ಕನಕಪುರದಲ್ಲಿ ಬಾವಲಿ, ಮೊಲ ಬೇಟೆಯಾಡುತ್ತಿದ್ದವರ ಬಂಧನ
ಕನಕಪುರ, ಮಾರ್ಚ್ 13: ವನ್ಯ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರನೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗಂಗಾಧರನ ಗುಡ್ಡೆಯ ಮೀಸಲು ಕರಿಕಲ್ ಗುಡ್ಡದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕನಕಪುರ ಮೇಳೆ ಕೋಟೆ ನಿವಾಸಿ ವೆಂಕಟೇಗೌಡ ಬಂಧಿತ ಆರೋಪಿ. ಜತೆಗಿದ್ದ ಮತ್ತೊಬ್ಬ ರಾಜುಗೌಡ ಕಾರ್ಯಾಚರಣೆ ಸಂದರ್ಭ ತಪ್ಪಿಸಿಕೊಂಡಿದ್ದಾನೆ.
ಇವರಿಬ್ಬರು ಕರಿಕಲ್ ಗುಡ್ಡ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಬಾವಲಿ ಮತ್ತು ಮೊಲಗಳನ್ನು ಬೇಟೆಯಾಡುತ್ತಿದ್ದರು. ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜುಗೌಡ ಮತ್ತು ವೆಂಕಟೇಗೌಡ ತಾವು ಬೇಟೆಯಾಡಿದ ಪ್ರಾಣಿಗಳೊಂದಿಗೆ ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಆದರೆ, ವೆಂಕಟೇಗೌಡನನ್ನು ಅರಣ್ಯ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ದು, ರಾಜುಗೌಡ ತಪ್ಪಿಸಿಕೊಂಡಿದ್ದಾನೆ. ಸೆರೆಸಿಕ್ಕ ವೆಂಕಟೇಗೌಡನಿಂದ ಎರಡು ಕುಡುಗೋಲು, ಒಂದು ಆಟೋ ಹಾಗೂ ಟಿವಿಎಸ್ ಎಕ್ಸೆಲ್ ಬೈಕ್, 15 ಮೀಟರ್ ಉದ್ದವುಳ್ಳ ಬಲೆಯನ್ನು ವಶಡಿಸಿಕೊಂಡಿದ್ದಾರೆ.
ವೆಂಕಟೇಗೌಡನ ವಿರುದ್ಧ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯಿದೆ 1963ರ ಅನ್ವಯ ಕಲಂ 24(ಜೆ), 71(ಎ), ವನ್ಯಜೀವಿ ಸಂರಕ್ಷಣಾ ಕಾಯಿದೆ 2/16,32,35,9, 48ಎ. 50, 55,ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ಆರೋಪಿ ರಾಜುಗೌಡನ ಪತ್ತೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಜಿ.ವೆಂಕಟೇಶ್, ವಲಯ ಅರಣ್ಯಾಧಿಕಾರಿ ದಿನೇಶ್, ಉಪ ವಲಯ ಅರಣ್ಯಾಧಿಕಾರಿ ಚಂದ್ರನಾಯಕ್, ಅರಣ್ಯ ರಕ್ಷಕರಾದ ಧರ್ಮ, ಶಿವರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.