ಸ್ನೇಹಿತರೇ... ಯುಗಾದಿ ಶುಭಾಶಯ ಹಂಚಿಕೊಳ್ಳಬೇಡಿ
ಬೆಂಗಳೂರು, ಮಾ. 20: ಸ್ನೇಹಿತರೇ ಈ ಬಾರಿ ಸಾಮಾಜಿಕ ಜಾಲತಾಣ ಅಥವಾ ಮೊಬೈಲ್ ನಲ್ಲಿ ದಯವಿಟ್ಟು ಯುಗಾದಿ ಹಬ್ಬದ ಶುಭಾಶಯ ಹಂಚಿಕೊಳ್ಳಬೇಡಿ, ಫೇಸ್ ಬುಕ್ ವಾಲ್ ನಲ್ಲಿ ಹಬ್ಬದ ಸಂದೇಶ ಬರೆಯಬೇಡಿ..
ಹೌದು.. ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಸಂದೇಶಗಳು ಹರಿದಾಡತೊಡಗಿವೆ. ಇದಕ್ಕೆಲ್ಲ ಒಂದೇ ಕಾರಣ ದಕ್ಷ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವು. ಸಿಬಿಐ ಗೆ ತನಿಖೆಯನ್ನು ಒಪ್ಪಿಸಿದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕತಪಡಿಸಿರುವ ಜಾಲತಾಣಿಗರು ವಿವಿಧ ಬಗೆಯ ಕಮೆಂಟ್ ಗಳ ಮೂಲಕ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಯುಗಾದಿ ಹಬ್ಬಕ್ಕೆ ಸಿಎಂ ಸಿದ್ದರಾಮಯ್ಯ ಡಿಕೆ ರವಿ ಯವರ ಪ್ರಾಣವನ್ನೇ 'ಕೊಡುಗೆ' ಯಾಗಿ ಸ್ವೀಕರಿಸಿದ್ದಾರೆ ಎಂಬ ಕಮೆಂಟ್ ಗಳು ಹರಿದಾಡುತ್ತಿವೆ.[ಸಿಬಿಐ ತನಿಖೆಗೆ ರಾಜ್ಯದ ಊರೂರಿನಿಂದ ತೇಲಿಬಂದ ಕೂಗು]
ಕವನಗಳು, ಸರ್ವಜ್ಞನ ವಚನಗಳ ಅನುಕರಣೆ ಡಿಕೆ ರವಿ ಸಾವಿನ ಕತೆಯನ್ನು, ರಾಜ್ಯ ಸರ್ಕಾರ ಸಿಬಿಐ ಗೆ ಒಪ್ಪಿಸದ ಕ್ರಮವನ್ನು ಸಾರಿ ಸಾರಿ ಹೇಳುತ್ತಿದೆ. ಮಾರುಕಟ್ಟೆಯಲ್ಲಿ ಬೇವಿನ ಎಲೆ, ಹೂವು, ಹೊಸ ಬಟ್ಟೆ ಕೊಳ್ಳುವಿಕೆ ಭರಾಟೆ ಕಳೆದ ವರ್ಷಕ್ಕೆ ಹೋಲಿಸಿದಂತಿಲ್ಲ. ವಾರ್ಷಿಕ ಹಬ್ಬ ಆಚರಣೆ ಮಾಡಬೇಕು, ಹಿಂದು ಪಂಚಾಗದ ಮೊದಲ ಹಬ್ಬ ಆಚರಿಸಬೇಕು ಎಂಬ ಕಾರಣಕ್ಕಷ್ಟೆ ಜನರು ಮಾರುಕಟ್ಟೆಗೆ ತೆರಳುತ್ತಿದ್ದಾರೆ.
ಜನರ ಮನಸ್ಥಿತಿಯ ಮೇಲೆ ಪ್ರಕರಣ ಯಾವ ಬಗೆಯಲ್ಲಿ ಪರಿಣಾಮ ಬೀರಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಹೌದು ಇಡೀ ರಾಜ್ಯದಲ್ಲಿ ಡಿ.ಕೆ.ರವಿ ಸಾವು ಸೂತಕದ ವಾತಾವರಣಕ್ಕೆ ಕಾರಣವಾಗಿದೆ. ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿ ಸೋದರತ್ತೆ ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ.[ಡಿಕೆ ರವಿ ಕೇಸ್: ಸಿಐಡಿ ತನಿಖೆ ಎತ್ತ ಸಾಗಿದೆ?ಯಾರು ಟಾರ್ಗೆಟ್]
ರವಿ ಕುಟುಂಬ ಮಾತ್ರವಲ್ಲ ಇಡೀ ರಾಜ್ಯ ದುಖಃದಲ್ಲಿ ಮುಳುಗಿದ್ದು ಎಲ್ಲೆರದ್ದೂ ಒಂದೇ ಆಗ್ರಹ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ. ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡುತ್ತದೆಯೋ, ಬಿಡುತ್ತದೆಯೋ ಗೊತ್ತಿಲ್ಲ. ಜನರ ಹಕ್ಕೋತ್ತಾಯ ಮಾತ್ರ ಜೋರಾಗುತ್ತಲೇ ಇದೆ. ಸಂಭ್ರಮದಿಂದ ಯುಗಾದಿ ಆಚರಿಸಬೇಕಿದ್ದ ಜನತೆ ಸಿಬಿಐ ತನಿಖೆಗೆ ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿದೆ.