ವಾಚ್ ವಿವಾದ : ಎಸಿಬಿಯಿಂದ ಗಿರೀಶ್ ಚಂದ್ರ ವರ್ಮಾ ವಿಚಾರಣೆ
ಬೆಂಗಳೂರು, ಜೂನ್ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಜ್ರ ಖಚಿತ ಉಬ್ಲೋ ವಾಚ್ ಉಡುಗೊರೆಯಾಗಿ ನೀಡಿದ್ದ ಡಾ.ಗಿರೀಶ್ ಚಂದ್ರ ವರ್ಮಾ ಅವರನ್ನು ಎಸಿಬಿ ವಿಚಾರಣೆ ನಡೆಸಿದೆ. ವಾಚ್ಗೆ ಸಂಬಂಧಿಸಿದಂತೆ ದಾಖಲೆಗಳನ್ನು ಅವರು ನೀಡಿದ್ದಾರೆ.
ಬುಧವಾರ ಬೆಂಗಳೂರಿನ ಖನಿಜ ಭವನದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಯಲ್ಲಿ 2 ತಾಸಿಗೂ ಹೆಚ್ಚು ಕಾಲ ಡಾ.ಗಿರೀಶ್ ಚಂದ್ರ ವರ್ಮಾ ವಿಚಾರಣೆ ನಡೆದಿದೆ. ಸಿದ್ದರಾಮಯ್ಯ ಅವರಿಗೆ ವಾಚ್ ಅನ್ನು ತಾವೇ ಉಡುಗೊರೆಯಾಗಿ ನೀಡಿದ್ದಾಗಿ ಅವರು ವಿಚಾರಣೆ ವೇಳೆ ಹೇಳಿದ್ದಾರೆ. [ಉಬ್ಲೋ ವಾಚ್ ಬಗ್ಗೆ ಎಸಿಬಿಗೆ ಮೊದಲ ದೂರು!]
'ಸಿದ್ದರಾಮಯ್ಯ ಅವರು 15 ವರ್ಷಗಳಿಂದ ಪರಿಚಿತರು. ಸ್ನೇಹ, ಆತ್ಮೀಯತೆಯಿಂದಾಗಿ ವಾಚ್ ಉಡುಗೊರೆ ನೀಡಲಾಗಿದೆ. ಯಾವುದೇ ಕೆಲಸ ಮಾಡಿಸಿಕೊಳ್ಳಲು ವಾಚ್ ಕೊಟ್ಟಿಲ್ಲ. ಕರ್ನಾಟಕದಲ್ಲಿ ತಮ್ಮ ಯಾವುದೇ ವ್ಯವಹಾರವಿಲ್ಲ' ಎಂದು ಅವರು ಎಸಿಬಿ ಅಧಿಕಾರಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ' ಎಂದು ತಿಳಿದುಬಂದಿದೆ. [ದುಬಾರಿ ಉಬ್ಲೋ ವಾಚುಗಳ ಕಥೆ]
ನೋಟಿಸ್ ನೀಡಲಾಗಿತ್ತು : ಎಸಿಬಿ ಸ್ಥಾಪನೆಯಾದ ಬಳಿಕ ಮೊದಲ ದೂರು ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿತ್ತು. ವಕೀಲ ನಟರಾಜ್ ಶರ್ಮಾ ಅವರು ಸಿದ್ದರಾಮಯ್ಯ ಅವರ ವಜ್ರ ಖಚಿತ ಉಬ್ಲೋ ವಾಚ್ನ ಮೂಲ ಯಾವುದು ಎಂದು ತನಿಖೆಯಾಗಬೇಕು? ಎಂದು ದೂರು ಕೊಟ್ಟಿದ್ದರು. [ವಾಚ್ ವಿವಾದ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ]
ದೂರಿನ ಅನ್ವಯ ಎಸಿಬಿ ಎಸಿಪಿ ವೇಣುಗೋಪಾಲ್ ಅವರು ದುಬೈನಲ್ಲಿ ನೆಲೆಸಿರುವ ಡಾ.ಗಿರೀಶ್ ಚಂದ್ರ ವರ್ಮಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಆನ್ಲೈನ್ ಮೂಲಕ ನೋಟಿಸ್ ಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಬುಧವಾರ ಅವರು ಎಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.
ಎಸಿಬಿಯಲ್ಲಿ ತಮ್ಮ ವಿರುದ್ಧ ದೂರು ದಾಖಲಾದಾಗ, 'ಎಸಿಬಿಯಲ್ಲಿ ದೂರು ತೆಗೆದುಕೊಳ್ಳುವುದಿಲ್ಲ ಎಂದು ಕೆಲವರು ಆರೋಪಿಸುತ್ತಿದ್ದರು. ವಾಚ್ ಪ್ರಕರಣದ ಬಗ್ಗೆ ಎಸಿಬಿಯಲ್ಲಿ ದಾಖಲಾದ ದೂರಿನ ಬಗ್ಗೆ ತನಿಖೆಯಾಗಲಿ' ಎಂದು ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಕೊಟ್ಟಿದ್ದರು.
ವಾಚ್ ಸರ್ಕಾರದ ಆಸ್ತಿ : ಸಿದ್ದರಾಮಯ್ಯ ಅವರ ಕೈಯಲ್ಲಿ ವಜ್ರ ಖಚಿತ ಊಬ್ಲೋ ವಾಚ್ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ಆರೋಪ ಮಾಡಿದ್ದರು. ನಂತರ ರಾಜ್ಯದಲ್ಲಿ ವಾಚ್ ವಿವಾದದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಮಾರ್ಚ್ 2ರಂದು ಸಿದ್ದರಾಮಯ್ಯ ಅವರು ವಾಚ್ ಅನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದ್ದರು, ಈಗ ವಾಚ್ ಸರ್ಕಾರದ ಆಸ್ತಿ.