ ಲಾರಿಯಲ್ಲಿ ತುಂಬಿಸಿ ಸಾಗಿಸುತ್ತಿದ್ದ 36 ಎಮ್ಮೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಲವೆಡೆ ಮಳೆ ಬಾರದೆ ಮೇವಿಗೂ ರೈತರು ಪರದಾಡುವಂತಾಗಿದೆ. ಹೀಗಾಗಿ ಕೆಲವು ರೈತರು ತಮ್ಮ ಬಳಿಯಿರುವ ಜಾನುವಾರುಗಳನ್ನು ಸಾಕಲಾಗದ ಸ್ಥಿತಿಗೆ ಬಂದು ತಲುಪಿದ್ದಾರೆ. ಇದನ್ನು ದುರುಪಯೋಗಪಡಿಸಿಕೊಂಡಿರುವ ಕೆಲವರು ಅವರ ಜಾನುವಾರುಗಳನ್ನು ಕಡಿಮೆ ಹಣ ನೀಡಿ ಖರೀದಿಸಿ ಬಳಿಕ ಕಸಾಯಿಖಾನೆಗೆ ಸಾಗಿಸುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮದ್ದೂರು ವ್ಯಾಪ್ತಿಯಲ್ಲಿ ಈ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಫೈರೋಜ್, ಸೈಹದ್ ನಾಜೀಂ ಹಾಗೂ ಸಿದ್ದರಾಜು ಎಂಬುವರು ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ನಡುವೆ ಬುಧವಾರ ಮುಂಜಾನೆ 3 ಗಂಟೆ ಸಂದರ್ಭದಲ್ಲಿ ಡಿವೈಎಸ್ಪಿ ಮ್ಯಾಥ್ಯೂಥಾಮಸ್ ಅವರು ರಾತ್ರಿಪಾಳಿಯಲ್ಲಿದ್ದ ಸಂದರ್ಭ ತಾಲೂಕಿನ ದೊಡ್ಡರಸಿನಕೆರೆ ಗೇಟ್ ಬಳಿ ಅನುಮಾನಾಸ್ಪದವಾಗಿ ನಿಲ್ಲಿಸಲಾಗಿದ್ದ ಕಂಟೈನರ್ ಒಳಗೊಂಡ ಲಾರಿಯನ್ನು (ಕೆಎ51-ಎ7817) ಪರೀಕ್ಷಿಸಲು ಮುಂದಾದರು. []ಕಸಾಯಿಖಾನೆಗೆ ರೈತರ ಜಾನುವಾರುಗಳ ಅಕ್ರಮ ಸಾಗಾಟ
ಈ ಸಂದರ್ಭ ಲಾರಿಯಲ್ಲಿ 36 ಎಮ್ಮೆಗಳಿದ್ದವು. ತಕ್ಷಣವೇ ಲಾರಿಯನ್ನು ವಶಕ್ಕೆ ತೆಗೆದುಕೊಂಡ ಅವರು, ಆರೋಪಿಗಳಾದ ಫೈರೋಜ್, ಸೈಹದ್ ನಾಜೀಂ ಹಾಗೂ ಸಿದ್ದರಾಜು ಎಂಬುವರನ್ನು ಬಂಧಿಸಿದರು. ನಂತರ ಈ ಮೂವರನ್ನು ವಿಚಾರಣೆಗೊಳಪಡಿಸಲಾಗಿ ಎಮ್ಮೆಗಳನ್ನು ನಾಗಮಂಗಲದಿಂದ ತಿ.ನರಸೀಪುರದ ಕಸಾಯಿಖಾನೆಗೆ ಸಾಗಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಮೂವರು ಆರೋಪಿಗಳ ವಿರುದ್ಧ ಪ್ರಾಣಿಗಳ ಹಿಂಸೆ ಕಾಯ್ದೆ, ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣ ಸೇರಿದಂತೆ ಮತ್ತಿತರ ಕಾಯ್ದೆಗಳನ್ನು ದಾಖಲಿಸಿಕೊಂಡು, ವಶಪಡಿಸಿಕೊಂಡ ಎಮ್ಮೆಗಳನ್ನು ಮೈಸೂರಿನ ಪಿಂಜರಾಪೋಲ್ಗೆ ವರ್ಗಾಯಿಸಿದ್ದಾರೆ. [ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]
ಪಿರಿಯಾಪಟ್ಟಣದಲ್ಲೂ ಇಬ್ಬರ ಬಂಧನ : ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲೂ ಇದೇ ದಂಧೆ ಮುಂದುವರಿದಿದೆ. ಬೆಟ್ಟದಪುರ ಠಾಣೆ ವ್ಯಾಪ್ತಿಯಲ್ಲಿ ವ್ಯಾನಿನಲ್ಲಿ ನಾಲ್ಕು ಎಮ್ಮೆಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ನಜೀಬ್ ಮತ್ತು ಮಂಜು ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. [ಬಸವ ಜಯಂತಿಯಂದೇ ಬೆಟ್ಟದಪುರದಲ್ಲಿ ಗೋಹತ್ಯೆ!]