ಅಸ್ತಿಕ-ನಾಸ್ತಿಕ: ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ
ಸ್ವಗ್ರಾಮ ಸಿದ್ದರಾಮನಹುಂಡಿಯ ದೊಡ್ಡ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಗುಡ್ ಫ್ರೈಡೆಯ (ಮಾ 25) ದಿನದಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ನಾನು ಜನರ ಭಾವನೆಯ ವಿರುದ್ದವಾಗಿ ಹೋಗುವುದಿಲ್ಲ, ನಾನು ನಾಸ್ತಿಕನಲ್ಲ ಎಂದು ಈ ಹಿಂದೆ ಕೂಡಾ ಹೇಳಿದ್ದೆ. ಈಗ ಮತ್ತೊಮ್ಮೆ ಈ ವಿಷಯವನ್ನು ಸ್ಪಷ್ಟ ಪಡಿಸುತ್ತಿದ್ದೇನೆ, ಜನರಲ್ಲೂ ದೇವರನ್ನು ಕಾಣುವವನು ನಾನು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. (ಹುಟ್ಟೂರ ಜಾತ್ರೆಯಲ್ಲಿ ಸಿಎಂ ಸಿದ್ದು)
ದೇವಸ್ಥಾನದ ಜೀರ್ಣೋದ್ಧಾರದ ಹಿನ್ನಲೆಯಲ್ಲಿ ಐದು ವರ್ಷದ ನಂತರ ನಡೆಯುತ್ತಿರುವ ಸಿದ್ದರಾಮೇಶ್ವರ, ಚಿಕ್ಕಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಕೂಡಾ ಲವಲವಿಕೆಯಿಂದ ಪಾಲ್ಗೊಂಡು ಮಾತನಾಡುತ್ತಿದ್ದ ಸಿದ್ದರಾಮಯ್ಯ, ನಾನು ಮೂಢನಂಬಿಕೆಯ ವಿರೋಧಿ ಎಂದು ಹೇಳಿದ್ದಾರೆ.
ಕೆಲವೊಂದು ಮೂಢನಂಬಿಕೆಗಳನ್ನು ಸರಕಾರ ನಿಷೇಧ ಮಾಡಲು ಹೊರಟಿರುವುದು ನಿಜ, ಇದರ್ಥ ನಾನು ದೇವರನ್ನು ನಂಬುವುದಿಲ್ಲ ಎನ್ನುವ ಸುದ್ದಿ ತಪ್ಪು ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. (ಎಸಿಬಿ ವಿವಾದ, ಸೋನಿಯಾಗೆ ಪತ್ರ)
ಮುಖ್ಯಮಂತ್ರಿಯಾಗಿ ಪ್ರಪ್ರಥಮ ಬಾರಿಗೆ ನನ್ನ ಊರಿನ ದೇವಾಲಯದ ಜಾತ್ರೆಯಲ್ಲಿ ಪಾಲ್ಗೊಳ್ಳುವುದೆಂದರೆ ವಿಶೇಷ ಅನುಭವ. ಈ ಹಿಂದೆ ಕೂಡಾ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೌಢ್ಯ, ಮೂಢನಂಬಿಕೆ ಬಗ್ಗೆ ಸಿದ್ದು, ಸ್ಲೈಡಿನಲ್ಲಿ ಓದಿ..
ಹುಟ್ಟೂರು ಜಾತ್ರೆ
ಮೈಸೂರು ತಾಲೂಕಿನ ಸ್ವಗ್ರಾಮ ಸಿದ್ದರಾಮಯ್ಯನಹುಂಡಿಯ 'ಸಿದ್ದರಾಮೇಶ್ವರಸ್ವಾಮಿ ಜಾತ್ರೆ' ಯಲ್ಲಿ ಭಾಗವಹಿಸಲು ಗುರುವಾರವೇ ಮುಖ್ಯಮಂತ್ರಿಗಳು ಹುಟ್ಟೂರಿಗೆ ಆಗಮಿಸಿದ್ದರು. ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ, ದೇವಾಲಯದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದರಿಂದ ಐದು ವರ್ಷದ ನಂತರ ನಡೆಯುತ್ತಿದೆ.
ಸಿದ್ದರಾಮಯ್ಯ ಹೇಳಿದ್ದು
ನಾನು ನಾಸ್ತಿಕನಲ್ಲ ದೇವರ ಮೇಲೆ ನಂಬಿಕೆಯಿದೆ. ಆದರೆ ದೇವರನ್ನು ಹುಡುಕಿಕೊಂಡು ಎಲ್ಲೂ ಹೊಗುವುದಿಲ್ಲ. ಬೆಳಗಿನಿಂದ ಪಾಪ ಕೃತ್ಯಗಳನ್ನು ಮಾಡಿ ಸಂಜೆ ದೇವಾಲಯಕ್ಕೆ ತೆರಳಿ ಕೈ ಮುಗಿದರೆ ದೇವರು ಕ್ಷಮಿಸಿ ಬಿಡುವುದಿಲ್ಲ - ಸಿದ್ದರಾಮಯ್ಯ
|
ಮೂಢನಂಬಿಕೆ
ಮೂಢನಂಬಿಕೆ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆದಿದೆ, ಈಗಾಗಲೇ ಕೊಂಡ ಹಾಯುವ ಪದ್ಧತಿ ನಿಷೇಧದ ಬಗ್ಗೆ ಚರ್ಚೆ ನಡೆಯುತ್ತಿದೆ ಸದ್ಯದಲ್ಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ - ಸಿದ್ದರಾಮಯ್ಯ
ಎಸಿಬಿ ಬಗ್ಗೆ ಸಿಎಂ ಸ್ಪಷ್ಟನೆ
ಎಸಿಬಿ ಈಗಾಗಲೇ ದೇಶದ 15 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಎಸಿಬಿ ರಚನೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಹಾಗಾಗಿ ಎಸಿಬಿ ರಚನೆಯಿಂದ ಲೋಕಾಯುಕ್ತಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ.
ಲೋಕಾಯುಕ್ತ ಮಾದರಿ
ಲೋಕಾಯುಕ್ತದ ಒಂದು ಅಕ್ಷರವನ್ನು ಸಹ ಬದಲಿಸದೆ ಅದೇ ಮಾದರಿಯಲ್ಲಿ ಲೋಕಾಯುಕ್ತ ಕಾಯ್ದೆಯಲ್ಲಿರುವ ಒಂದೇ ಒಂದು ಅಂಶವನ್ನೂ ಬದಲಾಯಿಸುವುದಿಲ್ಲ. ಈ ಬಗ್ಗೆ ಸ್ವಪಕ್ಷದವರಿಗೆ, ಶಾಸಕರಿಗೆ ಮನವರಿಕೆ ಮಾಡುತ್ತೇನೆ, ಪಕ್ಷದ ಹೈಕಮಾಂಡ್ಗೆ ವರದಿ ರವಾನಿಸಿದ್ದು, ಅದರಲ್ಲಿ ಎಸಿಬಿ ರಚನೆ ಅಗತ್ಯವನ್ನು ಒತ್ತಿ ಹೇಳಿದ್ದಾಗಿ ತಿಳಿಸಿದ್ದಾರೆ - ಸಿದ್ದರಾಮಯ್ಯ
ಬೆಂಕಿ ಅವಘಡ
ಸಿಎಂ ಸ್ವಗ್ರಾಮ ಸಿದ್ದರಾಮನಹುಂಡಿಯ ಸಿದ್ದರಾಮೇಶ್ವರಸ್ವಾಮಿ ಜಾತ್ರೆಯಲ್ಲಿ ದೇವರ ರಕ್ಷಣಾ ಛತ್ರಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಹುಲ್ಲಿನ ಮೆದೆಯಿಂದ ಪೂಜೆ ಮಾಡುವ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಸಂಭವಿಸಬೇಕಿದ್ದ ಭಾರಿ ಅನಾಹುತ ತಪ್ಪಿದೆ. ಎಚ್ಚರ ಗೊಂಡ ಗ್ರಾಮಸ್ಥರು ತಕ್ಷಣ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.