ಅಕ್ರಮ ಗೋಸಾಗಾಟ: ಗೋಶಾಲೆಯಾದ ಪೊಲೀಸ್ ಠಾಣೆ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಣಿಕೆಗೆ ಇದೊಂದು ಉದಾಹರಣೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲುಕಟ್ಟೆ ಪೊಲೀಸ್ ಠಾಣೆಗೆ ಬಳಿ ಹೋದರೆ ಯಾರಿಗಾದರೂ ಗೋಶಾಲೆಗೆ ಹೋದ ಅನುಭವಾಗುತ್ತದೆ.
ಅಲ್ಲಲ್ಲಿ ಗೋಸಾಗಾಟ ಪ್ರಕರಣದಲ್ಲಿ ವಶಪಡಿಸಿಕೊಂಡ ಗೋವುಗಳನ್ನು ಈ ಪೊಲೀಸ್ ಠಾಣೆಯ ಸನಿಹ ಕಟ್ಟಿ ಹಾಕಲಾಗಿದ್ದು, ಪೊಲೀಸರ ಬೂಟಿನ ಸದ್ದಿನ ಜತೆಗೆ ಅಂಬಾ ಎನ್ನುವ ಆಕಳ ಕರೆಯ ಸದ್ದು ಕೂಡಾ ಕೇಳುತ್ತಿರುತ್ತದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಕ್ರಮ ಗೋಸಾಗಾಟ ಪ್ರಕರಣಗಳ ಸಂಖ್ಯೆ ಹೆಚ್ಚು. ಒಂದು ಕಡೆ ಪ್ರಾಣಿ ದಯಾ ಸಂಘ, ಪ್ರಾಣಿ ಹಿಂಸೆ ತಡೆಗಟ್ಟುವ ಕುರಿತಾಗಿ ಮುತುವರ್ಜಿ ತೋರಿಸುವ ತವಕದಲ್ಲಿ ಕಂಬಳ ನಿಷೇಧ ಮಾಡಿದೆ. (ಬಿಜೆಪಿಯ ಗೋಹತ್ಯೆ ನಿಷೇಧ ವಿಧೇಯಕ ರದ್ದು)
ದಕ್ಷಿಣ ಕನ್ನಡ, ಉಡುಪಿ ಅವಳಿ ಜಿಲ್ಲೆಯಲ್ಲಿ ಗೋ ಮಾರಾಟ ದಂಧೆ ತೀರಾ ಹೆಚ್ಚುತ್ತಿದ್ದು, ಅಧಿಕ ಲಾಭದ ಆಸೆಯಲ್ಲಿ ಧರ್ಮ ಭೇದವಿಲ್ಲದೇ ಮಾರಾಟದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ವಿವಿಧೆಡೆ ಅಕ್ರಮ ಕಸಾಯಿಖಾನೆಗಳು ತಲೆ ಎತ್ತಿದ್ದು ಕಟುಕರ ಸಂಖ್ಯೆ ಹೆಚ್ಚುತ್ತಿದೆ.
ಅನುಮತಿ ಇಲ್ಲದೆ ನಡೆಸುವ ಈ ದಂಧೆಯನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡರೂ ಮರುದಿನವೇ ತಪ್ಪಿತಸ್ಥ ಕಟುಕರ ಬಿಡುಗಡೆಗೆ ವ್ಯವಸ್ಥೆ ನಡೆಯುತ್ತದೆ.
ಕಸಾಯಿಖಾನೆ ದಂಧೆ ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ ಸಿಗರೇಟು ಸೇದಿದರೆ ಹಾಕುವ ಪೆಟ್ಟಿ ಕೇಸಿನಷ್ಟೇ ಸಲೀಸು. ಕೇಸು ದಾಖಲಿಸಿದ ಮರುದಿನ ಅದೇ ದನಕರುಗಳು ಅದೇ ಕಟುಕರ ಪಾಲಾಗುತ್ತವೆ.
ಇವತ್ತು ಕಡಿಯೋ ದನಕ್ಕೆ ಎರಡು ದಿನ ಜೀವದಾನ ನೀಡಿದಂತಾಗುತ್ತದೆ ಅಷ್ಟೇ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ, ಆರೋಪಿಗಳನ್ನು ಬಂಧಿಸುತ್ತೇವೆ ಆದರೆ ರಾಜಕಾರಣಿಗಳು ನಮ್ಮ ದೇಶದ ಕಾನೂನು ವ್ಯವಸ್ಥೆಯನ್ನು ತಲೆ ತಗ್ಗಿಸುವಂತೆ ಮಾಡಿದ್ದಾರೆ ಎನ್ನುವುದು ತಗ್ಗಿದ ದನಿಯಲ್ಲಿ ಕೇಳಿಬರುವ ಪೊಲೀಸ್ ಧ್ವನಿಗಳು. ಹಿಂದಿನ ಪುಟ ಕ್ಲಿಕ್ಕಿಸಿ..