ಕೆಪಿಸಿಸಿ ಅಧ್ಯಕ್ಷ ಹುದ್ದೆ: ಹೈಕಮಾಂಡ್ ತಲೆಗೆ ಹುಳಬಿಟ್ಟ ಹಿರಿಯ ಸಚಿವ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಕೂಡಾ ಆಕಾಂಕ್ಷಿ, ಹಿರಿಯ ಸಚಿವ ರಮೇಶ್ ಕುಮಾರ್ ಹೇಳಿಕೆ.
ಹಾಸನ, ಮೇ 19: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂದು ತಲೆಕೆಡೆಸಿಕೊಂಡಿರುವ ಕಾಂಗ್ರೆಸ್ ಹೈಕಮಾಂಡಿಗೆ, ಹಿರಿಯ ಮುಖಂಡ ಮತ್ತು ಸಚಿವ ರಮೇಶ್ ಕುಮಾರ್ ಹೇಳಿಕೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.
ನಗರದಲ್ಲಿ ಶುಕ್ರವಾರ (ಮೇ 19) ಮಾತನಾಡುತ್ತಿದ್ದ ಅರೋಗ್ಯ ಸಚಿವ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಕೂಡಾ ಆಕಾಂಕ್ಷಿ ಎಂದು ಹೇಳಿದ್ದಾರೆ.
ನಾನೂ ಆ ಹುದ್ದೆಗೇರಬೇಕೆಂದು ಆಸೆ ಇಟ್ಟುಕೊಂಡವನು. ಹೈಕಮಾಂಡ್ ಆ ಹುದ್ದೆಯನ್ನು ನನಗೆ ನೀಡಿದರೆ ಸಮರ್ಥವಾಗಿ ಆ ಸ್ಥಾನವನ್ನು ನಿಭಾಯಿಸಬಲ್ಲೆ ಎಂದು ರಮೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಬಗ್ಗೆ ಮಾತನಾಡುತ್ತಿದ್ದ ರಮೇಶ್ ಕುಮಾರ್, ಅಧಿಕಾರಿಯ ಸಾವಿನ ಬಗ್ಗೆ ನಮಗೂ ನೋವಿದೆ. ಆದರೆ ಬಿಜೆಪಿ ಇಂತಹ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.
ಬಿಜೆಪಿಯವರೂ ರಾಜ್ಯದಲ್ಲಿ ಅಧಿಕಾರ ನಡೆಸಿದವರು. ಹಾಗಾಗಿ ಕೆಲವೊಂದು ಸೂಕ್ಷ್ಮ ವಿಚಾರದ ಬಗ್ಗೆ ಪ್ರತಿಕ್ರಿಯಿಸುವಾಗ ಜಾಗೃತೆಯಿಂದ ಇರುವುದು ಒಳಿತು ಎಂದು ಸಚಿವ ರಮೇಶ್ ಕುಮಾರ್, ಬಿಜೆಪಿ ಮುಖಂಡರಿಗೆ ಬುದ್ದಿಮಾತನ್ನು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಸುತ್ತ ಕಳೆದ ಕೆಲವು ವರ್ಷಗಳಿಂದ ಹೊಸ ಹೊಸ ಊಹಾಪೋಹ ಸುದ್ದಿಗಳು ಹೊರಬೀಳುತ್ತಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಇದುವರೆಗೂ ಆಯಕಟ್ಟಿನ ಈ ಹುದ್ದೆಗೆ ಇನ್ನೂ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ.
ಕಳೆದ ಮೂರು ತಿಂಗಳಿನಿಂದ ಲಿಂಗಾಯತ, ಒಕ್ಕಲಿಗ, ದಲಿತ ಮುಖಂಡರು ಈ ಹುದ್ದೆ ಮೇಲೆ ಕಣ್ಣಿಟ್ಟು ಲಾಬಿ ನಡೆಸುತ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಡಾ ಪರಮೇಶ್ವರ್, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್, ಎಸ್ ಆರ್ ಪಾಟೀಲ್ ಸೇರಿದಂತೆ ಹಲವು ಮುಖಂಡರ ಹೆಸರುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಈಗ ಬ್ರಾಹ್ಮಣ ಸಮುದಾಯದ ರಮೇಶ್ ಕುಮಾರ್ ಆ ಹುದ್ದೆಯ ಆಕಾಂಕ್ಷಿಯೆಂದು ಹೇಳಿರುವುದು ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದಂತಾಗಿದೆ.
{promotion-urls}