ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಲಂಚದ ಆಮಿಷ!
ಬೆಂಗಳೂರು, ಜುಲೈ, 06: ಅಧಿಕಾರಿಗಳ ಲಂಚದ ಪ್ರಕರಣ ಪ್ರತಿದಿನದ ಸುದ್ದಿ ಎಂಬಂತೆ ಆಗಿದೆ. ಆದರೆ ಇದೀಗ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹೇಳಿರುವ ಮಾತು ನ್ಯಾಯಾಂಗ ವ್ಯವಸ್ಥೆ ಬಗ್ಗೆ ಚರ್ಚೆ ಮಾಡುವಂತೆ ಮಾಡಿದೆ.
ಕಂಪನಿಯೊಂದರ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದ ವೇಳೆ ಲಂಚದ ಆಫರ್ ನೀಡಲಾಗಿತ್ತು ಎಂದು ನ್ಯಾಯಮೂರ್ತಿ ಹೇಳಿದ್ದಾರೆ.[ವಿಡಿಯೋ : ಲಂಚಕ್ಕಾಗಿ ಪೊಲೀಸರಿಂದ ನಡು ಬೀದಿ ಕಾಳಗ]
ಊಮ್ರಾ ಡೆವಲಪರ್ಸ್ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು. ಸರ್ಕಾರಕ್ಕೆ ಸೇರಿದ ಜಮೀನನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಇಲಾಖೆ ಡೆವಲಪರ್ಸ್ ವಿರುದ್ಧ ಮೊಕದ್ದಮೆ ದಾಖಲು ಮಾಡಿತ್ತು.
ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ವ್ಯಕ್ತಿಯೊಬ್ಬ ನನ್ನನ್ನು ಭೇಟಿ ಮಾಡಿ ಗುರುತಿನ ಚೀಟಿ ನೀಡಿ ಪರಿಚಯಿಸಿಕೊಂಡ. ಊಮ್ರಾ ಡೆವಲಪರ್ಸ್ ಪರ ನ್ಯಾಯಾಲಯದಲ್ಲಿ ತೀರ್ಪು ನೀಡಿದರೆ ನೀವು ಕೇಳಿದಷ್ಟು ಹಣ ನೀಡುವುದಾಗಿ ಹೇಳಿದ. ಆತ ಬೆಂಗಾಲಿಯಲ್ಲಿ ಮಾತನಾಡುತ್ತಿದ್ದ ಎಂದು ಮುಖರ್ಜಿ ಆತಂಕ ತೋಡಿಕೊಂಡಿದ್ದಾರೆ.[ಲಂಚದ ಡೀಲ್ ಮಾಡಲು ಹೋಗಿ ಸಿಕ್ಕಿಬಿದ್ದ ಮೈಸೂರಿನ ಡೀನಾ]
ಈ ಬಗ್ಗೆ ಪೊಲೀಸರಿಗೆ ದೂರು ನೀಡಬಹುದಿತ್ತು. ಆದರೆ ಈ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ ಎಂಬ ಕಾರಣಕ್ಕೆ ಮಾಧ್ಯಮಗಳ ಮುಂದೆ ಹೇಳುತ್ತಿದ್ದೇನೆ ಎಂದು ಮುಖರ್ಜಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಕೇರಳದ ಹೈಕೋರ್ಟ್ ನ್ಯಾಯಮೂರ್ತಿ ಕೆ.ಟಿ.ಶಂಕರನ್ ಕೂಡ ಇದೇ ರೀತಿ ಲಂಚ ನೀಡಲು ತಮ್ಮ ಬಳಿ ವ್ಯಕ್ತಿಯೊಬ್ಬರು ಬಂದಿದ್ದರೆಂದು ಬಹಿರಂಗಪಡಿಸಿದ್ದರು. ಒಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಗೂ ಲಂಚದ ಕೆಸರು ನಿಧಾನವಾಗಿ ಮೆತ್ತಿಕೊಳ್ಳುತ್ತಿದೆ.