ಲೀಲಾ ಪ್ಯಾಲೇಸ್ ನನ್ನ ಒಡೆತನದ್ದು ಅಂತಿದ್ರು : ದೇವೇಗೌಡ
20ವರ್ಷದ ಹಿಂದೆ ಲೀಲಾ ಪ್ಯಾಲೇಸ್ ಹೋಟೆಲ್ ದೇವೇಗೌಡ್ರ ಒಡೆತನದ್ದು ಎಂದು ಸುದ್ದಿ ಹಬ್ಬಿಸಲಾಗಿತ್ತು. ಸುಳ್ಳುಸುದ್ದಿ ಹಬ್ಬಿಸಲು ಬಿಜೆಪಿಯವರು ನಿಸ್ಸೀಮರು, ದೇವೇಗೌಡ.
ಬೆಂಗಳೂರು, ಮೇ 26: ಸುಳ್ಳು ಅಪವಾದಕ್ಕೆಲ್ಲಾ ನಾನು ತಲೆಕೆಡೆಸಿಕೊಳ್ಳುವುದಿಲ್ಲ, ಕಾಂಗ್ರೆಸ್ ಮತ್ತು ಬಿಜೆಪಿಯವರ ಹೇಳಿಕೆಗಳಿಗೆ ಅವಶ್ಯಕತೆಯಿದ್ದಲ್ಲಿ ಮಾತ್ರ ನಾನು ಉತ್ತರಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಗುರುವಾರ (ಮೇ 25) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಗೌಡ್ರು, ಇಪ್ಪತ್ತು ವರ್ಷದ ಹಿಂದೆ ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್ ದೇವೇಗೌಡ್ರ ಒಡೆತನದ್ದು ಎಂದು ಸುದ್ದಿ ಹಬ್ಬಿಸಲಾಗಿತ್ತು. ಈ ರೀತಿಯ ಸುಳ್ಳುಸುದ್ದಿ ಹಬ್ಬಿಸಲು ಬಿಜೆಪಿಯವರು ನಿಸ್ಸೀಮರು ಎಂದು ಗೌಡ್ರು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆಯಲ್ಲಿ ನಮ್ಮ ಕುಟುಂಬದ ವಿರುದ್ದ ದಾಖಲಾದ ದೂರಿನ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸುವ ಅವಶ್ಯಕತೆ ಇರಲಿಲ್ಲ. ಇದಕ್ಕೆಲ್ಲಾ ತಲೆಕೆಡಿಸಿಕೊಂಡು ಕೂತರೆ ರಾಜಕಾರಣ ಮಾಡಲು ಸಾಧ್ಯವೇ ಎಂದು ಗೌಡ್ರು ಪ್ರಶ್ನಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ನಿಲ್ಲಿಸಬೇಕು ಎನ್ನುವ ಸೋನಿಯಾ ಗಾಂಧಿ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಶುಕ್ರವಾರ (ಮೇ 26) ಆಯೋಜಿಸಲಾಗಿರುವ ಸಭೆಗೆ ನಮ್ಮ ಪಕ್ಷದಿಂದ ಸಂಸದ ಪುಟ್ಟರಾಜು ಭಾಗವಹಿಸಲಿದ್ದಾರೆ.
ಅವಧಿಗೆ ಮುನ್ನ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನುವ ವಿಷಯ ಚರ್ಚೆಯಲ್ಲಿದೆ. ನಾವು ಯಾವಾಗ ಬೇಕಾದರು ಚುನಾವಣೆ ಎದುರಿಸಲು ಸಿದ್ದ ಎಂದು ಗೌಡ್ರು ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಶ್ರೀಮಂತ ಪಕ್ಷಗಳು, ಹಾಗಾಗಿ ಸಮೀಕ್ಷೆ ನಡೆಸುತ್ತಿವೆ. ನಮ್ಮದು ಬಡವರ ಪಕ್ಷ, ನಮಗೆ ಮತದಾರ ಮಾಡುವ ಆಶೀರ್ವಾದದ ಮೇಲೆ ನಂಬಿಕೆ ಜಾಸ್ತಿ ಎಂದು ಎಚ್ ಡಿ ದೇವೇಗೌಡ ಹೇಳಿದ್ದಾರೆ.