ಎಲ್ಲಿಯ ಅಕ್ರಮ ಲಾಟರಿ ದಂಧೆ, ಎಲ್ಲಿಯ ಡಿಕೆ ರವಿ ಸಾವು?
ಬೆಂಗಳೂರು, ಮೇ 26: ಒಂದಂಕಿ ಲಾಟರಿ ಮತ್ತು ಬೆಟ್ಟಿಂಗ್ ಹಗರಣ ದಿನದಿಂದ ದಿನಕ್ಕೆ ವಿಚಿತ್ರ ತಿರುವು ಪಡೆಯುತ್ತಿದೆ. ಬಗೆದಷ್ಟು ಕಪ್ಪುಮಣ್ಣು ಹೊರಬರುತ್ತಲೇ ಇದೆ. ಉಂಡವನಾರೋ, ಮೂತಿ ಒರೆಸಿಕೊಂಡವನು ಇನ್ಯಾರೋ?
ಐಎಎಸ್ ಅಧಿಕಾರಿ ಡಿ ಕೆ ರವಿ ಅನುಮಾನಾಸ್ಪದ ಸಾವಿನ ಸುತ್ತ ಸಿಂಗಲ್ ನಂಬರ್ ಎನ್ನುವ ಭಯಂಕರ ದಂಧೆಯ ಕೈವಾಡವಿತ್ತೇ ಎನ್ನುವ ಮತ್ತೊಂದು ಸಂಶಯ ಈಗ ಕಾಡಲಾರಂಭಿಸಿದೆ. (ಲಾಟರಿ ಹಗರಣ: ಜಾರ್ಜ್ ಹೇಳಿಕೆ)
ಬಹುಷಃ ಇತ್ತೀಚಿನ ದಿನಗಳಲ್ಲಿ ಐಎಎಸ್ ಅಧಿಕಾರಿಯೊಬ್ಬರ ಸಾವಿನ ಸುತ್ತ ಇಷ್ಟೊಂದು ಬೇರೆ ಬೇರೆ ಮಾಫಿಯಾ ಕೈವಾಡದ ಶಂಕೆ ಸುತ್ತಾಡುತ್ತಿರುವುದು ಇದೇ ಮೊದಲಿರಬಹುದು.
ಸಿಂಗಲ್ ನಂಬರ್ ಲಾಟರಿ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಐಎಎಸ್ ಅಧಿಕಾರಿಯಾಗಿದ್ದ ಡಿ ಕೆ ರವಿಯವರಿಗೂ ಇತ್ತು. ಈ ಸಂಬಂಧ ರವಿಯವರು ಪ್ರಮುಖ ಕಂಪೆನಿಗಳ ವಿರುದ್ದ ದಾಳಿಗೆ ಸಿದ್ದತೆ ಮಾಡಿಕೊಂಡಿದ್ದರು ಎನ್ನುವ ಮಾಹಿತಿ ಸ್ಪೋಟಗೊಂಡಿದೆ.
ಪ್ರಮುಖ ಕಂಪೆನಿಗಳಿಂದ ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ಬರಬೇಕಾಗಿತ್ತು. ಕಳೆದ ಹದಿನೈದು ವರ್ಷದಿಂದ ಈ ಕಂಪೆನಿಗಳು ತೆರಿಗೆ ಪಾವತಿಸದೇ ಸರಕಾರಕ್ಕೆ ವಂಚಿಸಿದ್ದಾರೆ ಎಂದು ಚಿಲ್ಲರೆ ಲಾಟರಿ ಮಾರಾಟಗಾರರ ಸಂಘ ಡಿ ಕೆ ರವಿ ಸಾಯುವ ಮೂರು ದಿನದ ಮುನ್ನ ಅವರಲ್ಲಿ ದೂರು ನೀಡಿತ್ತು.
ಹತ್ತು ವರ್ಷದಿಂದ ತೆರಿಗೆ ಪಾವತಿಸಿಲ್ಲ
ಪ್ರಮುಖವಾಗಿ ಒಂಬತ್ತು ಕಂಪೆನಿಗಳು ಇಸವಿ 2000 ದಿಂದ 2007ರ ವರೆಗೆ ಸರಕಾರಕ್ಕೆ ಸುಮಾರು 2750 ಕೋಟಿ ರೂಪಾಯಿ ತೆರಿಗೆ ಪಾವತಿಸಿದೇ ವಂಚಿಸಿದೆ ಎಂದು ರಾಜ್ಯ ಚಿಲ್ಲರೆ ಮಾರಾಟಗಾರ ಸಂಘ ಆಗ ವಾಣಿಜ್ಯ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಿ ಕೆ ರವಿ ಅವರಿಗೆ ಮಾರ್ಚ್ 13ರಂದು ಲಿಖಿತ ದೂರ ನೀಡಿತ್ತು.
9 ಕಂಪೆನಿಗಳ ಪಟ್ಟಿ
ರಾಜಶ್ರೀ
ಗ್ರೂಪ್
ಲಕ್ಷ್ಮೀ
ಏಜನ್ಸಿ
ಕನ್ನಯ್ಯ
ಏಜನ್ಸಿ
ಎಸ್
ಆರ್
ಮಾರ್ಕೆಟಿಂಗ್
ತಾರಾ
ಎಂಡ್
ಕೋ
ಎಲ್
ಎಸ್
ಡಿಸ್ಟ್ರಿಬ್ಯೂಟರ್ಸ್
ಬೆಸ್ಟ್
ಎಂಡ್
ಕೋ
ಮಂಜುನಾಥ್
ಏಜನ್ಸಿ
ಸಮಾಧಾನ್
ಟ್ರೇಡರ್ಸ್
ದೂರು ದಾಖಲಾದ ಮೂರು ದಿನದಲ್ಲಿ ರವಿ
ರಾಜ್ಯ ಸರಕಾರದ ಬೊಕ್ಕಸಕ್ಕೆ ಸುಮಾರು 2750 ಕೋಟಿ ರೂಪಾಯಿ ತೆರಿಗೆ ವಂಚನೆಯಾಗಿದೆಯೆಂದು ಮಾರ್ಚ್ 13ರಂದು ದೂರು ದಾಖಲಾಗಿತ್ತು, ಮಾರ್ಚ್ 16ರಂದು ರವಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹೀಗಾಗಿ, ರವಿ ಅವರ ಅನುಮಾನಾಸ್ಪದ ಸಾವಿಗೂ ಲಾಟರಿ ದಂಧೆಗೂ ನಂಟಿರುವ ಶಂಕೆ ಈಗ ಉದ್ಭವಿಸಿದೆ.
ವ್ಯಾಪಾರಿ ಸಂಘದ ದೂರು
ಚಿಲ್ಲರೆ ಮಾರಾಟಗಾರರ ಸಂಘದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ರವಿ, ದಾಳಿ ನಡೆಸಲು ಮುಂದಾಗಿದ್ದರು. ತೆರಿಗೆ ವಂಚಿಸಿದ ಒಂಬತ್ತು ಕಂಪೆನಿಗಳ ಪಟ್ಟಿಯಲ್ಲಿ ಪಾರಿರಾಜನ್ ಹೆಸರು ಕೂಡಾ ಉಲ್ಲೇಖವಾಗಿತ್ತು. ರಾಜ್ಯದಲ್ಲಿ ಪ್ರತೀ ಹದಿನೈದು ನಿಮಿಷಕ್ಕೆ ಒಂದರಂತೆ ಲಾಟರಿ ನಡೆಯುತ್ತಿತ್ತು ಎಂದು ದೂರಿನಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ.
ಎಲ್ಲಾ ನಕಲಿ ದಾಖಲೆಗಳು
ಕೋಟಿ ಕೋಟಿ ತೆರಿಗೆ ವಂಚಿಸಿದ್ದರೂ ಐಸಿಐಸಿಐ ಮತ್ತು ಕರೂರು ವೈಶ್ಯ ಬ್ಯಾಂಕಿನ ನಕಲಿ ಲೆಟರ್ ಹೆಡ್, ಸೀಲು, ಡಿಡಿ ಸೃಷ್ಟಿಸಿ ತೆರಿಗೆ ಪಾವಸಿದ್ದಾಗಿ ಸರಕಾರಕ್ಕೆ ಈ ಕಂಪೆನಿಗಳು ವಂಚಿಸಿದ್ದವು. ಇದಕ್ಕೆ ವಾಣಿಜ್ಯ ಇಲಾಖೆಯ ಅಧಿಕಾರಿಗಳ ಕುಮ್ಮುಕ್ಕು ಇತ್ತು ಎಂದು ವ್ಯಾಪಾರಿ ಸಂಘದ ದೂರಿನಲ್ಲಿ ದಾಖಲಾಗಿದೆ.
ಸಿಂಗಲ್ ನಂಬರ್ ಕಿಂಗ್ ಪಿನ್
ಇಡೀ ಲಾಟರಿ ದಂಧೆಯ ಕಿಂಗ್ ಪಿನ್ ಎಸ್ ಆರ್ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕ ಮಾರ್ಟಿನ್ ಎನ್ನಲಾಗುತ್ತಿದ್ದು, ಈತನ ಲಾಟರಿ ಜಾಲ ಇಡೀ ದಕ್ಷಿಣಭಾರತದಲ್ಲಿ ವ್ಯಾಪಿಸಿದೆ. ಈತ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಗೆ ಪರಮಾಪ್ತ. ಈತನ ಪರವಾಗಿ ಪಾರಿರಾಜನ್ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.