ವಿಗ್ರಹ ಖದೀಮರನ್ನು ಹಿಡಿದು ಥಳಿಸಿದ ಕಾರ್ಕಳ ಗ್ರಾಮಸ್ಥರು
ಕಾರ್ಕಳ, ಆಗಸ್ಟ್, 18 : ದೇವರ ವಿಗ್ರಹ, ಪಿಕಾಸಿ, ಕಾರು ವಾರಸುದಾರರ ಗುರುತಿನ ಚೀಟಿಗಳನ್ನು ಕದ್ದು ಪರಾರಿಯಾಗುತ್ತಿದ್ದ ಖದೀಮರ ಗುಂಪನ್ನು ಹಿಡಿದು ಜಾಡಿಸಿದ ಗ್ರಾಮಸ್ಥರು ಸೋಮವಾರ ಪೊಲೀಸರ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲತ್ರಪದೆ ಊರಿನ ಮೂಲೆಯಲ್ಲಿ ಕಾರು ನಿಂತಿರುವುದನ್ನು ಗಮನಿಸಿದ ಗ್ರಾಮಸ್ಥರು, ಅನುಮಾನ ಬಂದು ಕಾರಿನ ಬಳಿ ತೆರಳಿ ಕಾರಿನಲ್ಲಿ ಇದ್ದ ಡ್ರೈವರ್ ನ್ನು ವಿಚಾರಿಸಿದಾಗ ಹೆದರಿದ ಡ್ರೈವರ್ ಪರಾರಿಯಾಗಲು ಪ್ರಯತ್ನಿಸಿದ್ದಾನೆ.[ಯಜಮಾನ ಸಂಬಳ ನೀಡಲಿಲ್ಲವೆಂದು ಮೊಬೈಲ್ ಟವರ್ ಏರಿದ ನೌಕರ]
ಡ್ರೈವರ್ ಕಾರನ್ನು ಹಿಂಬಾಲಿಸಿದ ಕೆಲವು ಗ್ರಾಮಸ್ಥರು ಸುತ್ತಮುತ್ತಲಿನ ಮಿಯ್ಯೂರು, ಸನೂರು ಇನ್ನು ಹಲವಾರು ಹಳ್ಳಿಗಳಿಗೆ ತಮ್ಮ ಅನುಮಾನದ ವೃತ್ತಾಂತವನ್ನು ತಿಳಿಸಿದ್ದಾರೆ. ಇದಕ್ಕೆ ಕೈ ಜೋಡಿಸಿದ ಹಳ್ಳಿಗರು, ಕೃಷಿ ಭೂಮಿಯಲ್ಲಿ ಸಿಕ್ಕಿ ಹಾಕಿಕೊಂಡ ಕಾರನ್ನು ಹಾಗೂ 5 ಜನರ ಕಳ್ಳರ ಗುಂಪನ್ನು ಸುರತ್ಕಲ್ ಬಳಿಯ ಕೃಷ್ಣಪುರದಲ್ಲಿ ಹಿಡಿಯುವಲ್ಲಿ ವಿಜಯಶಾಲಿಗಳಾಗಿದ್ದಾರೆ.
ಸಮಯಪ್ರಜ್ಞೆ ಮೆರೆದ ಗ್ರಾಮಸ್ಥರು, ಬೆಳುವಾಯ್, ಸನೂರ್, ಬೈಪಾಸ್, ನಿಟ್ಟೆ ಮಾರ್ಗವಾಗಿ ತಪ್ಪಿಸಿಕೊಳ್ಳಲು ಹೆಣಗಾಡಿದ ಕಳ್ಳರನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದು, ಊರಿನ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ದೇವರ ಮೂರ್ತಿ ಕದ್ದು ಹೋಗುತ್ತಿರುವುದಾಗಿ ಸತ್ಯ ಒಪ್ಪಿಕೊಂಡಿದ್ದಾರೆ.
ಈ ಖತರ್ ನಾಕ್ ಕಳ್ಳರನ್ನು ಗ್ರಾಮಸ್ಥರು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಕಾರ್ಕಳ ಪೊಲೀಸರು ಕಳ್ಳತನದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.