ಅಡ್ಜಸ್ಟ್ ಮೆಂಟ್ ರಾಜಕಾರಣ ಗೊತ್ತಿಲ್ಲದ ನಾನು 4 ವರ್ಷ ಜೈಲು ಸೇರಿದೆ: ರೆಡ್ಡಿ
ನನಗೆ ಅಡ್ಜಸ್ಟ್ ಮೆಂಟ್ ರಾಜಕಾರಣ ಗೊತ್ತಿಲ್ಲದೆ ಜೈಲು ಸೇರುವಂತಾಯಿತು ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಕೆಜಿಎಫ್ ನಲ್ಲಿ ಶುಕ್ರವಾರ ಮಾತನಾಡಿದ್ದಾರೆ. ಅದೇನು ಮಾತನಾಡಿದರು ಎಂಬುದರ ಪೂರ್ತಿ ವಿವರ ಓದಲು ಈ ಲೇಖನ ಓದಿ
ಕೆಜಿಎಫ್, ಮೇ 6: ನಾನು ಯಾರ ದುಡ್ಡೂ ಹೊಡೆದಿಲ್ಲ, ಯಾರ ಜೇಬಿಗೂ ಕೈಯಿಟ್ಟಿಲ್ಲ. ನ್ಯಾಯವಾದ ಸಂಪಾದನೆಯಿಂದ ದುಡಿದಿದ್ದೀನಿ. ಇಪ್ಪತ್ತೈದು ವರ್ಷದ ಹಿಂದೆಯೇ ಐದಂತಸ್ತಿನ ಕಟ್ಟಡ ಕಟ್ಟಿ ವ್ಯಾಪಾರ ಮಾಡಿಕೊಂಡಿದ್ದವನು ನಾನು. ಶ್ರೀರಾಮುಲು ಅವರು ಮಾತ್ರ ರಾಜಕೀಯದಲ್ಲಿ ಇದ್ದರು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಇಲ್ಲಿ ಶುಕ್ರವಾರ ಹೇಳಿದರು.
ಬಳ್ಳಾರಿಯಲ್ಲಿ ಸುಷ್ಮಾ ಸ್ವರಾಜ್ ಅವರು ಚುನಾವಣೆಗೆ ನಿಲ್ತಾರೆ ಅಂತಾದಾಗ ಅವರಿಗೆ ಯಾರೋ ಹೇಳಿದರಂತೆ ಜನಾರ್ದನ ರೆಡ್ಡಿಯನ್ನು ಹಿಡಿಯಿರಿ, ನೀವು ಗೆಲ್ತೀರಾ ಅಂತ. ಅವರು ನನ್ನನ್ನು ರಾಜಕೀಯಕ್ಕೆ ಕರೆತಂದರು. ಆಗ ನನ್ನ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಕ್ರದೃಷ್ಟಿ ಬಿತ್ತು ಎಂದರು.[ಜನಾ ರೆಡ್ಡಿಗೆ 100 ಕೋಟಿ ಅರೇಂಜ್ ಮಾಡಿದ್ದು ಭೀಮಾ ನಾಯ್ಕ್, ಹೌದೇ?]
2006ರಲ್ಲಿ ದೇವೇಗೌಡರ ಕುಟುಂಬದ ವಿರೋಧ ಕಟ್ಟಿಕೊಂಡೆ. ಈ ಎಲ್ಲ ಕಾರಣದಿಂದಾಗಿ ನಾನು ಬಂಧನದಲ್ಲಿರ ಬೇಕಾಯಿತು. ಏನು ಮಾಡಲಿ, ನನಗೆ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡುವುದಕ್ಕೆ ಬರಲಿಲ್ಲ. ಆದ್ದರಿಂದಲೇ ಇಷ್ಟೆಲ್ಲ ಅನುಭವಿಸಬೇಕಾಯಿತು ಎಂದು ಜನಾರ್ದನ ರೆಡ್ಡಿ ಮಾತನಾಡಿದರು.
ಮೊದಲಿಗೆ ಮುಳಬಾಗಿಲಿನ ಗಂಗಮ್ಮನ ಗುಡಿ ದೇಗುಲಕ್ಕೆ ತೆರಳಿದ ಜನಾರ್ದ್ನ ರೆಡ್ಡಿ, ಆ ನಂತರ ಮಾಜಿ ಮುಖ್ಯಮಂತ್ರಿ ಕೆಸಿ ರೆಡ್ಡಿ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ನಮನ ಸಲ್ಲಿಸಿದರು. ಅದಾದ ಮೇಲೆ ರೆಡ್ಡಿ ಜನಾಂಗದವರನ್ನು ಉದ್ದೇಶಿಸಿ ಕೆಜಿಎಫ್ ನಲ್ಲಿ ಮಾತನಾಡಿದರು.