ಬದುಕಿರುವವರೆಗೆ ಸಹೋದರ ರೇವಣ್ಣನ ಜೊತೆ ಜಗಳವಾಡಲ್ಲ: ಕುಮಾರಸ್ವಾಮಿ
ಕಳೆದ ಪಂಚಾಯತಿ ಚುನಾವಣೆಯಲ್ಲಿ ಅಲ್ಪ ಹಿನ್ನಡೆಯ ನಂತರ ಕಾರ್ಯಕರ್ತರ ಉತ್ಸಾಹ ಕುಂದಿದೆ. ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರಿಗೆ ಕಿಚ್ಚು ಹಚ್ಚುವ ಸಲುವಾಗಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಪಕ್ಷದ ಟಿಕೆಟಿನಿಂದ ವಿಜೇತರಾದ ಪಂಚಾಯತ್ ಸದಸ್ಯರನ್ನು ಅಭಿನಂದಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಸಹೋದರ ರೇವಣ್ಣನ ಜೊತೆ ಬದುಕಿರುವವರೆಗೆ ಜಗಳವಾಡುವುದಿಲ್ಲ ಎಂದು ವಾಗ್ದಾನ ಮಾಡಿದ್ದಾರೆ. (ವಿಜಯ್ ಮಲ್ಯ ಮಣ್ಣಿನ ಮಗ)
ನನ್ನ ಮತ್ತು ರೇವಣ್ಣನ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಕುಟುಂಬದಲ್ಲಿ ನಾವೆಲ್ಲಾ ಸಹೋದರರು ಅನ್ಯೋನ್ಯವಾಗಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕಳೆದ ಪಂಚಾಯತ್ ಚುನಾವಣೆಯ ವೇಳೆ ಹಾಸನ ಜಿಲ್ಲೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ, ಕುಮಾರಸ್ವಾಮಿ ಮತ್ತು ರೇವಣ್ಣ ನಡುವೆ ಮನಸ್ತಾಪವಾಗಿದೆ ಎನ್ನುವ ಸುದ್ದಿಗೆ ಸ್ಪಷ್ಟೀಕರಣ ನೀಡಿ ಕುಮಾರಸ್ವಾಮಿ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. (ಎಚ್ಡಿಕೆಗೆ ಡಿಕೆಶಿ ಕಿವಿಮಾತು)
ಕಾರ್ಯಕರ್ತರು ಮತ್ತು ಮುಖಂಡರಲ್ಲಿ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ ರಾಜಕೀಯ ಸನ್ಯಾಸದ ಬಗ್ಗೆ ಮಾತನಾಡಿದ್ದೇನೆಯೇ ಹೊರತು, ಬೇರೆ ಯಾವುದೇ ಉದ್ದೇಶದಿಂದಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ. ಗೌಡ್ರಿಗೆ ಫೋನ್ ಮಾಡಿದ ಜಮೀರ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಜೆಡಿಎಸ್ ಸ್ಪಷ್ಟ ನಿಲುವು
ಅತಂತ್ರವಾಗಿರುವ ಪಂಚಾಯತಿಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಜೆಡಿಎಸ್ ಸ್ಪಷ್ಟ ನಿಲುವನ್ನು ಹೊಂದಿದೆ. ನಾವು ಹೊಂದಾಣಿಕೆಗೆ ಸಿದ್ದವಾಗಿದೆ, ಆದರೆ ನಾವಾಗಿಯೇ ಯಾರ ಮನೆಬಾಗಿಲಿಗೂ ಹೋಗುವುದಿಲ್ಲ - ಕುಮಾರಸ್ವಾಮಿ.
ಸಹೋದರ ರೇವಣ್ಣ ಜೊತೆ ಅನ್ಯೋನ್ಯವಾಗಿದ್ದೇನೆ
ನಾನು ಮತ್ತು ಸಹೋದರ ರೇವಣ್ಣ ಅನ್ಯೋನ್ಯವಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ರೇವಣ್ಣ ಅವರ ಪತ್ನಿ ಅಥವಾ ಮಗ ರಾಜಕೀಯ ಪ್ರವೇಶಿಸಿದ್ದಕ್ಕೆ ನನ್ನ ಯಾವುದೇ ತಕರಾರಿರಲಿಲ್ಲ - ಕುಮಾರಸ್ವಾಮಿ.
ರಾಜಕೀಯ ಸನ್ಯಾಸ
ಕೆಲವರಿಗೆ ನನ್ನ ರಾಜಕೀಯ ಸನ್ಯಾಸದ ಹೇಳಿಕೆಯಿಂದ ಸಂತೋಷವಾಗಿರಬಹುದು. ಇಂದು ಅವರು ಅಧಿಕಾರದಲ್ಲಿದ್ದಾರೆ, ಹಾಗಾಗಿ ಆ ದರ್ಪದಿಂದ ವ್ಯಂಗ್ಯವಾಡುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ನೋ ಕಮೆಂಟ್ಸ್
ಪಕ್ಷದ ಹಿರಿಯ ಮುಖಂಡರಾದ ಬಾಲಕೃಷ್ಣ, ಚೆಲುವರಾಯಸ್ವಾಮಿ, ಜಮೀರ್, ಪುಟ್ಟಣ್ಣ ಸೇರಿದಂತೆ ಹಲವು ಮುಖಂಡರು ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಕುಮಾರಸ್ವಾಮಿ ' ನೋ ಕಮೆಂಟ್ಸ್' ಅಂದಿದ್ದಾರೆ.
ದೇವೇಗೌಡ ಹೇಳಿಕೆ
ಪಕ್ಷಕ್ಕೆ ಟಾನಿಕ್ ನೀಡುವ ಕೆಲಸವಾಗ ಬೇಕಾಗಿದೆ. ಜಮೀರ್ ಮುನಿಸಾಗಿರುವುದಕ್ಕೆ ಸದ್ಯದಲ್ಲೇ ಪರಿಹಾರ ಸಿಗಲಿದೆ. ಜಮೀರ್ ನನಗೆ ಫೋನ್ ಮಾಡಿ ನಿಮ್ಮಲ್ಲಿ ಮಾತನಾಡಬೇಕು ಎಂದಿದ್ದಾರೆ. ಸಂಸತ್ತಿನ ಅಧಿವೇಶನ ಮುಗಿದ ನಂತರ ಮಾತುಕತೆಗೆ ಬರುವಂತೆ ತಿಳಿಸಿದ್ದೇನೆಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.