ಕಳಸಾ ಬಂಡೂರಿ ಅನುಷ್ಠಾನಕ್ಕೆ ಒತ್ತಾಯಿಸಿ ರೊಟ್ಟಿ ಚಳವಳಿ
ಹುಬ್ಬಳ್ಳಿ, ನವೆಂಬರ್, 27: ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಊರಿಂದ ಊರಿಗೆ ಪಾದಯಾತ್ರೆ ಮಾಡಾಯ್ತು, ಖಾಲಿ ಕೊಡಗಳ ಹೊತ್ತು ನಡೆದಾಯ್ತು, ದೊಡ್ಡ ದೊಡ್ಡ ಬ್ಯಾನರ್ ಹಿಡಿದು ಅಧಿಕಾರಿಗಳಿಗೆ ಮನವಿ ಇರಿಸಲಾಯ್ತು. ಇವೆಲ್ಲವುಗಳಿಗಿಂತ ವಿಭಿನ್ನವಾದ ಚಳುವಳಿ ರೊಟ್ಟಿ ಚಳವಳಿಯನ್ನು ಹುಬ್ಬಳ್ಳಿ ಜನ ಆರಂಭಿಸಿದ್ದಾರೆ.
ಪ್ರವೀಣ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶುಕ್ರವಾರ ರೊಟ್ಟಿ ಚಳವಳಿ ಹಮ್ಮಿಕೊಂಡಿದ್ದು, ನಗರದ ಹಲವಾರು ಸಂಘಟನೆಗಳು ಈ ಚಳುವಳಿಯಲ್ಲಿ ಪಾಲ್ಗೊಂಡು ಕಳಸಾ ಬಂಡೂರಿ ಯೋಜನೆಯನ್ನು ಶೀಘ್ರವೇ ಅನುಷ್ಟಾನಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.[ಏನಿದು ಕಳಸಾ-ಬಂಡೂರಿ ಯೋಜನೆ?]
ಏನಿದು ರೊಟ್ಟಿ ಚಳುವಳಿ:
ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಲು ನಿರ್ಧರಿಸಿದ ನಗರದ ಹಲವಾರು ಸಂಘಟನೆಗಳ ಕಾರ್ಯಕರ್ತರು ಮನೆಯಿಂದ ರೊಟ್ಟಿ ತಂದಿದ್ದಾರೆ. ಬಳಿಕ ತಂದ ರೊಟ್ಟಿ, ಚಟ್ನಿ, ಪಲ್ಯವನ್ನು ಜನರಿಗೆ ವಿತರಿಸಿದ್ದಾರೆ. ತಂದ ರೊಟ್ಟಿ ತಿಂದು ಖಾಲಿಯಾದ ಬಳಿಕ ಕುಡಿಯಲು ನೀರಿಲ್ಲ. ಹಾಗಾಗಿ ಈ ಹೋರಾಟ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.[ಪ್ರಧಾನಿಗೆ ನೆತ್ತರಿನಲ್ಲಿ ಪತ್ರ ಬರೆದ ನರಗುಂದದ ರೈತರು]
ರಾಜಕೀಯದ ಆಟದಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ದೂರಿದ ಪ್ರತಿಭಟನಾಕಾರರು, ಮುಂದಿನ ಚುನಾವಣೆಯಲ್ಲಿ ಎಲ್ಲ ಜನ್ರಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಅಮಿತ ಡೇಂಬ್ರೆ, ಪ್ರವೀಣ ಗಾಯಕವಾಡ, ಶೈಲಶ್ರೀ ಪಾಟೀಲ, ವಿಕಾಸ ಸೊಪ್ಪಿನ, ಬಸವನಗೌಡ ಹೇಮನಗೌಡ್ರ ಮತ್ತು ನಗರದ ಹಲವಾರು ಸಂಘಟನೆಗಳ ಕಾರ್ಯಕರ್ತರು ಇನ್ನಿತರರು ಪಾಲ್ಗೊಂಡಿದ್ದರು.